
ಮಂಗಳೂರು,ಮೇ.05 : ತೊಕ್ಕೊಟ್ಟಿನ ಟಯರ್ ರಿಸಲ್ವ್ ಶಾಪ್ ಗೆ ಅಕಸ್ಮಿಕ ಬೆಂಕಿ ತಗುಲಿದ ಘಟನೆ ಗುರುವಾರ ಸಂಜೆ ನಡೆದಿದೆ.
ಈ ಟಯರ್ ರಿಸಲ್ವ್ ಶಾಪ್ ಅಬ್ದುಲ್ ರೆಹಮಾನ್ ಎಂಬವರಿಗೆ ಸೇರಿದ ಟಯರ್ ಅಂಗಡಿ ಇದಾಗಿದೆ. ಯಾರೋ ಕಿಡಿಗೇಡಿಗಳು ಬೆಂಕಿ ಕೊಟ್ಟಿರಬೇಕು ಎಂದು ಸ್ಥಳೀಯರು ಶಂಕೆ ವ್ಯಕ್ತ ಪಡಿಸಿದ್ದಾರೆ.
ಘಟನೆಯಿಂದ ಇಡೀ ಜಂಕ್ಷನ್ನಲ್ಲಿ ಹೊಗೆ ತುಂಬಿ ಕತ್ತಲು ಆವರಿಸಿತ್ತು. ಸಂಜೆ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಜ್ವಾಲೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಠಿಸಿತ್ತು.
ಈ ವೇಳೆ ಅಂಗಡಿಯೊಳಗಿದ್ದ ಟಯರ್, ಟಯರ್ ರಿಸೋಲ್ವಿಂಗ್ ಯಂತ್ರ ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿರಬಹುದೆಂದು ಆಂದಾಜಿಸಲಾಗಿದೆ. ಅಂಗಡಿಯೊಳಗೆ ಯಾರೂ ಇಲ್ಲದಿರುವುದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ. ಸಮೀಪದಲ್ಲೇ ಡಿಸೇಲ್ ಜನರೇಟರ್, ವಾಣಿಜ್ಯ ಕಟ್ಟಡ, ಗೂಡಂಗಡಿಗಳಿದೆ. ಆದರೆ ಅಗ್ನಿಶಾಮಕ ದಳದ ಸಕಾಲಿಕ ಆಗಮನದಿಂದ ದೊಡ್ಡ ದುರಂತ ತಪ್ಪಿದೆ.
ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಸಮಯ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು. ಉಳ್ಳಾಲ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಘಟನೆ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.