ಪುತ್ತೂರು, ಮೇ 05 : ಪುತ್ತೂರು ತಾಲೂಕಿನ ಇರ್ದೆ ಬಿಎಸ್ಸೆನ್ನೆಲ್ ನೆಟ್ ವರ್ಕ್ ಸಮಸ್ಯೆಯ ವಿರುದ್ದ ಗ್ರಾಹಕರು ಇರ್ದೆಯ ಬಿಎಸ್ಸೆನ್ನೆಲ್ ಕಚೇರಿ ಮುಂಬಾಗದಲ್ಲಿ ಪ್ರತಿಭಟನೆ ನಡೆಸಿದರು.
ಕಳೆದ ಒಂದು ವಾರದಿಂದ ಇರ್ದೆ- ಬೆಟ್ಟಂಪಾಡಿ ಪರಿಸರದಲ್ಲಿ ಬಿಎಸ್ಸೆನ್ನೆಲ್ ಮೊಬೈಲ್ ನೆಟ್ ವರ್ಕ್ ಸಿಗುತ್ತಿಲ್ಲ. ಈ ಕುರಿತು ಇಲಾಖೆಯ ಗಮನಕ್ಕೆ ತಂದರೂ ಇಲಾಖೆ ಅಕಾರಿಗಳು ಮಾತ್ರ ಗ್ರಾಹಕರ ಸಮಸ್ಯೆಯನ್ನು ಪರಿಹರಿಸಲು ಮುಂದಾಗುತ್ತಿಲ್ಲ ಎಂದು ಆರೋಪಿಸಿ ಸ್ಥಳೀಯ ಗ್ರಾಹಕರು ಇರ್ದೆಯ ಬಿಎಸ್ಸೆನ್ನೆಲ್ ಕಚೇರಿ ಎದುರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಇಲಾಖೆಗೆ ಮನವಿ ಸಲ್ಲಿಸಿದರು.
ಕಳೆದ ಒಂದು ವಾರದಿಂದ ನೆಟ್ ವರ್ಕ್ ಇಲ್ಲದೆ ಭಾರೀ ಸಮಸ್ಯೆಯಾಗಿದೆ. ಸರಕಾರಿ ಕಚೇರಿಗಾಗಲಿ, ತುರ್ತು ಸಂದರ್ಭದಲ್ಲಿಯೂ ಕರೆ ಮಾಡಲು ಮೊಬೈಲ್ನಲ್ಲಿ ನೆಟ್ ವರ್ಕ್ ಲಭ್ಯವಾಗುತ್ತಿಲ್ಲ. ಬಡ ರಿಕ್ಷಾ ಚಾಲಕರಿಗೂ ಇದರಿಂದ ತೀವ್ರ ತೊಂದರೆಯಾಗಿದೆ. ಸಮಸ್ಯೆಯ ಕುರಿತು ಇಲಾಖೆಯ ಗಮನಕ್ಕೆ ತಂದರೂ ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ, ಕಚೇರಿಯಲ್ಲಿ ಕೇಳಿದರೆ ಜನರೇಟರ್ ಸಮಸ್ಯೆ ಇದೆ ಎನ್ನುತ್ತಾರೆ. ಯಾವುದೇ ಸಮಸ್ಯೆ ಇದ್ದರೂ ಅದನ್ನು ಸರಿಪಡಿಸಬೇಕಾಗಿರುವುದು ಇಲಾಖೆಯ ಜವಾಬ್ದಾರಿಯಾಗಿದೆ . ಇಂದು ನಾವು ಸಾಂಕೇತಿಕವಾಗಿ ಪ್ರತಿಭಟನೆಯನ್ನು ಮಾಡುತ್ತಿದ್ದೇವೆ ತಕ್ಷಣ ದುರಸ್ಥಿ ಮಾಡದೇ ಇದ್ದಲ್ಲಿ ಗ್ರಾಹಕರು ಸಾಮೂಹಿಕವಾಗಿ ಪ್ರತಿಭಟನೆಯನ್ನು ನಡೆಸಲಿದ್ದೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಪುತ್ತೂರು ವಿಭಾಗೀಯ ಎಂಜಿನಿಯರ್ ಶ್ರೀಧರ ರಾವ್ ಅವರು ಇಲಾಖೆಯಿಂದ ಯಾವುದೇ ಲೋಪವಾಗಿಲ್ಲ. ಜನರೇಟರ್ ದುರಸ್ಥಿ ಕಾರ್ಯ ಗುತ್ತಿಗೆದಾರನಿಗೆ ಸೂಚಿಸಲಾಗಿದೆ ಆದರೆ ಅವರು ಇನ್ನೂ ದುರಸ್ಥಿ ಮಾಡದೇ ಇರುವುದು ಇಲ್ಲಿನ ನೆಟ್ ವರ್ಕ್ ಸಮಸ್ಯೆ ಉಲ್ಬಣಿಸಲು ಕಾರಣವಾಗಿದೆ. ದುರಸ್ತಿ ಮಾಡುವ ಮೂಲಕ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬಿಎಸ್ಸೆನ್ನೆಲ್ ಅದಿಕಾರಿಗಳಾದ ಸುಬ್ಬಣ್ಣ ನಾಯ್ಕ, ಜೂಲಿನರ್ ಟೆಲಿಕಾಂ ಅಕಾರಿ ವಿಜಯಲಕ್ಷ್ಮಿ ಉಪಸ್ಥಿತರಿದ್ದರು.