ಮಂಗಳೂರು,ಎ.25: ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದ ಯುವಕನೋರ್ವನ ಮೇಲೆ ಕಾವೂರು ಪೊಲೀಸ್ ನಿರೀಕ್ಷಕರು ಸೇರಿ ಸಿಸಿಬಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಸೇತಿ ಅವಾಚ್ಯವಾಗಿ ನಿಂದಿಸಿ, ಈತನ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಕಾವೂರು ಶಾಂತಿನಗರದ ತವಕ್ಕಲ್ ಹೌಸ್ ನಿವಾಸಿ ಹಸನಬ್ಬ ಎಂಬವರ ಪುತ್ರ ಮುಹಮ್ಮದ್ ಇಕ್ಬಲ್ (36) ಎಂಬವರೇ ಸಿಸಿಬಿ ಪೊಲೀಸರಿಂದ ಹಲ್ಲೆಗೊಳಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸಿಸಿಬಿಯವರು ಕೆಲವು ತಿಂಗಳ ಹಿಂದೆ ಕಾವೂರು ಠಾಣೆಯಲ್ಲಿ ದಾಖಲಿಸಿದ್ದ ಕೊಲೆಗೆ ಸಂಚು ರೂಪಿಸಿದ್ದ ಎಂಬ ಪ್ರಕರಣವೊಂದರಲ್ಲಿ ಇಕ್ಬಾಲ್ನನ್ನು ಕೂಡಾ ಓರ್ವ ಆರೋಪಿ ಎಂದು ಪರಿಗಣಿಸಲಾಗಿದೆ. ತನ್ನನ್ನು ಪೊಲೀಸರು ಹುಡುಕಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಇಕ್ಬಾಲ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಇದರಂತೆ ಇಕ್ಬಾಲ್ಗೆ ನಿರೀಕ್ಷಣಾ ಜಾಮೀನು ಲಭಿಸಿದ್ದು, ಅದನ್ನು ಕಾವೂರು ಠಾಣಾ ನಿರೀಕ್ಷಕರಿಗೆ ನೀಡಲು ಏಪ್ರಿಲ್ 19ರಂದು ಮಧ್ಯಾಹ್ನ ಠಾಣೆಗೆ ತೆರಳಿದ್ದರು. ವಿಚಾರಣೆ ನಡೆಸಿದ ನಂತರ ಪೊಲೀಸ್ ನಿರೀಕ್ಷಕ ನಟರಾಜ್, ತನ್ನನ್ನು ಅರೆನಗ್ನಗೊಳಿಸಿ ಸಂಜೆ 6ರವರೆಗೆ ಸೆಲ್ನಲ್ಲಿ ಕುಳ್ಳಿರಿಸಿದ್ದಾರೆ ಎಂದು ಇಕ್ಬಾಲ್ ಆರೋಪಿಸಿದ್ದಾನೆ.
ಪೊಲೀಸರ ದೌರ್ಜ್ಯನದಿಂದಾದಿ ಕೈ ಮೂಳೆ ಮುರಿದಿದ್ದು ಕಾಲುಗಳ ಗಂಟುಗಳಲ್ಲಿ ಸೆಳೆತ ಉಂಟಾಗಿದ್ದು, ತೀವ್ರ ತರದ ನೋವನ್ನು ಅನುಭವಿಸುತ್ತಿದ್ದೇನೆ. ಅದುದರಿಂದ ಸಿಸಿಬಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಇಕ್ಬಾಲ್ ಸಂಭಂಧಪಟ್ಟವರಲ್ಲಿ ಮನವಿ ಮಾಡಿಕೊಂಡಿದ್ದಾನೆ.
ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.