ಮಂಗಳೂರು, ಮೇ.1: ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ಸಂಘ ಹಾಗೂ ವಿವಿಧ ಕಾರ್ಮಿಕ ಸಂಘಗಳ ವತಿಯಿಂದ ರವಿವಾರ ನಗರದ ವಿಶ್ವ ವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಕಾರ್ಮಿಕರ ದಿನಾಚರಣೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರವು ದುರ್ಬಲರ ಹಾಗೂ ಕಾರ್ಮಿಕರ ಪರವಾಗಿ ಕೆಲಸ ಮಾಡುತ್ತಿದೆ. ಆದರೆ ಬಂಡವಾಳ ಶಾಹಿಗಳ ಬೆಂಬಲದಿಂದ ದೇಶ ಆಳುವ ಅಧಿಕಾರ ಪಡೆದು ಅವರನ್ನು ಬೆಂಬಲಿಸುತ್ತಿರುವವರಿಂದ ಕಾರ್ಮಿಕರ ಹಿತ ರಕ್ಷಣೆ ಸಾಧ್ಯವಿಲ್ಲ. ಈ ಬಗ್ಗೆ ಕಾರ್ಮಿಕರು ಎಚ್ಚರದಿಂದಿರಬೇಕು ಎಂದು ಸಚಿವ ತಿಳಿಸಿದರು.
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕಾರ್ಮಿಕರಿಗೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಕಾರ್ಮಿಕ ವಿಭಾಗವು ಜನತೆಗೆ ತಿಳಿಯಪಡಿಸಬೇಕಾಗಿದೆ. .ಕಾಂಗ್ರೆಸ್ ಈ ರಾಷ್ಟ್ರದಲ್ಲಿ ನಿರಂತರವಾಗಿ ಬಡವರ,ದುರ್ಬಲರ ಶೋಷಿತರ ಪರವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ.ದೇಶದಲ್ಲಿ ಕಾರ್ಮಿಕರ ಹಿತರಕ್ಷಣೆಗಾಗಿ ಭವಿಷ್ಯ ನಿಧಿಯಂತಹ ಯೋಜನೆಯನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜಾರಿಗೆ ತಂದಿದ್ದಾರೆ.
ಆದರೆ ಪ್ರಸಕ್ತ ಕೇಂದ್ರದಲ್ಲಿರುವ ಬಿಜೆಪಿ ಸರಕಾರ ನೌಕರರ ಭವಿಷ್ಯಕ್ಕೆ ಮಾರಕವಾಗುವ ತೀರ್ಮಾನವನ್ನು ತೆಗೆದುಕೊಂಡ ಪರಿಣಾಮವಾಗಿ ಕಾರ್ಮಿಕರು ಬೀದಿಗೆ ಇಳಿಯುವಂತಾಯಿತು. ಮಾತ್ರವಲ್ಲದೇ ಕೇಂದ್ರ ಸರ್ಕಾರವು ಜಾರಿಗೆ ತರಲು ಮುಂದಾಗುತ್ತಿರುವ ಕೊಟ್ಟಾ ಕಾಯ್ದೆಯ ವಿರುದ್ಧ ಜಿಲ್ಲೆಯ ತೀವ್ರ ಪ್ರತಿಭಟನೆ ನಡೆಸಬೇಕಿದೆ. ಕಾರ್ಮಿಕರ ವಿರುದ್ಧವಾದ ಕೇಂದ್ರಸರಕಾರದ ಧೋರಣೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಮಿಕರನ್ನು ಸಂಘಟಿಸಿ ಹೋರಾಟ ನಡೆಸಲು ಹಿಂಜರಿಯುವುದಿಲ್ಲ ಎಂದು ರೈ ಹೇಳಿದರು.
ಕಾರ್ಯಕ್ರಮದಲ್ಲಿ ಪರಮೇಶ್ವರ,ಅಲಿಯಬ್ಬ ಮೂಡುಶೆಡ್ಡೆ,ಬೋಜ ಕೋಟ್ಯಾನ್,ಅಪ್ಪುಸ್ವಾಮಿ,ಜಯಂತಿ ಸೇರಿದಂತೆ ವಿಶೇಷ ಸಾಧನೆಗೈದ ವಿವಿಧ ವಿಭಾಗದ 11 ಮಂದಿ ಹಿರಿಯ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ದ.ಕ. ಜಿಲ್ಲಾ ಕಾರ್ಮಿಕ ಪರಿಷತ್ ಅಧ್ಯಕ್ಷ ಐವನ್ ಡಿಸೋಜಾ, ಮುಡ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಲೋಕೇಶ್ ಹೆಗ್ಡೆ, ಕೆಪಿಸಿಸಿ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಮುಹಮ್ಮದ್ ರಫಿ , ಕಾಂಗ್ರೆಸ್ ಮುಖಂಡ ಹೇಮನಾಥ್ ಶೆಟ್ಟಿ, ಪದ್ಮನಾಭ ನರಿಂಗಾನ, ಕೆ.ಅಶ್ರಫ್, ಮುಹಮ್ಮದ್ ಎಂ.ಎಸ್,ಶಾಹುಲ್ ಹಮೀದ್,ಅನಿತಾ ಹೇಮನಾಥ ಶೆಟ್ಟಿ, ನಝೀರ್ ಮಠ, ಜಯಂತಿ,ಮುಹಮ್ಮದ್ ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.
ಹುಸೇನ್ ಕಾಟಿಪಳ್ಳ ಕಾರ್ಯಕ್ರಮ ನಿರ್ವಾಹಿಸಿದರು.