__ ಸತೀಶ್ ಕಾಪಿಕಾಡ್.
ಮಂಗಳೂರು : . ಖುಷಿ ಫಿಲಂಸ್ ಲಾಂಛನದಲ್ಲಿ ಅಮಾನ್ ಪ್ರೊಡಕ್ಷನ್ ಅರ್ಪಿಸುವ ಬಹುನಿರೀಕ್ಷಿತ `ನಮ್ಮ ಕುಡ್ಲ’ ತುಳು ಚಲನಚಿತ್ರ ಕರಾವಳಿಯಾದ್ಯಂತ ಎಪ್ರಿಲ್ 8ರ ಚಾಂದ್ರಮಾನ ಯುಗಾದಿಯ ಶುಭದಿನದಂದು ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕಿ, ನಿರ್ದೇಶಕಿ ಹಾಗೂ ನಾಯಕಿ ಅಶ್ವಿನಿ ಹರೀಶ್ ನಾಯಕ್ ಮಾಹಿತಿ ನೀಡಿದ್ದಾರೆ.
ಚಿತ್ರದ ಬಗ್ಗೆ ನಗರದಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಚಿತ್ರವು ಮೊದಲ ಹಂತದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮಲ್ಟಿಫ್ಲೆಕ್ಸ್ಗಳೂ ಸೇರಿದಂತೆ 13 ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ. ಮಂಗಳೂರಿನಲ್ಲಿ ಜ್ಯೋತಿ, ಪಿವಿಆರ್, ಸಿನೆಪೊಲಿಸ್ ಮತ್ತು ಬಿಗ್ ಸಿನೆಮಾಸ್ನಲ್ಲಿ ಪ್ರದರ್ಶನಗೊಳ್ಳಲಿದೆ. ಉಳಿದಂತೆ ಬಿ.ಸಿ ರೋಡ್, ಪುತ್ತೂರು, ಬೆಳ್ತಂಗಡಿ, ಮೂಡಬಿದರೆ, ಸುಳ್ಯ, ಸುರತ್ಕಲ್, ಕಾರ್ಕಳ, ಉಡುಪಿ ಮತ್ತು ಮಣಿಪಾಲದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.
ಚಿತ್ರದಲ್ಲಿ 108 ಕಲಾವಿದರ ತಂಡ ಭಾಗಿಯಾಗಿದ್ದಾರೆ. ಇವರಲ್ಲಿ 95ರಷ್ಟು ಕಲಾವಿದರು ಹೊಸಬರಾಗಿರುವುದು ಇನ್ನೊಂದು ವಿಶೇಷತೆಯಾಗಿದೆ. ೪೫ ದಿನಗಳಲ್ಲಿ ನಿರಂತರವಾಗಿ ಚಿತ್ರೀಕರಿಸಲಾಗಿದೆ. ಈಗಾಗಲೇ ಸಿನೆಮಾ ಟ್ರೈಲರ್ ಮೂಲಕ ಯೂಟ್ಯೂಬ್ನಲ್ಲಿ ಸಿನೆಮಾ ಪ್ರಿಯರ ಮೆಚ್ಚುಗೆ ಪಡೆದಿದೆ ಎಂದು ಅವರು ಹೇಳಿದರು.
`ನಮ್ಮ ಕುಡ್ಲ’ ಚಲನಚಿತ್ರ ಹೊಸಬರ ಪ್ರಯತ್ನ. ಚಿತ್ರದಲ್ಲಿ ಹಿರಿಯ ಕಲಾವಿದರು, ಹೊಸ ಕಲಾವಿದರು ಇದ್ದಾರೆ. ಚಿತ್ರದ ಯಶಸ್ವಿಗೆ ಪ್ರೇಕ್ಷಕರ ಪ್ರೋತ್ಸಾಹ ಅತ್ಯಗತ್ಯ ಎಂದು ಅಶ್ವಿನಿ ಹರೀಶ್ ನಾಯಕ್ ಹೇಳಿದರು.
