ಕುಂದಾಪುರ: ಇತಿಹಾಸ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಜಾತ್ರೆ ಮಾ.30 ಬುಧವಾರ ಸಂಭ್ರಮದಿಂದ ಜರುಗಿತು. ಬೆಳಿಗ್ಗೆ ನಡೆದ ರಥಾರೋಹಣ ಹಾಗೂ ಸಂಜೆ ನಡೆದ ಮನ್ಮಹಾರಥೋತ್ಸವದ ಸಂದರ್ಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಊರ, ಪರವೂರಿನ ಹಾಗೂ ಅನ್ಯರಾಜ್ಯದ ಭಕ್ತರು ಜಮಾಯಿಸಿದ್ದರು. ದೇವಳದಲ್ಲಿ ಬೆಳಿಗ್ಗೆನಿಂದಲೇ ಅಪಾರ ಭಕ್ತರು ನೆರೆದಿದ್ದು, ಶ್ರೀ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಬೆಳಿಗ್ಗೆ 5 ಗಂಟೆಗೆ ವಿಶೇಷ ಪೂಜೆಯಿಂದ ಆರಂಭಗೊಂಡು ಬಳಿಕ 7.30ಕ್ಕೆ ವಿಶೇಷ ಕಟ್ಟಳೆ ಶತರುಧ್ರಾಭಿಷೇಕ, ಕಲಶಾಭಿಷೇಕ, ಮಂಗಳಾರತಿ, ಮಹಾಮಂಗಳಾರತಿ, ಮುಹೂರ್ತ ಪೂಜೆ ಜರುಗಿತು. ನಂತರದಲ್ಲಿ ದೇವರನ್ನು ದೇವಳದ ಹೊರತಂದು ಬಲಿ ಉತ್ಸವ ನಡೆಸಿದ ಬಳಿಕ ರಥಾರೋಹಣ ನಡೆಯಿತು. ದೇಗುಲದ ಅರ್ಚಕ ನಿತ್ಯಾನಂದ ಅಡಿಗ ನೇತೃತ್ವದಲ್ಲಿ ಪೂಜಾ ವಿಧಿ-ವಿಧಾನಗಳು ನಡೆದವು.
ಸಂಜೆ ನಡೆದ ಮನ್ಮಾಹರಥೋತ್ಸವದ ಸಂದರ್ಭದಲ್ಲಿ ವಿಶೇಷ ಆಕರ್ಷಣೆಯಾಗಿ ತಟ್ಟಿರಾಯ ಕುಣಿತ, ಡೋಲು ವಾದನಗಳು, ವಾದ್ಯಗೋಷಗಳು ನೆರೆದ ಅನೇಕರನ್ನು ರಂಜಿಸಿತು. ರಥೋತ್ಸವದ ನಿಮಿತ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.