ಮಂಗಳೂರು,ಎ.20: ನಗರದ ಕದ್ರಿ ಪಾರ್ಕ್ ಸಮೀಪ ಸೋಮವಾರ ಪಾರ್ಕ್ ಮಾಡಿದ್ದ ಕಾರಿನ ಒಳಭಾಗ (ಮುಂಭಾಗ) ದಲ್ಲಿ ಸಂಭವಿಸಿದ ನಿಗೂಢ ಸ್ಪೋಟದ ತನಿಖೆಗೆ ಬೆಂಗಳೂರಿನಿಂದ ವಿಶೇಷ ತಂಡವೊಂದು ಬುಧವಾರ ನಗರಕ್ಕೆ ಅಗಮಿಸಿ ಪರಿಶೀಲನೆಯಲ್ಲಿ ತೊಡಗಿದೆ.
ಉರ್ವಾಸ್ಟೋರ್ ಸಮೀಪದ ದಡ್ಡಲ್ಕಾಡ್ ನಿವಾಸಿ ಮ್ಯಾಕ್ಸ್ವೆಲ್ ಅವರು ಕದ್ರಿ ಪಾರ್ಕ್ ಬಳಿ ತಮ್ಮ ಮಾರುತಿ ಸ್ವೀಪ್ಟ್ ಕಾರು ನಿಲ್ಲಿಸಿ ತಮ್ಮ ಪತ್ನಿಯೊಂದಿಗೆ ಪಕ್ಕದಲ್ಲೇ ಇದ್ದ ಗುಹೆ ನೋಡಲು ತೆರಳಿದ್ದರು. ಮತ್ತೆ ಮರಳಿ ಬಂದಾಗ ಕಾರಿನ ಬಾಗಿಲು ತೆಗೆಯುವ ನಿಟ್ಟಿನಲ್ಲಿ ಕಾರಿನ ಕೀ ಮೂಲಕ ಸೆಂಟರ್ ಲಾಕ್ ಬಟನ್ ಅದುಮಿದ್ದಾರೆ.ಈ ವೇಳೆ ಕಾರಿನೊಳಗಿನಿಂದ ಲಘು ಸ್ಪೋಟದ ಶಬ್ಡ ಕೇಳಿ ಬಂದಿದ್ದು, ಕಾರಿನ ಸಮೀಪ ಬಂದು ನೋಡಿದಾಗ ಕಾರಿನ ಮುಂಭಾಗಕ್ಕೆ ಹಾನಿಯಾಗಿರುವುದು ಕಂಡುಬಂದಿದೆ.
ಕೂಡಲೇ ಮ್ಯಾಕ್ಸ್ವೆಲ್ ಅವರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ತಕ್ಷಣ ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಬಾಂಬ್ ಪತ್ತೆದಳ ತಂಡದವರು ಅಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಧರ್ಭ ಸ್ಪೋಟಕದ ವೈಯರೊಂದನ್ನು ಕಾರಿನ ಎಡ ಇಂಡಿಕೇಟರ್ಗೆ ಸಂಪರ್ಕಿಸಿರುವುದು ಕಂಡು ಬಂದಿದೆ.
ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದರು. ಇದೀಗ ಹಿರಿಯ ಪೊಲೀಸ್ ಅಧಿಕಾರಿಗಳ ನಿರ್ದೇಶನದ ಮೇರೆಗೆ ಈ ನಿಗೂಢ ಸ್ಪೋಟದ ತನಿಖೆಗೆ ಬೆಂಗಳೂರಿನಿಂದ ವಿಶೇಷ ತಂಡ ಮಂಗಳೂರಿಗೆ ಅಗಮಿಸಿ ಪರಿಶೀಲನೆಯಲ್ಲಿ ತೊಡಗಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ತನಿಖೆಯಿಂದ ಇನ್ನಷ್ಟೇ ತಿಳಿದು ಬರಬೇಕಿದೆ.