ನಾಯಕ ನಟ ಹಾಗೂ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದ ಪ್ರಕಾಶ್ ಶೆಟ್ಟಿ ಧರ್ಮನಗರ ಮಾತನಾಡಿ, ಈ ಚಿತ್ರವು “ವಾರ್ ಫಾರ್ ಪೀಸ್” ಎಂಬ ಧ್ಯೇಯದಿಂದ ಸಾಮಾಜಿಕ ಕಳಕಳಿಯ ಚಿತ್ರವಾಗಿ ಮೂಡಿಬಂದಿದೆ. ವಿಭಿನ್ನ ಶೈಲಿಯ ಕಥಾ ಹಂದರವನ್ನು ಒಳಗೊಂಡ ಈ ಚಿತ್ರವು ಪ್ರೇಕ್ಷಕರ ಮನಸೂರೆಗೊಂಡು ದಾಖಲೆ ನಿರ್ಮಿಸುವತ್ತ ಮುಂದಡಿಯಿಡಲಿದೆ. ಮನೆಮಂದಿಯೆಲ್ಲಾ ಮನರಂಜಿಸಬಹುದಾದ ಈ ಚಿತ್ರವು ವಿಶೇಷ ಸಂದೇಶದೊಂದಿಗೆ ಹಾಸ್ಯವನ್ನೂ ಒಳಗೊಂಡಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಖ್ಯಾತ ನಟ (ಖ್ಯಾತ ಖಳನಟ) ಗೋಪಿನಾಥ್ ಭಟ್ ಮಾತನಾಡಿ, ನಮ್ಮ ಸಂಸ್ಕೃತಿ ಮಾತೆಗೆ ಗೌರವ ನೀಡುವಂತಹದ್ದು. ಮಹಿಳೆಯಿದ್ದಲ್ಲಿ ಅಲ್ಲಿ ಜಯ ಇದ್ದೇ ಇರುತ್ತದೆ. ತುಳು ಚಲನಚಿತ್ರರಂಗದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಹಿಳಾ ನಿರ್ದೇಶಕಿ ಅಶ್ವಿನಿ ಹರೀಶ್ ನಾಯಕ್ ಅವರಿಂದ ನಿರ್ದೇಶನಗೊಂಡಿರುವ ಈ ಚಿತ್ರ ಅದ್ಬುತವಾಗಿ ಮೂಡಿ ಬಂದಿದೆ ಎಂದು ನುಡಿದರು.
ಪ್ರತಿದಿನ ನಾಲ್ಕು ಪ್ರದರ್ಶನಗಳ ಮೂಲಕ 175 ದಿನಗಳ ದಾಖಲೆ ಪ್ರದರ್ಶ ನೀಡಿದ “ಒರಿಯರ್ದೊರಿ ಅಸಲ್”,.. ಶತದಿನಕ್ಕೂ ಹೆಚ್ಚು ಪ್ರದರ್ಶನ ಕಂಡ “ಮದಿಮೆ” ಮುಂತಾದ ಚಿತ್ರಗಳನ್ನು ನಿರ್ಮಿಸಿ ನಿರ್ದೇಶನ ಮಾಡಿದಂತಹ ಖ್ಯಾತ ನಿರ್ದೇಶಕ ಹಾಗೂ ತುಳು ನಾಟಕ ರಂಗದಲ್ಲಿ ಹೊಸ ಹೊಸ ಶೈಲಿಯ ಅದ್ಭುತ ಪ್ರಯತ್ನಗಳ ಮೂಲಕ ವಿಶಿಷ್ಟ ರೀತಿಯ ನಾಟಕಗಳನ್ನು ನಿರ್ದೇಶನ ಮಾಡಿ, ನಾಟಕ ಪ್ರೇಮಿಗಳ ಮನಗೆದ್ದ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ಮಾತನಾಡಿ, ತುಳು ಚಲನಚಿತ್ರರಂಗದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಓರ್ವ ಮಹಿಳಾ ನಿರ್ದೇಶಕಿ ನಿರ್ದೇಶನ ಮಾಡಿದ ಈ ಚಿತ್ರ ಮೊದಲ ಪ್ರಯತ್ನದಲ್ಲೇ ಉತ್ತಮವಾಗಿ ಮೂಡಿ ಬಂದಿದೆ. ನನ್ನ ಚಿತ್ರಗಳಿಗೆ ಮಾಧ್ಯಮ ಮಿತ್ರರು ಹಾಗೂ ಚಿತ್ರಪ್ರೇಮಿಗಳು ಉತ್ತಮ ಸಹಕಾರ ನೀಡಿದ್ದಾರೆ. ಅದೇ ರೀತಿ ಈ ಚಿತ್ರಕ್ಕೂ ಎಲ್ಲರೂ ಉತ್ತಮ ರೀತಿಯಲ್ಲಿ ಸಹಕಾರ ನೀಡುವ ಮೂಲಕ ಚಿತ್ರದ ಯಶಸ್ಸಿಗೆ ಕೈಜೋಡಿಸಬೇಕು ಎಂದು ಹೇಳಿದರು.
ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ನಾಟಕ ಹಾಗೂ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ತಮ್ಮ ಅಭಿನಯ ಚಾತುರ್ಯವನ್ನು ಪ್ರದರ್ಶಿಸುತ್ತಿದ್ದ ಇನ್ನೋರ್ವ ಖ್ಯಾತ ನಟ ಸಂತೋಷ್ ಶೆಟ್ಟಿ, ಚಿತ್ರದ ಯಶಸ್ಸಿಗೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ನಮ್ಮ ಕುಡ್ಲ ಚಲನಚಿತ್ರದ ಸಂಕಲನ ಹರೀಶ್ ನಾಯಕ್, ಚಿತ್ರದ ಸಂಗೀತಾ ನಿರ್ದೇಶಕ ಗುರುರಾಜ್ ಎಂ. ಬಿ.ಹಾಗೂ ಮತ್ತಿತರರು ಉಪಸ್ಥಿತರಿದ್ದರು.
`ನಮ್ಮ ಕುಡ್ಲ’ ಚಲನಚಿತ್ರದ ಒಂದಿಷ್ಟು…
ಈ ಚಿತ್ರವು “ವಾರ್ ಫಾರ್ ಪೀಸ್” ಎಂಬ ಧ್ಯೇಯದಿಂದ ಸಾಮಾಜಿಕ ಕಳಕಳಿಯ ಚಿತ್ರವಾಗಿ ಮೂಡಿಬಂದಿದೆ. ಖುಷಿ ಫಿಲಂಸ್ ಲಾಂಛನದಲ್ಲಿ ಅಮಾನ್ ಪ್ರೊಡಕ್ಷನ್ ಅರ್ಪಿಸುವ “ನಮ್ಮ ಕುಡ” ಚಲನಚಿತ್ರವನ್ನು ಅಶ್ವಿನಿ ಹರೀಶ್ ನಾಯಕ್ ಅವರು ಮೊದಲಬಾರಿಗೆ ನಿರ್ಮಿಸಿ, ನಿರ್ದೇಶಿಸಿದ್ದರೆ, ಅಸ್ಲಂ ಪಾಶಾ ಸಹನಿರ್ಮಾಪಕರಾಗಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಪ್ರಕಾಶ್ ಶೆಟ್ಟಿ ಧರ್ಮನಗರ ಅವರದ್ದಾಗಿದೆ.
ಗುರುರಾಜ್ ಎಂ.ಬಿ. ಸಂಗೀತ ನಿರ್ದೇಶಿರುವ ಈ ಚಲನಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು ಅವುಗಳಲ್ಲಿ ಒಂದು ವಾದ್ಯ ಸಂಗೀತ(ಇನ್ಸ್ಟ್ರುಮೆಂಟಲ್) ಆಗಿದೆ. ಎಲ್ಲಾ ಹಾಡುಗಳೂ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಂಗೀತ ಪ್ರಿಯರ ಮನಸೆಳೆದಿದೆ. ಈ ಚಿತ್ರಕ್ಕೆ ಚೆನ್ನೈನ ಅನ್ಬುಸೆಲ್ವಂ ಹಿನ್ನೆಲೆ ಸಂಗೀತ ಒದಗಿದ್ದಾರೆ.
