ಬಂಟ್ವಾಳ,ಎ.22 : ಬಂಟ್ವಾಳ ತಾಲೂಕಿನ ಸಜಿಪ ಮೂಡಾ ಗ್ರಾಮದ ಸುಭಾಷ್ನಗರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ವತಿಯಿಂದ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬ್ರಹ್ಮಶ್ರೀ ನಾರಾಯಣ ಗುರು ಜ್ಞಾನ ಮಂದಿರವನ್ನು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೈದರು.
ಬಳಿಕ ನಡೆದ ಸಭಾಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಮುಂದಿನ ವರ್ಷದದಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ ಜನ್ಮ ದನಾಚರಣೆಯನ್ನು ಸರಕಾರದ ವತಿಯಿಂದಲೇ ಆಚರಿಸಲಾಗುವುದು ಎಂದು ಹೇಳಿದರು. ನಾರಾಯಣ ಗುರುಗಳ ಬಗ್ಗೆ ಅಪಾರವಾದ ಗೌರವವನ್ನು ಹೊಂದಿರುವ ತಾನು ಜನರಲ್ಲಿ ಧಾರ್ಮಿಕ ಜಾಗೃತಿಯನ್ನುಂಟುಮಾಡುವ ಮೂಲಕ ಸಮಾಜದಲ್ಲಿ ಸುಧಾರಣೆ ತರಳು ಪ್ರಯತ್ನಿಸಿದವರಾಗಿದ್ದು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಲು ಪ್ರಮಾಣಿಕ ಪ್ರಯತ್ನ ಮಾಡಿದಾಗ ಜ್ಞಾನ ಮಂದಿರದ ನಿರ್ಮಾಣ ಸಾರ್ಥಕವೆನಿಸುವುದು ಎಂದು ಅವರು ಹೇಳಿದರು.
ಜಾತಿವ್ಯವಸ್ಥೆ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿಯ ಅಗತ್ಯವಿದೆ. ಇದನ್ನೇ ಡಾ. ಬಿ.ಆರ್.ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದರು. ಜಾತಿ ಜಾತಿಯ ನಡುವೆ ಆರ್ಥಿಕ, ಸಮಾಜಿಕ ಸಮಾನತೆ ಬಂದಾಗ ಮಾತ್ರ ಜಾತಿ ವ್ಯವಸ್ಥೆಯನ್ನೇ ಹೋಗಲಾಡಿಸಲು ಸಾಧ್ಯ ಎಂದ ಅವರು, ಎಲ್ಲ ಜಾತಿಯ ಬಡವರಿಗೆ ವಿಶೇಷವಾದ ಸವಲತ್ತು ಮತ್ತು ಸೌಲಭ್ಯಗಳನ್ನು ಒದಗಿಸಿದಾಗ ಅವರು ಕೂಡಾ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯ. ಇದಕ್ಕೆ ಕಾಂಗ್ರೆಸ್ ಸರಕಾವು ಬದ್ಧವಾಗಿದೆ ಎಂದು ಹೇಳಿದರು.
ಪೂಜಾರಿಯನ್ನು ಕೊಂಡಾಡಿದ ಸಿ.ಎಂ:
ಕುದ್ರೋಳಿ ದೇವಸ್ಥಾನದಲ್ಲಿ ದಲಿತ ಮಹಿಳೆಯರನ್ನು ಅರ್ಚಕರನ್ನಾಗಿಸುವ ಮೂಲಕ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಕ್ರಾಂತಿಕಾರಿ ಕೆಲಸ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಂಡಾಡಿದರು. ನಾಡುಕಂಡ ಶ್ರೇಷ್ಠ ದಾರ್ಶನಿಕರಾದ ಬುದ್ಧ, ಬಸವಣ್ಣ, ಪೇರಿಯಾರ್, ಅಂಬೇಡ್ಕರ್ ಮೊದಲಾದವರಂತೆ ನಾರಾಯಣಗುರು ಕೂಡಾ ಅಧರ್ಮಿಯ ಆಚರಣೆಯ ವಿರುದ್ಧ ಹೋರಾಟವನ್ನು ಮಾಡಿದ್ದರು.
ಜನಾರ್ದನ ಪೂಜಾರಿಯ ಈ ಕ್ರಾಂತಿಕಾರಿ ಕೆಲಸಕ್ಕೆ ನಾರಾಯಣ ಗುರು ನಾಂದಿ ಹಾಡಿದ್ದರು ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಡವರು ಬ್ಯಾಂಕ್ ಮೆಟ್ಟಿಲು ಹತ್ತಲೂ ಸಾಧ್ಯವಾಗದ ಕಾಲವೊಂದಿದ್ದು, ಜನಾರ್ದನ ಪೂಜಾರಿ ಕೇಂದ್ರ ವಿತ್ತ ಸಚಿವರಾಗಿದ್ದಾಗ ಮಾಡಿದ ಮಹಾ ಕಾರ್ಯದಿಂದಾಗಿ ಇಂದು ಬಡವರು ಬ್ಯಾಂಕ್ ಮೆಟ್ಟಿಲು ಹತ್ತುವಂತಾಗಿದೆ ಎಂದು ವೇದಿಯಲ್ಲಿ ಅವರ ಮುಖವನ್ನು ನೋಡುತ್ತಲೇ ಶ್ಲಾಘಿಸಿದರು.