(ಚಿತ್ರ, ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ನಾಡಿನೆಲ್ಲೆಡೆ ಈಗ ಹೋಳಿಹಬ್ಬದ ಗೌಜು. ಅಂತೆಯೇ ಕುಂದಾಪುರ ತಾಲೂಕಿನಲ್ಲಿ ಖಾರ್ವಿ ಜನಾಂಗದವರು ಹೋಳಿ ಹಬ್ಬವನ್ನು ವಾರಗಳ ಕಾಲ ತಮ್ಮ ಸಾಂಪ್ರದಾಯಿಕ ಹಾಡನ್ನು ಹಾಡುವ ಮೂಲಕ ಅದ್ದೂರಿಯಾಗಿ ಆಚರಿಸುತ್ತಾರೆ. ಆ ಸಂದರ್ಭದಲ್ಲಿ ಎಲ್ಲೆಡೆಯಿಂದ ಬಂಧು-ಬಳಗ ಆಗಮಿಸುತ್ತಾರೆ. ಹೋಳಿಯ ಕೊನೆಯ ದಿನದಂದು ಕೈಯಲ್ಲಿ ಬಣ್ಣವನ್ನು ಹಿಡಿದು ಪರಸ್ಪರ ಎರಚಿಕೊಳ್ಳುವ ಮೂಲಕ ಸಂಭ್ರಮಿಸುತ್ತಾರೆ.
ಕುಂದಾಪುರ ಪೇಟೆಯಲ್ಲಿ ವಾರಗಳಿಂದಲೂ ಹೋಳಿ ಹಬ್ಬದ ಸಂಭ್ರಮ ಮನೆಮಾಡಿತ್ತು. ಕೊನೆ ದಿನವಾದ ಶುಕ್ರವಾರ ಬೃಹತ್ ಮೆರವಣಿಗೆಯಲ್ಲಿ ಬಣ್ಣಗಳ ಎರಚಾಟ, ಕುಣಿತ, ಗಾನಬಜಾನ ಕುಂದಾಪುರ ಪೇಟೆಯಲ್ಲಿ ಕಂಡು ಬಂದ ಹೋಳಿ ಹಬ್ಬದ ಝಲಕ್..
ಶುಕ್ರವಾರ ಬೆಳಿಗ್ಗಿನಿಂದಲೇ ಬೈಕ್ ಹಾಗೂ ಸೈಕಲ್ನಲ್ಲಿ ಸಂಚರಿಸುತ್ತಿದ್ದ ಸವಾರರ ಮೈಯೆಲ್ಲಾ ಬಣ್ಣಗಳ ರಂಗು. ಪೇಟೆಯ ಅಲ್ಲಲ್ಲಿ ಸಂಚರಿಸುವ ಜನರ ಮೈಯೆಲ್ಲಾ ವಿವಿಧ ಬಣ್ಣಗಳ ಒಕುಳಿ. ಪ್ರಮುಖ ಅಂಗಡಿಗಳಲ್ಲಿ ಬಣ್ಣದ ಮಾರಾಟ ಜೋರಾಗಿದ್ದು ಯುವಕ-ಯುವತಿಯರು ಬಣ್ಣ ಕೊಳ್ಳುವಿಕೆಯಲ್ಲಿ ನಿರತಾಗಿರುವ ದೃಶ್ಯ ಕಂಡುಬರುತ್ತಿತ್ತು. ಕಾಲೇಜುಗಳಲ್ಲಿಯೂ ಆಚರಣೆ ಜೋರಾಗಿದ್ದು ಪರಸ್ಪರ ಸ್ನೇಹಿತರು, ಸಹಪಾಟಿಗಳು ಬಣ್ಣ ಎರಚಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.
ಶುಕ್ರವಾರ ಸಂಜೆ ಖಾರ್ವಿಕೇರಿ ದೇವಸ್ಥಾನದಿಂದ ಹೊರಟ ಮೆರವಣಿಗೆಯಲ್ಲಿ ಯುವಕ ಯುವತಿಯರು ಬಣ್ಣ ಹಚ್ಚಿ ನೃತ್ಯಗಳನ್ನು ಮಾಡುತ್ತಾ ಸಿನಿಮಾ ಹಾಡುಗಳಿಗೆ ಹೆಜ್ಜೆಹಾಕಿದರು. ಮೆರವಣಿಗೆಯಲ್ಲಿ ಎಲ್ಲಾ ವಯೋಮಾನದವರೂ ಭಾಗವಹಿಸಿ ಹೋಳಿ ಹಬ್ಬದ ಹರುಷಕೆ ಇನ್ನಷ್ಟು ಮೆರುಗು ತಂದರು. ಸಾವಿರಾರು ಮಂದಿ ಭಾಗವಹಿಸಿದ್ದ ಮೆರವಣಿಗೆ ಕುಂದಾಪುರ ಪೇಟೆಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸಂಪೂರ್ಣ ಹೋಳಿ ಮೆರವಣಿಗೆಯಲ್ಲಿ ಒಂದಷ್ಟು ಮಂದಿ ವಿದೇಶಿಗರು ಪಾಲ್ಘೊಂಡು ಸಂಭ್ರಮಿಸಿದ್ರು.
ಇನ್ನು ಹೋಳಿ ಮೆರವಣಿಗೆಯಲ್ಲಿ ಕುಂದಾಪುರ ಖಾರ್ವಿಕೇರಿಯ ಶ್ರೀ ಮಹಾಕಾಳಿ ದೇವಸ್ಥಾನದ ಅಧ್ಯಕ್ಷ ಜಯಾನಂದ ಖಾರ್ವಿ ಹ್ಖಾಗ್ರ್ವೂ ಸಮಾಜದ ಮುಖಂಡರು ಉಪಸ್ಥಿತರಿದ್ದರು. ಸಮಾಜಬಾಂಧವರು ಮಾತ್ರವಲ್ಲದೇ ಇತರೇ ಸಮಾಜದ ಜನರು ಭಾಗವಹಿಸಿದ್ದು ಇನ್ನೊಂದು ವಿಶೇಷವಾಗಿತ್ತು. ಕುಂದಾಪುರ ಪುರಸಭೆಯ ಉಪಾಧ್ಯಕ್ಷ ರಾಜೇಶ್ ಕಾವೇರಿ, ಸದಸ್ಯರಾದ ರವಿರಾಜ್ ಖಾರ್ವಿ, ಚಂದ್ರಶೇಖರ್ ಖಾರ್ವಿ, ಬಿಜೆಪಿ ಮೀನುಗಾರ ಪ್ರಕೋಷ್ಟದ ರಾಜ್ಯ ಸಂಚಾಲಕ ಬಿ. ಕಿಶೋರ್ ಕುಮಾರ್, ಬಿಲ್ಲವ ಸಂಘ ಕುಂದಾಪುರದ ಉಪಾಧ್ಯಕ್ಷ ರಾಜೀವ ಕೋಟ್ಯಾನ್, ಕಾಂಗ್ರೆಸ್ ಮುಖಂಡ ವಿಕಾಸ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.