ಸಾರ್ವಜನಿಕ ಸಂಪತ್ತಿನ ಲೂಟಿಯ ವಿರುದ್ಧ ಧ್ವನಿ ಎತ್ತಿದ್ದ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ.ಪಿ. ಬಾಳಿಗಾರ ಹತ್ಯೆಯ ಪ್ರಮುಖ ಶಂಕಿತ ಆರೋಪಿಗಳಾದ ನರೇಶ್ ಶೆಣೈ, ಶ್ರೀಕಾಂತ್, ವಿಘ್ನೇಶ್ ಸಹಿತಾ ಈ ಕೊಲೆಯ ಹಿಂದಿರುವ ಪ್ರತಿಯೊಬ್ಬರನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮಕ್ಕೊಳಪಡಿಸಬೇಕು ಹಾಗೂ ಬಾಳಿಗಾ ಕುಟುಂಬಕ್ಕೆ ಆರ್ಥಿಕ ಪರಿಹಾರ ಒದಗಿಸಬೇಕು : ದೇಶಪ್ರೇಮಿ ಸಂಘಟನೆಗಳ ಒಕ್ಕೂಟ ಆಗ್ರಹ
ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು, ಮೇ.2: ಆರ್ಟಿಐ ಕಾರ್ಯಕರ್ತ ವಿನಾಯಕ.ಪಿ. ಬಾಳಿಗಾ ಕೊಲೆ ನಡೆದು ನಲವತ್ತು ದಿನಗಳು ಕಳೆದರೂ ತನಿಖೆ ಕುಂಠಿತಗೊಂಡಿರುವುದನ್ನು ಖಂಡಿಸಿ, ಕೊಲೆಯ ರೂವಾರಿ ಎನ್ನಲಾದ, ನಮೋ ಬ್ರಿಗೇಡ್ ಸ್ಥಾಪಕ ನರೇಶ್ ಶೆಣೈನನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿ, ಮಂಗಳೂರಿನ ವಿದ್ಯಾರ್ಥಿ, ಯುವಜನ, ದಲಿತ, ಮಹಿಳಾ, ನಾಗರಿಕ ಸಂಘಟನೆಗಳ ಜಂಟಿ ವೇದಿಕೆಯಾದ ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ವತಿಯಿಂದ ಇಂದು (ಮೇ 2 ಸೋಮವಾರ) ಸಂಜೆ ಬಾಳಿಗಾ ಕೊಲೆ ನಡೆದ ಪಿ.ವಿ.ಎಸ್ ಕಲಾಕುಂಜ ಬಳಿಯ ಅವರ ನಿವಾಸದಿಂದ ಪೊಲೀಸ್ ಕಮೀಷನರ್ ಕಚೇರಿಯವರೆಗೆ ಬೃಹತ್ ಪಾದಯಾತ್ರೆ ನಡೆಯಿತು.
ಕಲಾಕುಂಜ ಬಳಿಯಿಂದ ಹೊರಟ ಪಾದಯಾತ್ರೆಯು ನಗರದ ಕಾರ್ಸ್ಟ್ರೀಟ್ನ ಶ್ರೀವೆಂಕಟರಮಣ ದೇವಸ್ಥಾನ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಬಳಿಕ ಕಮಿಷನರ್ ಕಚೇರಿಗೆ ಮುಂದುವರಿಯಿತು.
‘ಬಾಳಿಗಾ ಹಂತಕರಿಗೆ ಧಿಕ್ಕಾರ’, ‘ಸುಪಾರಿ ಕಿಲ್ಲರ್ ‘ನಮೋ ಬ್ರಿಗೇಡ್’ನ ಸಂಸ್ಥಾಪಕ ನರೇಶ್ ಶೆಣೈನನ್ನು ಬಂಧಿಸಿ’, ‘ಆರೋಪಿಗಳ ಬಂಧನವಾಗದೆ ಹೋರಾಟ ನಿಲ್ಲದು’, ಮೊದಲಾದ ಘೋಷಣೆಗಳು ಮೊಳಗಿದವು.
