ಕುಂದಾಪುರ: ಕಾನೂನು ಸುವ್ಯವಸ್ಥೆ ವಿಚಾರ ರಾಜ್ಯ ಸರಕಾರದ ಹೊಣೆಯಾಗಿದ್ದು ಕೇಂದ್ರ ಕಾನೂನು ಸಚಿವನಾಗಿ ಇದರಲ್ಲಿ ಹಸ್ತಕ್ಷೇಪ ಮಾಡಿದಲ್ಲಿ ದೊಡ್ಡ ರಾದ್ಧಾಂತವೇ ನಿರ್ಮಾಣವಾಗುವ ಸಾಧ್ಯತೆಯಿದೆ. ಆದರೂ ಕೂಡ ಕ್ಷೇತ್ರದ ಬಗ್ಗೆ ನಂಬಿಕೆಯಿರುವ ಕಾರಣ ಹಾಗೂ ಕೇಂದ್ರದ ಜನಪ್ರತಿನಿಧಿ ಆದ ಹಿನ್ನೆಲೆ ದೇವಳದಲ್ಲಿ ನಡೆದ ದೇವಿ ಚಿನ್ನಾಭರಣ ಅವ್ಯವಹಾರದ ಬಗ್ಗೆ ಮಾಹಿತಿ ಪಡೆದಿರುವೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.
ಅವರು ಸೋಮವಾರ ಬೆಳಿಗ್ಗೆ ಕೊಲ್ಲೂರು ದೇವಸ್ಥಾನ ಭೇಟಿ ಬಳಿಕ ಕುಂದಾಪುರಕ್ಕೆ ಆಗಮಿಸಿದ್ದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದರು.
ದೇವಸ್ಥಾನದ ಅಧಿಕಾರಿಗಳ ಜೊತೆ ಮಾತನಾಡಿದ್ದ ವೇಳೆಯಲ್ಲಿ ಇದೊಂದು ಕಳ್ಳತನವಲ್ಲ ಬದಲಾಗಿ ದೇವಳದ ಸಿಬ್ಬಂದಿಗಳಿಂದ ನಡೆದ ವಂಚನೆ ಎಂಬುದು ತಿಳಿದಿದೆ. ಈಗಾಗಲೇ ಆರೋಪಿಯೂ ಕೂಡ ತನಿಖೆ ಎದುರಿಸಿದ್ದಾನೆ ಎಂಬ ಮಾಹಿತಿ ಪಡೆದಿದ್ದು ಇನ್ನು ಮುಂದಿನದಲ್ಲಿ ಇಂತಹ ಆಚಾತುರ್ಯಗಳಾಗದಂತೆ ನೋಡಿಕೊಳ್ಳುವ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಅವರು ತಿಳಿಸಿದರು.
ಮರಳು ಸಮಸ್ಯೆ ಶೀಘ್ರ ಪರಿಹಾರ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಸಮಸ್ಯೆ ಬಿಗುಡಾಯಿಸಿದ್ದು ಈ ಬಗ್ಗೆ ಕೇಂದ್ರದ ಅರಣ್ಯ ಇಲಾಖೆ ಹಾಗೂ ಪರಿಸರ ಇಲಾಖೆ ಜೊತೆ ಮಾತನಾಡಿ ಇದರ ಬಗೆಗಿನ ಕಡತವನ್ನು ಕಾನೂನು ಇಲಾಖೆಗೆ ಹಸ್ತಾಂತರಿಸಲಾಗಿದೆ. ಅಲ್ಲದೇ ರಾಜ್ಯದ ಭೂ ಮತ್ತು ಗಣಿ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಜೊತೆಗೆ ಮಾತನಾಡಿದ್ದೇವೆ. ಶೀಘ್ರವೇ ಜನರ ಸಮಸ್ಯೆ ಪರಿಹಾರವಾಗಲಿದೆ ಎಂದರು. ಸರಳಿಕ್ರತ ಮರಳು ನೀತಿ ರಾಜ್ಯದಲ್ಲಿ ಇಲ್ಲ. ಆಡಳಿತ ಹಾಗೂ ವಿಪಕ್ಷದ ಜನಪ್ರತಿನಿಧಿಗಳು ಇದರಲ್ಲಿ ಹಸ್ತಕ್ಷೇಪ ಮಾಡುತ್ತಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ಜನಪ್ರತಿನಿಧಿಗಳಲ್ಲಿ ಇಚ್ಚಾಶಕ್ತಿ ಕೊರತೆಯೂ ಇದಕ್ಕೆ ಮತ್ತೊಂದು ಕಾರಣ ಎಂದರು.
