ಮಂಗಳೂರು,ಮಾ.28 : ದ.ಕ.ಜಿಲ್ಲೆಯಲ್ಲಿ ಮರಳು ನೀತಿಯನ್ನು ಆರಂಭಿಸಲು ಸಾಧ್ಯವಾಗದಿದರೆ, ಜಿಲ್ಲಾಧಿಕಾರಿಗಳು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಲಿ, ಬೇರೆ ಜಿಲ್ಲಾಧಿಕಾರಿಗಳು ಬಂದು ಮರಳಿನ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂದು ಯುವಜನತಾದಳದ ಜಿಲ್ಲಾ ಅಧ್ಯಕ್ಷ ಅಕ್ಷಿತ್ ಸುವರ್ಣ ಹೇಳಿದ್ದಾರೆ.
ದ.ಕ.ಜಿಲ್ಲೆಯಲ್ಲಿ ಮರಳುಗಾರಿಕೆ ನಿಷೇಧಿಸಿದ ಕುರಿತು ಯುವಜನತಾದಳ ವತಿಯಿಂದ ನೆಹರೂ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಮರಳಿನ ಸಮಸ್ಯೆಗೆ ಜಿಲ್ಲಾಧಿಕಾರಿಗಳು, ಉಸ್ತುವಾರಿ ಸಚಿವರು ನೇರ ಹೊಣೆಯಾಗಿದ್ದಾರೆ. ಮರಳುಗಾರಿಕೆ ಸ್ಥಗಿತವಾದ ಬಳಿಕ ಕಟ್ಟಡ ಕಾರ್ಮಿಕರು,ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದ್ದು, ಕಾರ್ಮಿಕರು ಊಟವಿಲ್ಲದೇ ಪರದಾಡುವಂತಾಗಿದೆ. ಹಲವರಿಗೆ ಮನೆ ಕಟ್ಟಲಾಗುತ್ತಿಲ್ಲ, ಅದುದರಿಂದ ಇಂದಿನಿಂದಲೇ ಮರಳು ಸಾಗಾಟಕ್ಕೆ ಅನುವು.ಮಾಡಿಕೊಡಬೇಕೆಂದರು.
ಈ ವೇಳೆ ಜನತಾದಳ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಜ್ಜಿ ಮಾತನಾಡಿ ಜನಾರ್ಧನ ರೆಡ್ಡಿಯವರ ಗಣಿ ವ್ಯವಹಾರಕ್ಕಿಂತ ಹೆಚ್ಚಿನ ಪಾಲು ಮರಳು ಮಾಫಿಯಾದಿಂದ ನಡೆಯುತ್ತಿದೆ.ಅಕ್ರಮ ಮರಳು ಸಾಗಾಟದ ಬಗ್ಗೆ ಕೃಷ್ಣ ಜೆ.ಪಾಲೇಮಾರ್, ಉಸ್ತುವಾರಿ ಸಚಿವ ರಮಾನಾಥರೈಯವರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಕೂಡ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ .
ಮರಳು ಮಾಫಿಯಾದ ಬಗ್ಗೆ ಬಿಜೆಪಿ ಅಥವಾ ಕಾಂಗ್ರೆಸ್ ಗೆ ಮಾತನಾಡುವ ನೈತಿಕತೆಯಿಲ್ಲ ಎಂದ ಅವರು, ಮುಂದಿನ ದಿನಗಳಲ್ಲಿ ಬಿಪಿಎಲ್,ಎಪಿಎಲ್ ಕಾರ್ಡ್ ಹೊಂದಿದವರಿಗೆ ಮರಳನ್ನು ನೀಡುವ ಕಾಲ ಬರತ್ತದೆ ಎಂದರು.
ಪ್ರತಿಭಟನೆಯಲ್ಲಿ ಜನತಾದಳ ಮಹಾ ಪ್ರಧಾನ ಕಾರ್ಯದರ್ಶಿ ರಾಂಗಣೇಶ್, ಜನತಾದಳ ಕಾರ್ಯದರ್ಶಿ ವಸಂತ ಪೂಜಾರಿ, ಅಶ್ವಿನ್ ಪಿರೇರಾ, ಶ್ರೀನಾಥ್ ರೈ ಮತ್ತಿತರರು ಉಪಸ್ಥಿತರಿದ್ದರು