ಪುತ್ತೂರು, ಮೇ.02: ವಿದ್ಯುತ್ ಶಾಕ್ ಹೊಡೆದ ಪರಿಣಾಮ ಮೂವರು ದಾರುಣ ಸಾವನ್ನಪ್ಪಿದ ಘಟನೆ ತಾಲೂಕಿನ ಬೆಳ್ಳಿಪ್ಪಾಡಿ ಎಂಬಲ್ಲಿ ಇಂದು ಮುಂಜಾನೆ 9 ಗಂಟೆಯ ಸುಮಾರಿಗೆ ನಡೆದಿದೆ. ಮೃತರನ್ನು ಬಾಬು ಗೌಡ, ಸೇಸಪ್ಪ ಗೌಡ ಹಾಗೂ ಕಾರ್ತಿಕ್ ಗೌಡ ಎಂದು ಹೆಸರಿಸಲಾಗಿದೆ.
ಘಟನೆಯ ವಿವರ:
ಕೋಡಿಂಬಾಡಿ ಗ್ರಾ.ಪಂ ವ್ಯಾಪ್ತಿಯ ಬೆಳ್ಳಿಪ್ಪಾಡಿ ಗ್ರಾಮದ ಶಾಂತಿನಗರ ಸಮೀಪದ ಎಣ್ಣೆತ್ತೋಡಿ ಎಂಬಲ್ಲಿನ ಕಾಡು ಪ್ರದೇಶದಲ್ಲಿ ಮರ ಕಡಿಯಲೆಂದು ಕೃಷಿಕರಾದ ಬಾಬು ಗೌಡ, ಸೇಸಪ್ಪ ಗೌಡ ಹಾಗೂ ಕಾರ್ತಿಕ್ ಗೌಡ ಅವರು ಅಲ್ಯುಮಿನಿಯಂ ಏಣಿಯನ್ನು ಕೊಂಡೊಯ್ಯುತ್ತಿದ್ದ ವೇಳೆ ಏಣಿಯ ತುದಿಭಾಗ ಹೈಟೆನ್ಷನ್ ವಿದ್ಯುತ್ ವೈರ್ ಸ್ಪರ್ಶಿಸಿ ಘಟನೆ ಸಂಭವಿಸಿದೆ. ಈ ವೇಳೆ ಬಾಬು ಗೌಡ ಶಾಕ್ಗೆ ತುತ್ತಾಗಿದ್ದು, ಅವರನ್ನು ರಕ್ಷಿಸಲು ಬಂದ ಸೇಸಪ್ಪ ಹಾಗೂ ಕಾರ್ತಿಕ್ ಕೂಡಾ ಶಾಕ್ನಿಂದ ನೆಲಕ್ಕುರುಳಿ ದಾರುಣ ಸಾವನ್ನಪ್ಪಿದ್ದಾರೆ.
ಘಟನೆ ನಡೆದ ಪ್ರದೇಶ ಸರಕಾರಿ ರಕ್ಷಿತಾರಣ್ಯಕ್ಕೆ ಸಮೀಪದಲ್ಲಿದ್ದು, ಕೃಷಿಗೆ ಅಡ್ಡಿಯಾಗುತ್ತಿರುವ ಮರವನ್ನು ಕಡಿಯಲು ತೆರಳುತ್ತಿದ್ದರೆನ್ನಲಾಗಿದೆ. ಘಟನಾಸ್ಥಳಕ್ಕೆ ಅರಣ್ಯ ಅಧಿಕಾರಿಗಳು, ಮೆಸ್ಕಾಂ ಅಧಿಕಾರಿಗಳು, ಪುತ್ತೂರು ನಗರ ಠಾಣಾ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತರು ಅಕ್ಕಪಕ್ಕದ ಮನೆಯ ನಿವಾಸಿಗಳಾಗಿದ್ದು, ಆಕಸ್ಮಿಕ ಸಾವಿನಿಂದ ಮೃತರ ಮನೆಯಲ್ಲಿ ಶೋಕ ಮಡುಗಟ್ಟಿದೆ.
‘ಮೃತದೇಹಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಲಾಗಿದೆ ಎಂದು ನಗರ ಠಾಣಾಧಿಕಾರಿ ಮಹೇಶ್ ಪ್ರಸಾದ್ ತಿಳಿಸಿದ್ದಾರೆ.