ಕಮಿಷನರ್ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಪಾದಯಾತ್ರೆಯ ನೇತ್ರತ್ವ ವಹಿಸಿದ ರಾಷ್ಟ್ರೀಯ ವಿಚಾರವಾದಿ ಸಂಘಟನೆಯ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್, ಬಾಳಿಗಾ ಹತ್ಯೆ ಪ್ರಕರಣದ ಆರೋಪಿಯಾಗಿರುವ ನರೇಶ್ ಶೆಣೈ ವಿಚಾರದಲ್ಲಿ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ. ಆದ್ದರಿಂದ ಬಂಧನವು ವಿಳಂಬವಾಗುತ್ತಿದೆ. ನರೇಶ್ ಶೆಣೈ ಸಹಿತ ಎಲ್ಲಾ ಆರೋಪಿಗಳ ಬಂಧನಕ್ಕೆ ನಾವು ಈ ಹಿಂದೆಯೂ ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದೆವು. ಇದೀಗ ಪೊಲೀಸ್ ಇಲಾಖೆಯನ್ನು ಎಚ್ಚರಿಸುವ ಸಲುವಾಗಿ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ. ಆರೋಪಿಗಳ ಬಂಧನ ವಿಳಂಬವಾದರೆ ಪ್ರತಿಭಟನೆಯನ್ನು ಬೆಂಗಳೂರಿನವರೆಗೆ ಕೊಂಡೊಯ್ಯುವುದಾಗಿ ಎಚ್ಚರಿಕೆ ನೀಡಿದರು.
ಪೊಲೀಸರಿಂದ ತಪ್ಪಿಸಿಕೊಳ್ಳಲು ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಸಲ್ಲಿಸಿದ್ದ ನರೇಶ್ ಶೆಣೈಗೆ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದೆ. ಬಾಳಿಗಾ ಕೊಲೆ ನಡೆದು 40 ದಿನಗಳಾದರೂ ನರೇಶ್ ಶೆಣೈನನ್ನು ಬಂಧಿಸಲು ಈವರೆಗೂ ಸಾಧ್ಯವಾಗದಿರುವುದಕ್ಕೆ ಪೊಲೀಸ್ ಇಲಾಖೆಗೆ ನಾಚಿಕೆಯಾಗಬೇಕು. ಪೊಲೀಸರು ಆರೋಪಿಗಳನ್ನು ಬಂಧಿಸುವವರೆಗೆ ಹೋರಾಟವನ್ನು ಮುಂದುವರಿಸುವುದಾಗಿ ಹೇಳಿದರು.
ಆರ್ಟಿಐ ಕಾರ್ಯಕರ್ತ ವಿನಾಯಕ ಪಿ. ಬಾಳಿಗಾ ಹತ್ಯೆಗೀಡಾಗಿ ನಲವತ್ತು ದಿನಗಳು ಕಳೆದರೂ ಪ್ರಕರಣವನ್ನು ಸಮರ್ಪಕವಾಗಿ ಭೇದಿಸುವಲ್ಲಿ ಹಾಗೂ ಇದರ ಹಿಂದಿರುವ ಪ್ರಮುಖ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಅರೋಪಿಸಿದರು.
ಆಡಳಿತದ ರಾಜಕೀಯ ಪಕ್ಷದ ಪ್ರತಿನಿಧಿಗಳು, ಮುಖ್ಯವಾಹಿನಿಯಲ್ಲಿರುವ ಪಕ್ಷಗಳ ಮುಖಂಡರು ಈ ಕೊಲೆ ಬಗ್ಗೆ ವೌನವಹಿಸಿದ್ದಾರೆ. ನರೇಶ್ ಶೆಣೈ ಪೊಲೀಸರ ಹಿಡಿತದಿಂದ ತಪ್ಪಿಸಿಕೊಳ್ಳುತ್ತಿರುವುದರ ಹಿಂದೆ ಪ್ರಬಲ ಲಾಬಿಗಳು ಕೈಯ್ಯಾಡಿಸಿರುವುದು ಸ್ಪಷ್ಟವಾಗಿದೆ, ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಪ್ರಯತ್ನಿಸುತ್ತಿರುವ ನರೇಶ್ ಶೆಣೈ ಬಂಧನ ಅಸಾಧ್ಯದ ಕೆಲಸವೇನಲ್ಲ, ಆದರೆ ಪೊಲೀಸರ ಕೈಕಟ್ಟಿ ಹಾಕಿರುವ ಪ್ರಬಲ ಲಾಬಿಗಳು ನರೇಶ್ ಶೆಣೈ ರಕ್ಷಣೆಗೆ ಟೊಂಕ ಕಟ್ಟಿದ್ದು, ಆ ಮೂಲಕ ಬಾಳಿಗಾ ಕೊಲೆ ಪ್ರಕರಣವನ್ನು ದಿಕ್ಕು ತಪ್ಪಿಸಲು ಯತ್ನಿಸಿವೆ. ತಕ್ಷಣ ನರೇಶ್ ಶೆಣೈ ಸಹಿತ ಬಾಳಿಗಾ ಕೊಲೆಯ ಎಲ್ಲಾ ಆರೋಪಿಗಳ ಬಂಧನವಾಗದಿದ್ದಲ್ಲಿ ಈ ಪಾದಯಾತ್ರೆಯ ನಂತರ ಮುಂದಿನ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ನರೇಂದ್ರ ನಾಯಕ್ ತಿಳಿಸಿದರು.