`ನಮ್ಮ ಕುಡ’ದ ಛಾಯಾಗ್ರಹಣವನ್ನು ಬಸವರಾಜ್ ಹಾಸನ್ ನಿರ್ವಹಿಸಿದ್ದು, ಇವರೊಂದಿಗೆ ಕುಮಾರ್ ಗೌಡ ಸಹಕರಿಸಿದ್ದಾರೆ. ಚಿತ್ರದ ಸಂಕಲನ ಹರೀಶ್ ನಾಯಕ್ ಅವರ ಕೈ ಚಳಕ ದಲ್ಲಿ ಅದ್ಬುತವಾಗಿ ಮೂಡಿ ಬಂದಿದೆ. ಕರಾವಳಿಯ ವಿವಿಧ ಪ್ರಕೃತಿ ರಮಣೀಯ ತಾಣಗಳಲ್ಲಿ ಚಿತ್ರೀಕರಿಸಲಾದ `ನಮ್ಮ ಕುಡ’ದಲ್ಲಿ ಮಂಗಳೂರು ನಗರವನ್ನು ವಿಶೇಷ ಶೈಲಿಯಲ್ಲಿ ಚಿತ್ರಿಸಲಾಗಿದೆ.
ಚಿತ್ರದಲ್ಲಿ ನವೀನ್ ಶೆಟ್ಟಿ ಸಿರಿಬಾಗಿಲು ಸಹಾಯಕ ನಿರ್ದೇಶಕರಾಗಿ ದುಡಿದಿದ್ದಾರೆ. ಸಾಹಸ ಅಲ್ಟಿಮೇಟ್ ಶಿವ್ ಅವರದು. ಚಿತ್ರದ ಹಾಡುಗಳನ್ನು ಮಂಗಳೂರು, ಮಡಿಕೇರಿ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ 108 ಕಲಾವಿದರು ದುಡಿದಿದ್ದಾರೆ. ಇವರಲ್ಲಿ 95ರಷ್ಟು ಕಲಾವಿದರು ಹೊಸಬರಾಗಿರುವುದು ಇನ್ನೊಂದು ವಿಶೇಷತೆಯಾಗಿದೆ. ಒಟ್ಟು 45 ದಿನಗಳಲ್ಲಿ ಚಿತ್ರೀಕರಿಸಲಾಗಿದೆ.
ಚಿತ್ರದ ತಾರಾಗಣದಲ್ಲಿ ನಾಯಕ ನಟರಾಗಿ ಪ್ರಕಾಶ್ ಶೆಟ್ಟಿ ಧರ್ಮನಗರ, ನಾಯಕಿಯಾಗಿ ಅಶ್ವಿನಿ ಹರೀಶ್ ನಾಯಕ್, ಛಾಯಾ ಹರ್ಷ, ಹೆಸರಾಂತ ಕಲಾವಿದರಾದ ಲಕ್ಷ್ಮಣ್ ಮಲ್ಲೂರು, ಗೋಪಿನಾಥ್ ಭಟ್, ಸಂತೋಷ್ ಶೆಟ್ಟಿ, ಸತೀಶ್ ಬಂದಲೆ, ದಿನೇಶ್ ಅತ್ತಾವರ, ಅಸ್ಲಂ ಪಾಶಾ, ರಮೇಶ್ ರೈ ಕುಕ್ಕುವಳ್ಳಿ, ಸುನಿಲ್ ನೆಲ್ಲ್ಲಿಗುಡ್ಡೆ, ಪ್ರಸನ್ನ ಬೈಲೂರು, ಬಾಚು ಅದ್ಯಪಾಡಿ, ಚೇತನ್ ಪಿಲಾರ್, ಜೆ.ಪಿ. ತೂಮಿನಾಡು, ಸ್ಕೈಲಾರ್ಕ್ ರಾಜ್, ದಯಾನಂದ್ ಬುಡ್ರಿಯಾ, ಸುಜಾತಾ, ವಿನ್ನಿ ಫೆರ್ನಾಂಡಿಸ್ ಮೊದಲಾದವರಿದ್ದಾರೆ