ಮಂಗಳೂರು,ಎ.19: ನೇತ್ರಾವತಿ ನದಿಯಲ್ಲಿ ಜಲಬತ್ತಿ ಹೋಗಿ ತುಂಬೆ ಡ್ಯಾಂನಲ್ಲಿ ನೀರಿನ ಕೊರತೆ ಎದುರಿಸುತ್ತಿರುವ ಮಂಗಳೂರಿನ ಮಹಾಜನತೆಯ ಸಮಸ್ಯೆ ನೀಗುವುದಕ್ಕಾಗಿ ದಿನೇ ದಿನೇ ಹೆಚ್ಚುತ್ತಿರುವ ತಾಪಮಾನದ ಹಿನ್ನಲೆಯಲ್ಲಿ ಮಳೆಗಾಗಿ ಹಾಗೂ ಭೂಮಿಯ ತಂಪಿಗಾಗಿ, ನಾಡಿನ ಸುಭಿಕ್ಷೆಗಾಗಿ ಇಂದು ಬೆಳಿಗ್ಗೆ ಶ್ರೀ ಕ್ಷೇತ್ರ ಕದ್ರಿಯಲ್ಲಿ ಪರ್ಜನ್ಯ ಜಪ ಹಾಗೂ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲಾಯ್ತು.
ಕ್ಷೇತ್ರದ ಅರ್ಚಕರಾದ ವಿಠಲದಾಸ ತಂತ್ರಿ, ರಾಮ ಅಡಿಗ, ವಿದ್ವಾನ್ ಪ್ರಭಾಕರ ಅಡಿಗ, ಗೋಪಾಲಕೃಷ್ಣ ಅಡಿಗ ಮೊದಲಾದವರ ನೇತೃತ್ವದಲ್ಲಿ ಪರ್ಜನ್ಯ ಜಪ ಹಾಗೂ ಪೂಜೆ ಸಲ್ಲಿಸಲಾಯ್ತು.
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀ ಹರಿನಾಥ್, ಶಾಸಕ ಜೆ. ಆರ್. ಲೋಬೋ ನೇತೃತ್ವದಲ್ಲಿ ಹಾಗೂ ಎಸ್. ಪ್ರದೀಪ ಕುಮಾರ ಕಲ್ಕೂರ ಮಾರ್ಗದರ್ಶನದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆಡಳಿತಾಧಿಕಾರಿ ನಿಂಗಯ್ಯ, ಮನಪಾ ಕಾರ್ಪೊರೇಟರ್ಗಳಾದ ಅಶೋಕ್ ಡಿ.ಕೆ., ನಾಗವೇಣಿ, ಉದ್ಯಮಿ ಸುಂದರ ಶೆಟ್ಟಿ, ಸುಧಾಕರ ರಾವ್ ಪೇಜಾವರ ಮತ್ತಿತರ ಗಣ್ಯರನೇಕರು ಉಪಸ್ಥಿತರಿದ್ದರು.