ಡಿವೈಎಫ್ಐ ಮುಖಂಡ ಮುನೀರ್ ಕಾಟಿಪಳ್ಳ ಮಾತನಾಡಿ, ಸಾರ್ವಜನಿಕ ಸಂಪತ್ತಿನ ಲೂಟಿಯ ವಿರುದ್ಧ ಧ್ವನಿ ಎತ್ತಿದ್ದಕಾಗಿ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ.ಪಿ. ಬಾಳಿಗಾರನ್ನು ದಾರುಣವಾಗಿ ಹತ್ಯೆ ಮಾಡಲಾಗಿಯಿತು.ಈ ಕೊಲೆಯ ಹಿಂದಿರುವ ಶಕ್ತಿಗಳನ್ನು ಬಂಧಿಸಲು ಪೊಲೀಸ್ ಇಲಾಖೆಗೆ ಇನ್ನೂ ಸಾಧ್ಯವಾಗಿಲ್ಲ. ಕೊಲೆಯ ಪ್ರಮುಖ ರೂವಾರಿ ಎನ್ನಲಾದ ನಮೋ ಬ್ರಿಗೇಡ್ ಮುಖಂಡ ನರೇಶ್ ಶೆಣೈ ಸಹಿತಾ ಹಲವರ ಮೇಲೆ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದ್ದರೂ ಇವರ ಬಂಧನವಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದರು.
ಮಂಗಳೂರಿನ ಶಿಕ್ಷಣ ಮಾಫಿಯಾ, ರಿಯಲ್ ಎಸ್ಟೇಟ್, ಬಿಲ್ಡರ್ ಲಾಬಿ, ಧಾರ್ಮಿಕ ಕ್ಷೇತ್ರದ ಪ್ರತಿಷ್ಠಿತರ ಅಕ್ರಮಗಳ ವಿರುದ್ಧ ಹೋರಾಟಕ್ಕಿಳಿದಿದ್ದ ಬಾಳಿಗ ಕೊಲೆಯ ಹಿಂದೆ ಪ್ರಬಲ ಲಾಬಿಗಳು, ರಾಜಕೀಯ, ಸಾಮಾಜಿಕ ಕ್ಷೇತ್ರದ ಪ್ರತಿಷ್ಠಿತರು, ಪ್ರಭಾವಿಗಳು, ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇಂತಹ ಪ್ರಬಲ ಶಕ್ತಿಗಳನ್ನು ರಕ್ಷಿಸಲಿಕ್ಕಾಗಿ ಬಾಳಿಗಾ ಕೊಲೆಯ ಹಿಂದಿನ ರಹಸ್ಯವನ್ನು ಮುಚ್ಚಿ ಹಾಕುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದ ಮುನೀರ್ ಕಾಟಿಪಳ್ಳ ಅವರು, ಬಾಳಿಗಾರ ಕುಟುಂಬಕ್ಕೆ ನ್ಯಾಯ ದೊರೆಯಬೇಕಾದರೆ ಈ ಕೊಲೆಯ ತನಿಖೆಯನ್ನು ಚುರುಕುಗೊಳಿಸಬೇಕು. ಉನ್ನತ ಮಟ್ಟದ ತನಿಖೆ ನಡೆಸಬೇಕು. ಪ್ರಕರಣದ ಶಂಕಿತ ಆರೋಪಿಗಳಾದ ನರೇಶ್ ಶೆಣೈ, ಶ್ರೀಕಾಂತ್, ವಿಘ್ನೇಶ್ ಸಹಿತಾ ಈ ಕೊಲೆಯ ಹಿಂದಿರುವ ಪ್ರತಿಯೊಬ್ಬರನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮಕ್ಕೊಳಪಡಿಸಬೇಕು ಹಾಗೂ ಬಾಳಿಗಾ ಕುಟುಂಬಕ್ಕೆ ಆರ್ಥಿಕ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ಸಂಚಾಲಕ ಸಂತೋಷ್ ಬಜಾಲ್ ಮಾತನಾಡಿ, ಈ ಕೊಲೆಯ ಪ್ರಮುಖ ಶಂಕಿತ ಆರೋಪಿ ನರೇಶ್ ಶೆಣೈ ಬಂಧನ ವಿಳಂಭವಾಗುತ್ತಿರುವುದು ಹಲವು ಸಂದೇಹಗಳಿಗೆ ಕಾರಣವಾಗಿದೆ. ಈ ಕೊಲೆಯ ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಿ, ನರೇಶ್ ಶೆಣೈ ಯಾವೂದೇ ಕಾರಣಕ್ಕೂ ನಿರೀಕ್ಷಣಾ ಜಾಮೀನು ಪಡೆಯದಂತೆ ಆತನನ್ನು ಹಾಗೂ ಆತನ ಸಹಚರರನ್ನು ಮತ್ತು ಈ ಕೊಲೆ ಸಂಚಿನಲ್ಲಿ ಭಾಗಿಯಾದ ಎಲ್ಲರನ್ನೂ ಬಂಧಿಸಿ ಕಾನೂನಿಗೊಪ್ಪಿಸಬೇಕು ಎಂದು ಒತ್ತಾಯಿಸಿದರು. ಬಂಧನ, ತನಿಖೆ ಮತ್ತಷ್ಟು ವಿಳಂಭವಾದರೇ ಪ್ರತಿಭಟನೆಗಳನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಸಂತೋಷ್ ಬಜಾಲ್ ಎಚ್ಚರಿಕೆ ನೀಡಿದರು.
ಇದಕ್ಕೂ ಮುನ್ನ ಕಾರ್ಸ್ಟ್ರೀಟ್ನ ಶ್ರೀ ವೆಂಕರಮಣ ದೇವಸ್ಥಾನದ ಮುಂದೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಬಾಳಿಗಾರ ಸಹೋದರಿಯರಾದ ಉಷಾ ಶೆಣೈ ಹಾಗೂ ಅನುರಾಧಾ, ಸಹೋದರನ ಹಂತಕರ ಶೀಘ್ರ ಬಂಧನವಾಗಲಿ. ಹಂತಕರನ್ನು ದೇವರೇ ಶಿಕ್ಷಿಸಲಿ ಎಂದರು.
ಪ್ರತಿಭಟನೆಯಲ್ಲಿ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ಮುಖಂಡೆ ವಿದ್ಯಾ ದಿನಕರ್, ಡಿಎಸ್ಎಸ್ (ಪ್ರೊ.ಕೃಷ್ಣಪ್ಪ ಸ್ಥಾಪಿತ)ನ ರಾಜ್ಯ ಹಿರಿಯ ಮುಖಂಡ ಎಂ.ದೇವದಾಸ್, ಕಾರ್ಪೊರೇಟರ್ ಹಾಗೂ ಡಿವೈಎಫ್ಐ ಜಿಲ್ಲಾಧ್ಯಕ್ಷ ದಯಾನಂದ ಶೆಟ್ಟಿ, ಎಐವೈಎಫ್ನ ಕರುಣಾಕರ, ಎಸ್ಎಫ್ಐನ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್, ಬಾಳಿಗಾರ ತಂದೆ ರಾಮಚಂದ್ರ ಬಾಳಿಗಾ, ತಾಯಿ ಜಯಂತಿ ಬಾಳಿಗಾ, ಸಹೋದರಿಯರಾದ ಉಷಾ ಶೆಣೈ, ಹರ್ಷ ಬಾಳಿಗಾ, ಅನುರಾಧಾ ಬಾಳಿಗಾ, ಸ್ನೇಹಿತ ಗಣೇಶ್ ಬಾಳಿಗಾ, ರೆನ್ನಿ ಡಿಸೋಜಾ, ಪಿ.ವಿ.ಮೋಹನ್ ಮತ್ತಿತರರು ಪಾಲ್ಗೊಂಡಿದ್ದರು.
ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು. ಎಸ್ಎಫ್ಐನ ಜಿಲ್ಲಾ ಕಾರ್ಯದರ್ಶಿ ಶರಣ್ ಶೆಟ್ಟಿ ವಂದಿಸಿದರು.
ಪೊಲೀಸ್ ಕಮಿಷನರಿಗೆ ಮನವಿ :
ಪ್ರತಿಭಟನಾ ಸಭೆಯ ಬಳಿಕ ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ವತಿಯಿಂದ ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಕಾನೂನಿನ ಕ್ರಮದ ವ್ಯಾಪ್ತಿಗೆ ತಂದು, ಅತೀ ಶೀಘ್ರವಾಗಿ ಬಂಧಿಸಿ, ಬಾಳಿಗಾರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸುವ ಮನವಿಯೊಂದನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್ ಎಸ್.ಚಂದ್ರಶೇಖರ್ ಅವರಿಗೆ ಸಲ್ಲಿಸಲಾಯಿತು.
ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್