ಮಂಗಳೂರು : ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ನಡೆದು ತಿಂಗಳು ಕಳೆದರೂ ತನಿಖೆ ಕುಂಠಿತಗೊಂಡಿರುವುದನ್ನು ಖಂಡಿಸಿ, ಕೊಲೆಯ ರೂವಾರಿ ಎನ್ನಲಾದ, ನಮೋ ಬ್ರಿಗೇಡ್ ಸ್ಥಾಪಕ ನರೇಶ್ ಶೆಣೈನನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿ, ಮಂಗಳೂರಿನ ವಿದ್ಯಾರ್ಥಿ, ಯುವಜನ, ದಲಿತ, ಮಹಿಳಾ, ನಾಗರಿಕ ಸಂಘಟನೆಗಳ ಜಂಟಿ ವೇದಿಕೆಯಾದ ದೇಶಪ್ರೇಮಿ ಸಂಘಟನೆಗಳ ಒಕ್ಕೂಟ ಮೇ 2ರಂದು ಸಂಜೆ 4 ಗಂಟೆಗೆ ಬಾಳಿಗಾ ಕೊಲೆ ನಡೆದ ಕಲಾಕುಂಜ ಬಳಿಯ ಅವರ ನಿವಾಸದಿಂದ ಪೊಲೀಸ್ ಕಮೀಷನರ್ ಕಚೇರಿಯವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿವೆ.
ನರೇಶ್ ಶೆಣೈ ಪೊಲೀಸರ ಹಿಡಿತದಿಂದ ತಪ್ಪಿಸಿಕೊಳ್ಳುತ್ತಿರುವುದರ ಹಿಂದೆ ಪ್ರಬಲ ಲಾಬಿಗಳು ಕೈಯ್ಯಾಡಿಸಿರುವುದು ಸ್ಪಷ್ಟವಾಗಿದ್ದು, ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಪ್ರಯತ್ನಿಸುತ್ತಿರುವ ನರೇಶ್ ಶೆಣೈ ಬಂಧನ ಅಸಾಧ್ಯದ ಕೆಲಸವೇನಲ್ಲ, ಆದರೆ ಪೊಲೀಸರ ಕೈಕಟ್ಟಿ ಹಾಕಿರುವ ಪ್ರಬಲ ಲಾಬಿಗಳು ನರೇಶ್ ಶೆಣೈ ರಕ್ಷಣೆಗೆ ಟೊಂಕ ಕಟ್ಟಿದ್ದು, ಆ ಮೂಲಕ ಬಾಳಿಗಾ ಕೊಲೆ ಪ್ರಕರಣವನ್ನು ದಿಕ್ಕು ತಪ್ಪಿಸಲು ಯತ್ನಿಸಿವೆ.
ತಕ್ಷಣ ನರೇಶ್ ಶೆಣೈ ಸಹಿತ ಬಾಳಿಗಾ ಕೊಲೆಯ ಎಲ್ಲಾ ಆರೋಪಿಗಳ ಬಂಧನವಾಗದಿದ್ದಲ್ಲಿ ಪಾದಯಾತ್ರೆಯ ನಂತರ ಹೋರಾಟ ಇನ್ನಷ್ಟು ತೀವ್ರಗೊಳಿಸು ವುದಾಗಿ ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ಸಂಚಾಲಕರಾಗಿರುವ ಸಂತೋಷ್ ಬಜಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.