ಕುಂದಾಪುರ: ಸ್ವಂತ ತಮ್ಮನೇ ಜಾಗದ ವಿಚಾರದಲ್ಲಿ ಮಕ್ಕಳ ಸಾಥ್ ಪಡೆದು ಅಣ್ಣನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಸಾವನ್ನಪ್ಪಿದ ಘಟನೆ ಕುಂದಾಪುರ ತಾಲೂಕಿನ ಹಳ್ಳಿಹೊಳೆ ಸಮೀಪದ ಕಮಲಶಿಲೆ ವ್ಯಾಪ್ತಿಯ ಭಟ್ಕಳಮಕ್ಕಿ ಎಂಬಲ್ಲಿ ನಡೆದಿದೆ.
(ಕೊಲೆಯಾದ ನಾರಾಯಣ ನಾಯ್ಕ್)
()
(ಬಂಧಿತ ಆರೋಪಿಗಳು)
ನಾರಾಯಣ ನಾಯ್ಕ್ (60) ತಮ್ಮ ಹಾಗೂ ತಮ್ಮನ ಮಕ್ಕಳಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿದ ದುರ್ದೈವಿ. ನಾರಾಯಣ ಅವರ ಕೊಲೆಗೆ ಕಾರಣರೆನ್ನಲಾದ ಕೊಲೆ ಆರೋಪಿಗಳಾದ ನಾಗರಾಜ ನಾಯ್ಕ್ ಮತ್ತು ಅವರ ಮಕ್ಕಳಾದ ಲಕ್ಷ್ಮೀಕಾಂತ ಹಾಗೂ ಚಂದ್ರಕಾಂತ ಎನ್ನುವವರನ್ನು ಬಂಧಿಸಲಾಗಿದೆ.
ಘಟನೆಯ ವಿವರ : ನೆರೆಕೆರೆಯಲ್ಲಿ ವಾಸವಿದ್ದ ಸಹೋದರರಾದ ನಾರಾಯಣ ನಾಯ್ಕ್ ಹಾಗೂ ನಾಗರಾಜ್ ನಾಯ್ಕ್ ನಡುವೆ ದಾರಿ ವಿಚಾರದಲ್ಲಿ ಮನಸ್ತಾಪವಿತ್ತು. ಮೇ.೫ರಂದು ನಾರಾಯಣ ಅವರು ತೋಟಕ್ಕೆ ನೀರು ಹಾಯಿಸುವಾಗ ಕ್ಷುಲ್ಲಕ ಕಾರಣಕ್ಕೆ ಅವರ ಸೋದರ ನಾಗರಾಜ ನಾಯ್ಕ್ ಹಾಗೂ ಅವರ ಮಕ್ಕಳು ಜಗಳಕ್ಕಿಳಿದಿದ್ದಾರೆ. ಈ ಹಿಂದಿನ ಸಿಟ್ಟನ್ನು ಆ ವೇಳೆ ಪ್ರದರ್ಶಿಸಿದ ನಾಗರಾಜ ನಾಯ್ಕ್ ಜಗಳವನ್ನು ವಿಪರೀತ ಮಾಡಿದ್ದು ಅದಕ್ಕೆ ಅವರ ಮಕ್ಕಳಾದ ಲಕ್ಷ್ಮೀಕಾಂತ ಮತ್ತು ಚಂದ್ರಕಾಂತ್ ಸಾಥ್ ಜಗಳಕ್ಕೆ ಇನ್ನಷ್ಟು ಪ್ರೋತ್ಸಾಹಿಸಿದ್ದಾರೆನ್ನಲಾಗಿದೆ. ಗಲಾಟೆಯ ನಡುವೆಯೇ ತೆಂಗಿನ ಗರಿಯ ಬಲವಾದ ಭಾಗದಿಂದ ನಾರಾಯಣ ನಾಯ್ಕ್ ಅವರ ತೊಡೆಗೆ ಹೊಡೆದು ಗಾಯಗೊಳಿಸಿದ್ದರು. ಗಾಯದ ಪರಿಣಾಮ ನಾರಾಯಣ ನಾಯ್ಕ್ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಾಸ್ಸಾಗಿದ್ದರು. ಅಲ್ಲದೇ ಪೊಲೀಸರಿಗೂ ಹಲ್ಲೆ ಬಗ್ಗೆ ದೂರು ನೀಡಿದ್ದರೆನ್ನಲಾಗಿದೆ. ಈ ನಡುವೆಯೇ ನೋವು ಕಮ್ಮಿಯಾಗದ ಕಾರಣ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿಯೂ ಎರಡು ದಿನ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆದರೇ ನಾರಾಯಣ ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲು ಸೂಚಿಸಲಾಗಿತ್ತು. ಆದರೆ ಹಠ ಹಿಡಿದ ನಾರಾಯಣ ನಾಯ್ಕ್ ಅವರು ಹೆಚ್ಚಿನ ಚಿಕಿತ್ಸೆಗೆ ಹೋಗದೇ ಮೇ.9 ರಂದು ಮನೆಗೆ ವಾಪಾಸ್ಸಾಗಿದ್ದರು. ಬಳಿಕ ಮನೆಗೆ ಬಂದ ಎರಡು ದಿನದಲ್ಲಿ ನಾರಾಯಣ ನಾಯ್ಕ್ ಅವರ ಕಾಲಿನ ನೋವು ವಿಪರೀತವಾಗಿದ್ದು ನೋವು ಸಹಿಸಲಾರದೇ ಮೇ.11 ಬುಧವಾರ ಬೆಳಿಗ್ಗೆ ನಿವಾಸದಲ್ಲಿಯೇ ಅವರು ಸಾವನ್ನಪ್ಪಿದ್ದಾರೆ.
ನಾರಾಯಣ ನಾಯ್ಕ್ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ನಾರಾಯಣ ಸಾವಿಗೆ ನಾಗರಾಜ್ ಹಾಗೂ ಆತನ ಮಕ್ಕಳ ಹಲ್ಲೆಯೇ ಕಾರಣ ಎಂದು ಪೊಲಿಸರಿಗೂ ದೂರು ನೀಡಿದ ಹಿನ್ನೆಲೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ ಪಿ ಮಂಜುನಾಥ ಶೆಟ್ಟಿ, ವೃತ್ತ ನಿರೀಕ್ಷಕ ದಿವಾಕರ್, ಶಂಕರನಾರಾಯಣ ಎಸ್.ಐ. ಸುನೀಲ್ ಕುಮಾರ್ ಮೊದಲಾದವರು ಭೇಟಿ ನೀಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.