ಕುಂದಾಪುರ: ಸುಮಾರು 25ಕ್ಕೂ ಅಧಿಕ ವರ್ಷದಿಂದ ಕ್ರೀಡಾ ಹಾಗೂ ಸಮಾಜಿಕ ಸೇವಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ತೆಕಟ್ಟೆ ಸಮೀಪದ ಕನ್ನುಕೆರೆ ಎಂಬಲ್ಲಿನ ಫಾಲ್ಕನ್ ಕ್ಲಬ್ ಸಂಸ್ಥೆಯು ಬಡವರ, ಅಶಕ್ತರ ಪರವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದಿದೆ. ಇತ್ತೀಚೆಗಷ್ಟೇ ಅಗಲಿದ ಗೆಳೆಯನ ನೆನಪಿಗಾಗಿ ಹುಟ್ಟುರಿನಲ್ಲೊಂದು ಬಸ್ಸು ನಿಲ್ದಾಣ ನಿರ್ಮಿಸಿದ ಫಾಲ್ಕನ್ ಕ್ಲಬ್ ಸಂಸ್ಥೆಯು ಇದೀಗಾ ಕನ್ನುಕೆರೆಯ ಸಮಸ್ತ ಮುಸ್ಲಿಂ ಬಾಂಧವರ ಆಶ್ರಯದಲ್ಲಿ ಇನ್ನೊಂದು ಮಹತ್ತರ ಕಾರ್ಯವೊಂದಕ್ಕೆ ಕೈಹಾಕಿ ಯಶಸ್ವಿಯಾಗಿದೆ. ತೆಕ್ಕಟ್ಟೆ ಸಮೀಪದ ಕೆದೂರು ಎಂಬಲ್ಲಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸ್ಪೂರ್ತಿಧಾಮ ಸಂಸ್ಥೆಗೆ ಮೂರುವರೆ ಲಕ್ಷ ಅಂದಾಜು ವೆಚ್ಚದಲ್ಲಿ ಆಂಬ್ಯುಲ್ಯಾನ್ಸ್ ಕೊಡುಗೆಯಾಗಿ ನೀಡಿದೆ.
ಆಂಬ್ಯುಲ್ಯಾನ್ಸ್ ಲೋಕಾರ್ಪಣೆ ಕಾರ್ಯಕ್ರಮವು ಕನ್ನುಕೆರೆಯ ಮಸೀದಿ ಸಮೀಪದ ಪಾಲ್ಕನ್ ಮೈದಾನದಲ್ಲಿ ಭಾನುವಾರ ಸಂಜೆ ಅದ್ಧೂರಿಯಾಗಿ ಜರುಗಿತು.
ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿಆಂಬ್ಯುಲ್ಯಾನ್ಸ್ ಉದ್ಘಾಟಿಸಿ ಮಾತನಾಡಿ, ಊರೊಂದರ ಯುವಕರು ಒಗ್ಗೂಡಿ ಬೆಳೆದಾಗ ಮಾತ್ರವೇ ಊರಿನ ಅಭಿವೃದ್ಧಿ ಸಾಧ್ಯ. ಊರಿನ ಹೆಸರು ಉಳಿಸಿ ಬೆಳೆಸುವಲ್ಲಿ ಯುವಕರು ಹಾಗೂ ಸಂಘಟನೆ ಪಾತ್ರ ಅತ್ಯಗತ್ಯವಾಗಿದ್ದು ಒಗ್ಗಟ್ಟು ಹಾಗೂ ಸಂಘಟಿತ ಪ್ರಯತ್ನದ ಮೂಲಕ ಊರಿನ ಅಭಿವೃದ್ಧಿಗೆ ಶ್ರಮಿಸಬೇಕಿದೆ. ಈ ನಿಟ್ಟಿನಲ್ಲಿ ಕನ್ನುಕೆರೆ ಫಾಲ್ಕನ್ ಕ್ಲಬ್ ನಡೆಸುತ್ತಿರುವ ಸಾಮಾಜಿಕ ಸೇವೆ ಶ್ಲಾಘನೀಯವಾಗಿದೆ ಎಂದ ಅವರು ಇತ್ತೀಚೆಗೆ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವುದು ಮಹತ್ತರ ಜವಬ್ದಾರಿ ನಮ್ಮೆಲ್ಲರ ಮೇಲಿದ್ದು ಸ್ಥಳೀಯ ತೆಕ್ಕಟ್ಟೆ ಕುವೆಂಪು ಮಾದರಿ ಶಾಲೆಗೆ ವಿವಿದೆಡೆಗಳಿಂದ ಮಕ್ಕಳು ಬರುತ್ತಿದ್ದಾರೆ. ಆದರೇ ಅವರೆಲ್ಲರೂ ದೂರದೂರುಗಳಿಂದಲೂ ಬರುವ ಕಾರಣ ಬಸ್ಸು ಹಾಗೂ ಆಟೋ ರಿಕ್ಷಾ ಅವಲಂಭಿಸಿದ್ದು ಅದಕ್ಕೆ ಹಣ ನೀಡುವುದು ಕಷ್ಟಕರವಾಗುತ್ತಿದೆ. ಈ ಹಿನ್ನೆಲೆ ಈ ಸಂಸ್ಥೆಯಿಂದ ಮುಂದಿನ ದಿನಗಳಲ್ಲಿ ವಾಹನ ಸೌಕರ್ಯ ಕಲ್ಪಿಸಿದಲ್ಲಿ ಕನ್ನಡ ಶಾಲೆ ಉಳಿವಿಗೆ ಕೊಡುಗೆ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಆಂಬ್ಯುಲ್ಯಾನ್ಸ್ ಕಿಲಿಕೈ ಹಸ್ತಾಂತರಿಸಿ ಮಾತನಾಡಿದ ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ರಾಜೇಶ್ ಕಾವೇರಿ, ನಮ್ಮಿಂದಾಗುವ ಉತ್ತಮ ಕೆಲಸಗಳನ್ನು ಮಾಡುವ ಮೂಲಕ ನಾವು ನಂಬುವ ದೇವರನ್ನು ಸಂತುಷ್ಟಗೊಳಿಸಲು ಸಾಧ್ಯವಿದೆ. ಸರಕಾರ ಎಷ್ಟೇ ಅಭಿವ್ರದ್ಧಿ ಕಾರ್ಯಗಳನ್ನು ಮಾಡಿದರೂ ಕೂಡ ತಳಮಟ್ಟದ ಬಡವರನ್ನು ಮುಟ್ಟಲು ಅಸಾಧ್ಯ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಹಕಾರ ದೊರೆಯಲು ಸಂಘಟನೆಗಳ ಕಾರ್ಯ ಅತ್ಯಮೂಲ್ಯ. ಸಮಾಜದಲ್ಲಿ ಎಲ್ಲರಿಗೂ ಎಲ್ಲಾ ವಿಚಾರಗಳು ಒಳಿತಾಗಲ್ಲ. ಕೆಲವೊಮ್ಮೆ ಅನ್ಯಾಯವು ಆಗುತ್ತದೆ. ಆದರೇ ಕ್ರೀಡಾ ಮನೋಭಾವನೆ ಹೊಂದಿರುವ ವ್ಯಕ್ತಿ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುತ್ತಾನೆ ಮತ್ತು ಸಹಿಸಿಕೊಳ್ಳುತ್ತಾನೆ. ಈ ನಿಟ್ಟಿನಲ್ಲಿ ಕ್ರೀಡಾ ಸಂಘಟನೆಯಾಗಿ ಬೆಳೆದುಬಂದ ಫಾಲ್ಕನ್ ಕ್ಲಬ್ ಇಂದು ಸಮಾಜಮುಖಿಯಾಗಿ ಬೆಳೆದುನಿಂತಿದೆ ಎಂದರು.
ಕತಾರ್ ಉದ್ಯಮಿ ಅಸ್ಮತ್ ಅಲಿ ಹಾಗೂ ಉದ್ಯಮಿ ಕರಾಮತುಲಾ ಅಬ್ದುಲ್ ಸತ್ತಾರ್ ಮಾತನಾಡಿ, ಚಿಕ್ಕದೊಂದು ಊರಾದರೂ ಕೂಡ ಸಂಘಟಿತರಾಗಿ ಜಾತಿ, ಧರ್ಮದ ಭೇದವಿಲ್ಲದೇ ಸಾಧನೆಯನ್ನು ಮಾಡುತ್ತಿರುವ ಫಾಲ್ಕನ್ ಕ್ಲಬ್ ಸಂಘಟನೆಯ ಕಾರ್ಯ ಮಹತ್ತರವಾದುದು, ಇವರ ಈ ಕೆಲಸಕ್ಕೆ ದಾನಿಗಳ ಹಾಗೂ ಊರಿನವರ ಸಹಕಾರ ಅತ್ಯಗತ್ಯ ಎಂದರು.
