ಮಂಗಳೂರು,ಎ.26 : ಮಂಗಳೂರು ಆಕಾಶವಾಣಿಯ ಕಲ್ಯಾಣವಾಣಿ ಜನಪರ ಯೋಜನೆಗಳ ಸರಣಿಯಲ್ಲಿ ಮೂಡಿಬರುತ್ತಿರುವ ‘ಬಾನುಲಿ ಗ್ರಾಮಾಯಾಣ’ ದಲ್ಲಿ ಏಪ್ರಿಲ್.27 ರಂದು ಬೆಳಿಗ್ಗೆ 8.50 ಕ್ಕೆ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದರ್ಶನದ ನುಡಿಚಿತ್ರ ಪ್ರಸಾರವಾಗಲಿದೆ.
ಬಡಗನ್ನೂರು-ಪಡುವನ್ನೂರು ಗ್ರಾಮಗಳ ಪಂಚಾಯತ್ ವ್ಯಾಪ್ತಿಯಲ್ಲಿರುವ ಪಡುಮಲೆ ಧರ್ಮಚಾವಡಿ, ಕೋಟಿಚೆನ್ನಯರ ಜನ್ಮಸ್ಥಳ, ಶಂಖಪಾಲ ಗುಡ್ಡೆ, ಗೆಜ್ಜೆಗಿರಿ ನಂದನ ಬಿತ್ತಿಲ್, ದೇಯಿಬೈದೆತಿ ಔಷಧಿವನ, ಕೂವೆತೋಟ ಶಾಸ್ತರ ದೇಗುಲ, ಪೂಮಾಣಿ ಕಿನ್ನಿಮಾಣಿ ದೈವಸ್ಥಾನ, ಪಳ್ಳಿ ದೇವರು ಮುಂತಾದ ಐತಿಹ್ಯ ಸ್ಥಳಗಳ ಅಪೂರ್ವ ಮಾಹಿತಿ, ಪಂಚಾಯತ್ ವ್ಯಾಪ್ತಿಯ ಕೃಷಿ, ಕಲಾಕ್ಷೇತ್ರ ಹೀಗೆ ಹಲವು ವಿಷಯಗಳ ಕುರಿತು ಕೆ.ಸಿ.ಪಾಚಾಳಿ, ಬಾಲಕೃಷ್ಣ ರೈ ಕುದ್ಕಾಡಿ, ದೇವಿಪ್ರಸಾದ್ ಪಂಚಾಯತ್ ಅಧ್ಯಕ್ಷ ಕೇಶವಗೌಡ, ಮಹಮ್ಮದ್ ಬಡಗನ್ನೂರು ಮಣಿತ್ ರೈ, ವಿಶ್ವನಾಥ ಪೂಜಾರಿ, ಹಮೀದ್ , ಶ್ರೀಧರ ಪೂಜಾರಿ, ಅರಣ್ಯ ಸಂರಕ್ಷಣಾಧಿಕಾರಿ ವಿ.ಪಿ, ಕಾರ್ಯಪ್ಪ ಮುಂತಾದವರು ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.
ದೇಯಿಬೈದೆತಿ ವಾಸದ ಮನೆಯ ಶ್ರೀಮತಿ ಲೀಲಾವತಿ ದೇಯಿಬೈದೆತಿ ಕುರಿತು ಪಾಡ್ದಾನ ಹಾಡಿದ್ದಾರೆ. ಬಾನುಲಿ ಗ್ರಾಮಾಯಾಣಕ್ಕೆ ಆಯ್ಕೆಯಾದ ಗ್ರಾಮದೆಡೆಗೆ ಆಕಾಶವಾಣಿಯ ನಡಿಗೆಯಾಗಿದ್ದು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದೆ.
ಈ ಕಾರ್ಯಕ್ರಮವನ್ನು ಕಾರ್ಯಕ್ರಮ ನಿರ್ವಾಹಕರಾದ ಡಾ.ಸದಾನಂದ ಪೆರ್ಲ ನಿರ್ಮಾಣ ಮಾಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.