ಕಾಸರಗೋಡು, ಏ.13 : ಹೊಳೆಗೆ ಸ್ನಾನಕ್ಕಿಳಿದ ಇಬ್ಬರು ಮದ್ರಸ ವಿದ್ಯಾರ್ಥಿಗಳು ಮೃತಪಟ್ಟ ದಾರುಣ ಘಟನೆ ನಿನ್ನೆ ಮಧ್ಯಾಹ್ನ ಬೇಡಡ್ಕ ಕುಂಡಗುಯಿಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಗಳನ್ನು ಕೇಳತ್ತೂರು ಕಲ್ಲಡಕುಟ್ಟಿಯ ಅಬ್ದುಲ್ಲಾ ಎಂಬವರ ಪುತ್ರ ಜಾಬಿರ್ (12) ಮತ್ತು ಕೋಬಿಕ್ಕೋಟ್ ರಾಮನಗರದ ಅಬೂಬಕರ್ ಎಂಬವರ ಪುತ್ರ ಜೈನುಲ್ ಆಬಿದ್ (20) ಎಂದು ಗುರುತಿಸಲಾಗಿದೆ. ಇವರ ಜೊತೆಗಿದ್ದ ಐದು ಮಂದಿ ಅಪಾಯದಿಂದ ಪಾರಾಗಿದ್ದಾರೆ.
ಜಾಬಿರ್ ಕೋಜಿಕ್ಕೊಡ್ ಓಮನಶ್ಯೇರಿ ದಾರುಲ್ ಹರ್ಖಾ ಜೂನಿಯರ್ ಕಾಲೇಜಿನ ಏಳನೇ ತರಗತಿ ವಿದ್ಯಾರ್ಥಿಯಾಗಿದ್ದ. ಜಾಬಿರ್ ಹಾಗೂ ಜೈನುಲ್ ಆಬಿದ್ ಜೊತೆಯಾಗಿ ಕೋಝಿಕ್ಕೋಡ್ ನ ಮದ್ರಸವೊಂದರಲ್ಲಿ ಕಲಿಯುತ್ತಿದ್ದರು. ಸೋಮವಾರ ಜಾಬಿರ್ ನ ಸಹೋದರಿಯ ವಿವಾಹ ಸಮಾರಂಭವಿದ್ದು, ಇದರಲ್ಲಿ ಪಾಲ್ಗೊಳ್ಳಲು ಜೈನುಲ್ ಆಬಿದ್ ಮತ್ತು ಸ್ನೇಹಿತರು ಬಂದಿದ್ದರು.
ಮಧ್ಯಾಹ್ನ ಸ್ನೇಹಿತರ ಜೊತೆ ಹೊಳೆಗೆ ಸ್ನಾನಕ್ಕಿಳಿದಿದ್ದು, ಈ ಸಂದರ್ಭ ಘಟನೆ ನಡೆದಿದೆ. ಜೊತೆಗಿದ್ದವರು ಇವರಿಬ್ಬರನ್ನು ರಕ್ಷಿಸಲೆತ್ನಿಸಿದರೂ ಸಾಧ್ಯವಾಗಲಿಲ್ಲ. ಈ ವೇಳೆ ಬೊಬ್ಬೆ ಕೇಳಿ ಧಾವಿಸಿ ಬಂದ ಸ್ಥಳೀಯರು ಇಬ್ಬರನ್ನೂ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದರೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿರಿಸಲಾಗಿದೆ.