ಮಂಗಳೂರು,ಎ.23: ಪಣಂಬೂರು ಬೀಚ್, ನೇತ್ರಾವತಿ ರೈಲ್ವೇ ಸೇತುವೆ, ಕಟೀಲು ದೇವಾಸ್ಥಾನ, ಜೋಕಟ್ಟೆಯಲ್ಲಿ ಒಎಂಪಿಎಲ್ ಪೈಪ್ಲೈನ್ ಮೊದಲಾದ “ಬಾಂಬ್’ ಇದೆ ಎಂಬ ವದಂತಿ ಜನರಲ್ಲಿ ಒಂದು ಹಂತದಲ್ಲಿ ಆತಂಕ ಉಂಟು ಮಾಡಿದೆ. ಪೊಲೀಸರ ಓಡಾಟ ಮತ್ತು ಹುಡುಕಾಟ, ಶ್ವಾನದಳ, ಬಾಂಬ್ ನಿಷ್ಕ್ರೀಯ ದಳಗಳಿಂದ ತಪಾಸಣೆ.ಪ್ರಾರಂಭವಾಯಿತು. ಆದರೆ ಬಳಿಕ ಅದೊಂದು ಅಣಕು ಕಾರ್ಯಾಚರಣೆ ಎಂದು ಖಾತರಿಯಾದ ಬಳಿಕ ನಿಟ್ಟುಸಿರು ಬಿಟ್ಟರು.
ಮಿಲಾಗ್ರಿಸ್ ಚರ್ಚ್ ಆವರಣದಲ್ಲಿ ದಿಢೀರನೆ ಪೊಲೀಸ್ ಜೀಪ್ ಬಂದು ನಿಂತಾಗ ಅಲ್ಲಿದ್ದ ಎಲ್ಲರಲ್ಲಿಯೂ ಕುತೂಹಲ ಮನೆ ಮಾಡಿತ್ತು. ಪೊಲೀಸರು ಜೀಪ್ನಿಂದ ಇಳಿದು ಇಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಮಾಹಿತಿ ಇದೆ ಎಂದು ತಿಳಿಸಿ ಎಲ್ಲೆಡೆ ಹುಡುಕಲು ಆರಂಭಿಸಿದರು. ಹಾಗೆ ಚರ್ಚ್ನ ಒಳಗೆ ತೀವ್ರ ಶೋಧ ಮುಂದುವರಿಸಿದಾಗ ಮುಖ್ಯ ಪ್ರವೇಶ ದ್ವಾರದ ಬಳಿ ಎಡ ಬದಿಯಲ್ಲಿ ಗೋಡೆಯ ಸಮೀಪ ಗಿಫ್ಟ್ ಪೇಪರ್ನಲ್ಲಿ ಸುತ್ತಿದ ಬಾಕ್ಸ್ ಒಂದು ಪತ್ತೆಯಾಗಿತ್ತು.
ಬಾಕ್ಸ್ ಬಿಚ್ಚಿ ಪರಿಶೀಲಿಸಿದಾಗ ಅದರಲ್ಲಿ ಲೋಹದ ವೈರ್ ಪತ್ತೆಯಾದವು. ಶೂ ಬಾಕ್ಸ್ ಒಂದರಲ್ಲಿ ಅವುಗಳನ್ನು ತುಂಬಿಸಿ ಪ್ಯಾಕ್ ಮಾಡಿ ಅದಕ್ಕೆ ಗಿಫ್ಟ್ ಪೇಪರ್ ಸುತ್ತಲಾಗಿತ್ತು. ಪೊಲೀಸರು ಅವುಗಳನ್ನು ವಶಕ್ಕೆ ತೆಗೆದು ಕೊಂಡೊಯ್ದರು. ಅದರೆ ಈ ಕಾರ್ಯಚರಣೆ ಕೇವಲ ಒಂದು ಅಣಕು ಪ್ರದರ್ಶನ ಎಂದು ಪತ್ತೆ ಕಾರ್ಯದ ನೇತೃತ್ವ ವಹಿಸಿದ್ದ ಪಾಂಡೇಶ್ವರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ದಿನಕರ ಶೆಟ್ಟಿ ಅವರು ಬಳಿಕ ತಿಳಿಸಿದರು.