ಕಾಸರಗೋಡು, ಮೇ 8: ಕೇರಳ ವಿಧಾಸನಸಭಾ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಇಂದು ಕಾಸರಗೋಡಿಗೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾಸರಗೋಡಿನ ನಗರಸಭಾ ಕ್ರೀಡಾಂಗಣದಲ್ಲಿ ಪ್ರಚಾರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಕೇರಳ ಹಿಂಸಾ ರಾಜಕೀಯದಲ್ಲಿ ನಲುಗಿ ಹೋಗಿದೆ. ಇದರಲ್ಲಿ ಹಲವು ರಾಜಕೀಯ ಮುಖಂಡರು ಹತ್ಯೆಯಾಗಿದ್ದಾರೆ. ಬಿಜೆಪಿಯ 150ಕ್ಕೂ ಅಧಿಕ ಕಾರ್ಯಕರ್ತರು ಹಿಂಸಾ ರಾಜಕೀಯಕ್ಕೆ ಬಲಿಯಾಗಿದ್ದಾರೆ. ಇದಕ್ಕೆ ಅಂತ್ಯ ಹಾಡಬೇಕಾಗಿದೆ. ಈ ನಿಟ್ಟಿನಲ್ಲಿ ಈ ಚುನಾವಣೆ ಹಿಂಸಾ ರಾಜಕೀಯದಿಂದ ಕೇರಳವನ್ನು ರಕ್ಷಿಸುವ, ಯುವಜನರ ಭವಿಷ್ಯ ನಿರ್ಧರಿಸುವ ಚುನಾವಣೆಯಾಗಲಿದೆ ಎಂದು ಮೋದಿ ಹೇಳಿದರು.
ಭಾರತಕ್ಕೆ ಸ್ವಾತಂತ್ರ ಲಭಿಸಿದ 75ನೆ ವಾರ್ಷಿಕೋತ್ಸವ ಆಚರಿಸುತ್ತಿರುವ 2022ರ ವೇಳೆಗೆ ಕೃಷಿಕರ ಆದಾಯ ಇಮ್ಮಡಿಗೊಳಿಸಲು ಕೇಂದ್ರ ಸರಕಾರ ಯೋಜನೆ ಹಾಕಿದೆ ಎಂದು ಪ್ರದಾನಿ ಹೇಳಿದರು. ಮಲಯಾಳದಲ್ಲಿ ಭಾಷಣ ಆರಂಭಿಸಿದ ಮೋದಿಯವರು ಮಲಯಾಳದಲ್ಲೇ ಕೊನೆಗೊಳಿಸುವ ಮೂಲಕ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದರು.
ಸಮಾರಂಭದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಮಂಗಳೂರು ಸಂಸದ ನಳಿಗಿಕುಮಾರ್ ಕಟೀಲು, ವಿವಿಧ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳಾದ ಕೆ.ಸುರೇಂದ್ರನ್, ಕುಂಟಾರು ರವೀಶ್ ತಂತ್ರಿ, ಕೆ.ಶ್ರೀಕಾಂತ್, ಎಂ.ಭಾಸ್ಕರನ್, ಎಂ.ಪಿ.ರಾಘವನ್, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಪ್ರಮೀಳಾ ಸಿ. ನಾಯಕ್, ಸಿ.ಕೆ.ಪದ್ಮನಾಭನ್ ಮೊದಲಾದವರು ಉಪಸ್ಥಿತರಿದ್ದರು.
ಬೆಳಗ್ಗೆ 9:45ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮೋದಿಯವರು, ಅಲ್ಲಿಂದ 10:25ರ ಸುಮಾರಿಗೆ ಹೆಲಿಕಾಪ್ಟರ್ನಲ್ಲಿ ಕಾಸರಗೋಡು ಸರಕಾರಿ ಕಾಲೇಜು ಹೆಲಿಪ್ಯಾಡ್ನಲ್ಲಿ ಬಂದಿಳಿದರು. ಅಲ್ಲಿಂದ 10:40ಕ್ಕೆ ವೇದಿಕೆಗೆ ಆಗಮಿಸಿದ ಅವರು 25 ನಿಮಿಷಗಳ ಕಾಲ ಭಾಷಣ ಮಾಡಿದರು. 11:20ಕ್ಕೆ ವೇದಿಕೆಯಿಂದ ನಿರ್ಗಮಿಸಿದರು.