ಮಂಗಳೂರು / ಸುರತ್ಕಲ್, ಎ.22: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುರತ್ಕಲ್ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಚಾಲನೆ ನೀಡಿದರು. ಸುರತ್ಕಲ್ ಕೇಂದ್ರ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸುರತ್ಕಲ್ ಪ್ರದೇಶದಲ್ಲಿ 9.30 ಕೋ.ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಸುರತ್ಕಲ್ ಪರಿಸರದಲ್ಲಿ ಸುಸಜ್ಜಿತ ಸರಕಾರಿ ಆಸ್ಪತ್ರೆಯಾಗಬೇಕು ಎನ್ನುವ ಇಲ್ಲಿಯ ಜನತೆಯ ಬೇಡಿಕೆಯನ್ನು ಸರ್ಕಾರ ಈಡೇರಿಸುವ ಇಂಗಿತವನ್ನು ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಸರಕಾರ ಈ ಬಾರಿ ಹೊಸ ಸರಕಾರಿ ಆಸ್ಪತ್ರೆಗಳನ್ನು ಆರಂಭಿಸುವ ಉದ್ದೇಶ ಹೊಂದಿಲ್ಲ. ಆದರೆ ಸುರತ್ಕಲ್ ಪ್ರದೇಶದ ಜನರ ಬೇಡಿಕೆ ಹಾಗೂ ಶಾಸಕರ ಆಗ್ರಹದ ಹಿನ್ನೆಲೆಯಲ್ಲಿ ಹೊಸ ಆಸ್ಪತ್ರೆ ಆರಂಭಿಸುವ ಬಗ್ಗೆ ಪರಿಶೀಲಿಸುವಂತೆ ಸ್ಥಳದಲ್ಲಿದ್ದ ಆರೋಗ್ಯ ಸಚಿವರಿಗೆ ಅವರು ಸೂಚಿಸಿದರು.
ಜನರ ನಡುವಿನ ಸಾಮರಸ್ಯಕ್ಕೆ ಅಡ್ಡಿಪಡಿಸುವ ಮೂಲಭೂತವಾದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರಕಾರ ಹಿಂಜರಿಯುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದರು.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎ.ಮೊಯ್ದಿನ್ ಬಾವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ.ಖಾದರ್, ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್, ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ, ಮನಪಾ ಮೇಯರ್ ಕೆ.ಹರಿನಾಥ್, ಉಪ ಮೇಯರ್ ಸುಮಿತ್ರಾ ಕೆ., ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಜಿಪಂ ಸಿಇಒ ಶ್ರೀವಿದ್ಯಾ, ಎಂಆರ್ಪಿಎಲ್ ಆಡಳಿತ ನಿರ್ದೇಶಕ ಕುಮಾರ್, ಮನಪಾ ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ,ಉಪ ಆಯುಕ್ತ ಎನ್.ಶಿವಶಂಕರ ಸ್ವಾಮಿ, ಮನಪಾ ಸದಸ್ಯರಾದ ಅಶೋಕ್ ಶೆಟ್ಟಿ, ಪುರುಷೋತ್ರಮ ಚಿತ್ರಾಪುರ, ಪ್ರತಿಭಾ ಕುಳಾಯಿ, ಬಶೀರ್ ಅಹ್ಮದ್, ರೇವತಿ, ಗುಣಕರ ಶೆಟ್ಟಿ, ಮೀರಾ, ಕಾಂಗ್ರೆಸ್ ಮುಖಂಡರಾದ ಜಿ.ಎ.ಬಾವ, ಬಿ.ಎಂ.ಫಾರೂಕ್, ಮುಮ್ತಾಝ್ ಅಲಿ, ಶಶಿಧರ ಹೆಗ್ಡೆ, ಅಪ್ಪಿ, ಲ್ಯಾನ್ಸಿ ಲಾಟ್ ಪಿಂಟೊ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸುರತ್ಕಲ್ನಲ್ಲಿ ಸಿಎಂ ಚಾಲನೆ ನೀಡಿದ ಯೋಜನೆಗಳು :
130 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿ ರುವ ಮಾರುಕಟ್ಟೆ ಸಂಕೀರ್ಣದ 1.70 ಕೋ.ರೂ. ವೆಚ್ಚದ ಪೂರ್ವಭಾವಿ ಕಾಮಗಾರಿ.
ಸುರತ್ಕಲ್ನಲ್ಲಿ ಮನಪಾ ಪ್ರಾದೇಶಿಕ ಕಚೇರಿಗೆ 2.25 ಕೋ.ರೂ. ವೆಚ್ಚದ ನೂತನ ಕಟ್ಟಡ ನಿರ್ಮಾಣ
55 ಕೋ.ರೂ ವೆಚ್ಚದಲ್ಲಿ ನಿರ್ಮಾಣವಾಗಲಿ ರುವ ಸುರತ್ಕಲ್-ಎಂಆರ್ಪಿಎಲ್ ಷಟ್ಪಥ ರಸ್ತೆಯ ಮೊದಲ ಹಂತದ ಕಾಮಗಾರಿ.
ಒಂದು ಕೋ.ರೂ .ವೆಚ್ಚದಲ್ಲಿ ನಿರ್ಮಾಣವಾ ಗಲಿರುವ ಯು.ಶ್ರೀನಿವಾಸ ಮಲ್ಯ ಸ್ಮಾರಕ ಭವನದ ಮುಂದುವರಿದ ಕಾಮಗಾರಿ.
1.60 ಕೋ.ರೂ. ವೆಚ್ಚದ ಈಜುಕೊಳ ನಿರ್ಮಾಣ ಯೋಜನೆ.