ಮಂಗಳೂರು,ಏ.08 : ದೇಶದಲ್ಲಿ ಕೋಟ್ಯಂತರ ಬೀಡಿ ಕಾರ್ಮಿಕರು ಹಾಗೂ ತಂಬಾಕು ಬೆಳೆಗಾರರ ಜೀವನಾಧಾರವನ್ನೇ ಕಸಿದುಕೊಳ್ಳುವ ಇಂತಹ “ತಂಬಾಕು ವಿರೋಧಿ ನೀತಿ’ಯನ್ನು ತತ್ಕ್ಷಣದಿಂದ ಕೈಬಿಡಬೇಕು. ಇಲ್ಲವಾದರೆ ಬೀಡಿ ಕಾರ್ಮಿಕರಿಗೆ ಕಡ್ಡಾಯವಾಗಿ ಪರ್ಯಾಯ ಜೀವನಾಧಾರ ಕಲ್ಪಿಸಬೇಕು ಎಂದು ಫೆಡರೇಶನ್ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.
ಕೃಷಿ, ಕೈಗಾರಿಕೆಯ ಅನಂತರ ಬೀಡಿ ಉದ್ಯಮವು ಭಾರತದ ಬಹುದೊಡ್ಡ ಉದ್ಯೋಗ ಕ್ಷೇತ್ರವಾಗಿದೆ. ಹಳ್ಳಿಯ ಮೂಲೆ ಮೂಲೆಯ ಸುಮಾರು 80 ಲಕ್ಷ ಜನರಿಗೆ ಬೀಡಿಯೇ ಜೀವನೋಪಾಯವಾಗಿದೆ. 5 ಲಕ್ಷ ಜನರು ಬೀಡಿ ಪ್ಯಾಕ್ ಮಾಡುತ್ತ ಬದುಕು ಕಟ್ಟಿಕೊಂಡಿದ್ದಾರೆ. ಸುಮಾರು 2 ಕೋಟಿಯಷ್ಟು ಜನರು ಬೀಡಿ ಉದ್ಯಮವನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅವಲಂಬಿಸಿದ್ದಾರೆ. ಹೀಗೆ ದೇಶವ್ಯಾಪಿ ಸರ್ವ ರೀತಿಯಲ್ಲಿ ಜನರ ಜೀವನಾಧಾರವಾಗಿರುವ ಬೀಡಿ ಉದ್ಯಮಕ್ಕೆ ಇದೀಗ ವಿವಿಧ ನೀತಿಗಳನ್ನು ತರುವ ಮೂಲಕ ಕೇಂದ್ರ ಸರಕಾರವು ಅನ್ಯಾಯ ನಡೆಸುತ್ತಿದೆ ಎಂದು ಫೆಡರೇಶನ್ ಆರೋಪಿಸಿದೆ.
ಇದೀಗ ಬಂದಿರುವ ದಂತಹ ಕಾನೂನಿನಿಂದಾಗಿ ತಂಬಾಕು ಉತ್ಪನ್ನಗಳ ಪ್ಯಾಕೆಟ್ ಮೇಲಿನ ಎಚ್ಚರಿಕೆ ಗ್ರಾಫಿಕ್, ಪ್ಯಾಕೆಟ್ ಗಾತ್ರದ ಶೇ. 85ರಷ್ಟಿರಬೇಕು ಎಂದು ಕಡ್ಡಾಯ ಮಾಡುವುದರಿಂದ ಬೀಡಿ ಉದ್ಯಮ ಬಲಿಪಶುವಾಗಬೇಕಾಗುತ್ತದೆ. ಬೀಡಿ ಪ್ಯಾಕೆಟ್ಗಳ ಕೋನಾಕೃತಿಯಿಂದಾಗಿ ಗ್ರಾಫಿಕ್ ಗಾತ್ರವನ್ನು ಶೇ. 40ರಿಂದ 85ಕ್ಕೆ ಹೆಚ್ಚಿಸಲು ಸಾಧ್ಯವಿಲ್ಲ. ಪ್ಯಾಕೆಟ್ ಗಾತ್ರದ ಪೂರ್ಣ ಎಚ್ಚರಿಕೆ ಲೇಬಲ್ ಬಳಿದರೆ ಬೀಡಿ ಉದ್ಯಮ ಸಾಯುವುದು ಖಂಡಿತ. ಇದನ್ನು ಕೇಂದ್ರ ಸರಕಾರ ಗಮನಿಸಬೇಕು ಎಂದು ಫೆಡರೇಶನ್ ಪ್ರಕಟನೆಯಲ್ಲಿ ತಿಳಿಸಿದೆ.
