ಮಂಗಳೂರು,ಎ.25: ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗಾಗಿ ದಾಖಲಾದ ಒಂದೂವರೆ ವರ್ಷದ ಮಗು ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದೆ ಎಂದು ಆರೋಪಿಸಿ ಮಗುವಿನ ಪೋಷಕರು ಹಾಗೂ ಸಾರ್ವಜನಿಕರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಬಾನುವಾರ ಸಂಜೆ ನಡೆದಿದೆ.
ಜೋಕಟ್ಟೆ ನಿವಾಸಿಗಳಾದ ಶಕೀರ್ ಹಾಗೂ ಸಜರಾ ದಂಪತಿಗಳ ಒಂದೂವರೆ ವರ್ಷದ ಮಗು ಶೈಮ್ ರವಿವಾರ ಬೆಳಿಗ್ಗೆ ಮನೆಯ ಮೆಟ್ಟಿಲಿನಿಂದ ಜಾರಿ ಬಿದ್ದು ಸಣ್ಣ ಪ್ರಮಾಣದ ಗಾಯವಾಗಿತ್ತು. ಮಗುವಿನ ಪೋಷಕರು ತಕ್ಷಣ ಮಗುವನ್ನು ನಗರದ ಫಳ್ನಿರ್ನಲ್ಲಿರುವ ಯುನಿಟಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಿಕಿತ್ಸೆ ಆರಂಭಿಸಿದ ವೈದ್ಯರು ರೂ.ಎಂಟು ಸಾವಿರಕ್ಕೂ ಹೆಚ್ಚು ಮೌಲ್ಯದ ಔಷಧಿಗಳನ್ನು ತಮ್ಮದೇ ಆಸ್ಪತ್ರೆಯ ಮೆಡಿಕಲ್ನಿಂದ ತರಿಸಿಕೊಂಡಿದ್ದಾರೆ. ಆದರೆ ಸಂಜೆಯಾಗುತ್ತಲೇ ಚಿಕಿತ್ಸೆಗೆ ಸ್ಪಂದಿಸದೆ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದರಿಂದ ಆಕ್ರೋಶಿತರಾದ ಮಗುವಿನ ಪೋಷಕರು, ಸಂಬಂಧಿಕರು ಹಾಗೂ ಸಾರ್ವಜನಿಕರು ಆಸ್ಪತ್ರೆಯ ಮುಂದೆ ಸೇರಿ ಪ್ರತಿಭಟನೆ ನಡೆಸಿದರು. ಬೆಳಿಗ್ಗೆ ಸಾವಿರಾರು ರೂ.ಗಳ ಔಷಧಿಗಳನ್ನು ತರಿಸಿದ ವೈದ್ಯರು ಅದನ್ನು ಮಗುವಿಗೆ ನೀಡದೇ ಮಗುವಿನ ಸಾವಿಗೆ ಕಾರಣರಾಗಿದ್ದಾರೆ ಎಂದು ವೈದ್ಯರು ತರಿಸಿರುವ ಔಷಧಿಗಳನ್ನು ಅಸ್ಪತ್ರೆ ಮುಂಭಾಗ ಸುರಿದು ಆಕ್ರೋಷ ವ್ಯಕ್ತಪಡಿಸಿದರು. ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಮೃತಪಟ್ಟಿದೆ ಎಂದು ಆರೋಪಿಸಿರುವ ಪೋಷಕರು ವೈದ್ಯರ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ.
ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಕಾರರ ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಮಗುವಿನ ಪೋಷಕರು ಹಾಗೂ ಸಂಬಂಧಿಕರು ಯಾವೂದೇ ರಾಜಿಗೊಪ್ಪದೇ ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ದೂರು ದಾಖಲಿಸುವಂತೆ ಒತ್ತಾಯಿಸಿದ್ದಾರೆ.