ಆಂಬ್ಯುಲ್ಯಾನ್ಸ್ ವಾಹನ ಸ್ವೀಕರಿಸಿ ಮಾತನಾಡಿದ ಸ್ಪೂರ್ತಿಧಾಮ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ಕೇಶವ ಕೋಟೇಶ್ವರ ಮಾತನಾಡಿ, ಆಂಬ್ಯುಲ್ಯಾನ್ಸ್ ಸೇವೆಗಳು ಕಮ್ಮಿಯಾದಷ್ಟು ಸಮಾಜದ ಸುಸ್ಥಿರವಾಗಿದೆ ಎಂದರ್ಥ. ಫಾಲ್ಕನ್ ಸಂಸ್ಥೆ ಸ್ಪೂರ್ತಿಧಾಮಕ್ಕೆ ಆಂಬ್ಯುಲ್ಯಾನ್ಸ್ ನೀಡಿದರೂ ಕೂಡ ಅಗತ್ಯ ಹಾಗೂ ಅವಶ್ಯ ಸಂದರ್ಭದಲ್ಲಿ ಸ್ಥಳೀಯ ಭಾಗದಲ್ಲಿಯೂ ಬಳಸಿಕೊಳ್ಳುವ ಮೂಲಕ ಸೇವೆ ನೀಡುತ್ತೇವೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಸಮಾಜ ಸೇವಕ ಇಬ್ರಾಹಿಂ ಗಂಗೊಳ್ಳಿ, ರಕ್ತದಾನಿ ಮುನೀರ್ ಮಲ್ಪೆ, ಯೋಧರಾದ ರವಿಚಂದ್ರ ಶೆಟ್ಟಿ ಹಾಗೂ ಫಾಲ್ಕನ್ ಕ್ಲಬ್ ಅಧ್ಯಕ್ಷ ಮಹಮ್ಮದ್ ಸಲಾಂ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನುಕೆರೆ ಫಾಲ್ಕನ್ ಕ್ಲಬ್ ಸ್ಥಾಪಕಾಧ್ಯಕ್ಷ ಹಿದಾಯತುಲ್ಲಾ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೆಂಗಳೂರು ಉದ್ಯಮಿ ವಿ.ಕೆ. ಮೋಹನ್, ಉದ್ಯಮಿಗಳಾದ ಕರಾಮತುಲಾ ಅಬ್ದುಲ್ ಸತ್ತಾರ್, ಎಸ್. ಮೈಯ್ಯದ್ಧಿ, ಬಿ.ಎ, ಹಂಝಾ, ಅಬ್ದುಲ್ ಗನಿ, ಶೌಕತ್ ಅಲಿ, ಕನ್ನುಕೆರೆ ಅಲ್-ಮದೀನ ಜಾಮೀಯಾ ಮಸ್ಜಿದ್ ಅಧ್ಯಕ್ಷ ಶಾನವಾಜ್ ಅಬ್ದುಲ್ ಗನಿ, ತೆಕ್ಕಟ್ಟೆ ಫ್ರೆಂಡ್ಸ್ ತೆಕ್ಕಟ್ಟೆ ಇದರ ಸಂಚಾಲಕ ಪ್ರಕಾಶ್ ಶೆಟ್ಟಿ, ಎಸ್.ಎಮ್.ಎನ್.ಸಿ. (ಯು.ಎ.ಇ.) ಅಧ್ಯಕ್ಷ ಅಬ್ದುಲ್ ಕಾದರ್, ಕಾರ್ಯದರ್ಶಿ ಇಮ್ರಾನ್ ಶೇಖ್,ಮುಖಂಡರಾದ ಮಲ್ಯಾಡಿ ರಾಜೀವ್ ಶೆಟ್ಟಿ, ಗೋಪಾಲ್ ಪುರಾಣಿಕ್, ಗೌರವ ಉಪಸ್ಥಿತರಾಗಿ ಹಂಝಾ ಮಹಮ್ಮದ್ ಬ್ಯಾರಿ, ಅಬ್ದುಲ್ ಸಮದ್, ಹಸನಾರ್ ಕೋಡಿ, ಫಿರೋಜ್ ಕೆ.ಎಮ್.ಎಫ್, ಸಮೀರ್ ತಾಜುದ್ಧೀನ್ ಸಾಹೇಬ್ ಮೊದಲಾದವರು ಉಪಸ್ಥಿತರಿದ್ದರು.
ಫಾಲ್ಕನ್ ಕ್ಲಬ್ ಅಧ್ಯಕ್ಷ ಮಹಮ್ಮದ್ ಸಲಾಂ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಉಪನ್ಯಾಸಕ ಅಕ್ಷಯ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.