ಮಂಗಳೂರು : ರಾಜ್ಯದಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳ ನಿಷೇಧ ಜಾರಿಗೆ ಬಂದ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಗರದ ಮಳಿಗೆಗಳಿಗೆ ದಾಳಿ ಕಾರ್ಯಾಚರಣೆ ಆರಂಭಗೊಂಡಿದೆ.ಬುಧವಾರ ನಗರದ ಕೆಲವೆಡೆ ದಾಳಿ ನಡೆಸಿದ ಮನಪಾ ಅಧಿಕಾರಿಗಳು ನಿಷೇಧಿತ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳು ಹಾಗೂ ಇನ್ನಿತರ ಪ್ಲಾಸ್ಟಿಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಎ.15 ರಿಂದ ಎಲ್ಲಾ ರೀತಿಯ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳ ಬಳಕೆಗೆ ನಿಷೇಧವಿದೆ. ಕೇಂದ್ರದ ಹೊಸ ಆದೇಶದ ಪ್ರಕಾರ 50 ಮೈಕ್ರಾನ್ಗಿಂತ ಹೆಚ್ಚಿನ ಕ್ಯಾರಿಬ್ಯಾಗ್ ಬಳಕೆಗೆ ಅವಕಾಶವಿದ್ದರೂ ರಾಜ್ಯ ಸರಕಾರದ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಿಷೇಧದ ಪ್ರಕಾರ ಎಲ್ಲಾ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳು ನಿಷೇಧಿಸಲ್ಪಟಿವೆ. ಜೊತೆಗೆ ಪ್ಲಾಸ್ಟಿಕ್ ಕಪ್, ಪ್ಲಾಸ್ಟಿಕ್ ಸ್ಪೂನ್ , ಪ್ಲಾಸ್ಟಿಕ್ ಪ್ಲೇಟ್ಗಳು , ಫ್ಲೆಕ್ಸ್, ಪ್ಲಾಸ್ಟಿಕ್ ಬಂಟಿಂಗ್ಸ್ಗಳಿಗೆ ನಿಷೇಧವಾಗಿದೆ.
ಅಧಿಕಾರಿಗಳ ವಿರುದ್ಧ ವರ್ತಕರ ಆರೋಪ :
ಮನಪಾ ಅಧಿಕಾರಿಗಳು ಕಾರ್ಯಾಚರಣೆ ಸಂದರ್ಭ ನಿಷೇಧವಿಲ್ಲದ ಪ್ಲಾಸ್ಟಿಕ್ಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಈ ಸಂದರ್ಭ ಕೇಳಿಬಂದಿದೆ. ಮಂಗಳೂರು ಮಹಾನಗರದಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಿಷೇಧದ ಆದೇಶವನ್ನಿಟ್ಟುಕೊಂಡು ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳ ತಪಾಸಣೆ ನಡೆಸುತ್ತಿರುವ ಕೆಲವೊಂದು ಅಧಿಕಾರಿಗಳು ನಿಯಮವನ್ನು ಗಾಳಿಗೆ ತೂರಿ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ.
ಪ್ಯಾಕಿಂಗ್ ಮಾಡುವಂತಹ ಪ್ಲಾಸ್ಟಿಕ್ಗಳು ನಿಷೇಧದ ಪಟ್ಟಿಯಲ್ಲಿ ಇಲ್ಲದೆ ಇದ್ದರೂ ನಗರದ ಬಂದರ್ನಲ್ಲಿ ಬುಧವಾರ ದಾಳಿ ನಡೆಸಿದ ಮನಪಾದ ಅಧಿಕಾರಿಗಳು ಎಲ್ಲಾ ರೀತಿಯ ಪ್ಲಾಸ್ಟಿಕ್ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪ್ಲಾಸ್ಟಿಕ್ ವ್ಯಾಪಾರಿಗಳು ದೂರಿದ್ದಾರೆ.
ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಳನ್ನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಅಧಿಕಾರಿಗಳು ಯಾವೆಲ್ಲ ವಸ್ತುಗಳನ್ನು, ಎಷ್ಟು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂಬ ಮಹಜರು ನಡೆಸಬೇಕು ಮತ್ತು ಯಾವುದೇ ಕಾರಣಕ್ಕೂ ವರ್ತಕರಿಗೆ ಹಿಂಸೆ ಮಾಡಬಾರದು ಎಂದು ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ (ಎನ್ಜಿಟಿ) ನ ಆದೇಶವಿದೆ. ಈ ಆದೇಶವಿದ್ದರೂ ದಾಳಿ ನಡೆಸುವ ಅಧಿಕಾರಿಗಳು ಎನ್ ಜಿ ಟಿ ನೀಡಿದ ನಿರ್ದೇಶನಗಳನ್ನು ಪಾಲಿಸುತ್ತಿಲ್ಲ ಎಂದು ವರ್ತಕರು ಆರೋಪ ಮಾಡಿದ್ದಾರೆ.
ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳಿಗೆ ನಿಷೇಧವಿರುವುದರಿಂದ ದಾಳಿ ಮಾಡುವ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳನ್ನು ತೆಗೆದುಕೊಂಡು ಹೋಗುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ನಿಷೇಧವಿಲ್ಲದೆ ಇರುವ ಹಲವು ಬಗೆಯ ಪ್ಲಾಸ್ಟಿಕ್ಗಳನ್ನು ಕೊಂಡು ಹೋಗುತ್ತಿರುವುದು ತಪ್ಪು. ಈ ಬಗ್ಗೆ ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ಗೆ ದೂರು ನೀಡುವುದಾಗಿ ಕೆನರಾ ಪ್ಲಾಸ್ಟಿಕ್ ಮ್ಯಾನ್ಯಪ್ಯಾಕ್ಚರ್ ಆ್ಯಂಡ್ ಟ್ರೇಡ್ರ್ ಅಸೋಸಿಯೇಶನ್ ಅಧ್ಯಕ್ಷರು ತಿಳಿಸಿದ್ದಾರೆ.