ಎತ್ತಿನಹೊಳೆ ಯೋಜನೆಗೆ ಇಂದಿಗೂ ಬದ್ಧ: ನೇತ್ರಾವತಿ ನದಿ ತಿರುವು ಮತ್ತು ಎತ್ತಿನಹೊಳೆ ಯೋಜನೆ ವಿಚಾರದಲ್ಲಿ ಜನರಲ್ಲಿ ಇಂದಿಗೂ ಹಲವು ಗೊಂದಲಗಳಿದ್ದು ಇದನ್ನು ಜನರಿಗೆ ವಿವರಿಸುವ ಮತ್ತು ಅವರಿಗೆ ಅರ್ಥ ಮಾಡಿಸುವ ಕಾರ್ಯವನ್ನು ಜನಪ್ರತಿನಿಧಿಗಳು ಮಾಡದಿರುವುದೇ ಇದಕ್ಕೆ ಕಾರಣವಾಗಿದೆ. ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಎತ್ತಿನಹ್ಒಳೆ ಯೋಜನೆಗೆ ಇಂಗಿಗೂ ನಾನು ಬದ್ಧನಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.
ಬುದ್ಧಿವಂತಿಕೆ ಕೆಲಸ ಮಾಡಿ..!
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಮಂತ್ರಣ ಪತ್ರಿಕೆ ವಿಚಾರದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಹೆಚ್ಚು ಮಾಹಿತಿ ಪಡೆದಿಲ್ಲವಾದರೂ ಕೂಡ ಹಿಂದೂ ಧಾರ್ಮಿಕ ದತ್ತಿ ಕಾಯ್ದೆ ಆಧಾರದಲ್ಲಿ ಆಮಂತ್ರಣ ಪತ್ರಿಕೆಯಲ್ಲಿ ಏನು ಇರಬೇಕೆಂಬುದರ ಬಗ್ಗೆ ಉಲ್ಲೇಖಗಳು ಇದ್ದು ಇದರ ಆಧಾರದಲ್ಲಿ ರಾಜ್ಯ ಸರಕಾರ ನಿಗಾ ವಹಿಸಬೇಕು. ಹಲವಾರು ಸಂದರ್ಭದಲ್ಲಿ ಧಾರ್ಮಿಕ ವಿವಾರಗಳು ಸೂಕ್ಷ್ಮ ಮಟ್ಟಕ್ಕೆ ತೆರಳುವ ಸಾಧ್ಯತೆಗಳಿದ್ದು ಈ ವಿಚಾರವನ್ನು ಕಾನೂನು ರೀತಿಯಲ್ಲಿ ಹಾಗೂ ಕೆಲವೊಮ್ಮೆ ಅಗತ್ಯ ಬಿದ್ದರೇ ಕಾನೂನು ಚೌಕಟ್ಟಿನ ಹೊರಗಡೆಯೂ ಆಡಳಿತಾತ್ಮಕವಾಗಿ ಬುದ್ಧಿವಂತಿಕೆಯಿಂದ ನಿರ್ವಹಿಸಬೇಕು ಎಂದು ಮಾರ್ಮಿಕವಾಗಿ ನುಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಕುಂದಾಪುರ ಕ್ಷೇತ್ರಾಧ್ಯಕ್ಷ ರಾಜೇಶ್ ಕಾವೇರಿ, ರಾಜ್ಯ ಮೀನುಗಾರರ ಪ್ರಕೋಷ್ಟದ ಸಂಚಾಲಕ ಬಿ. ಕಿಶೋರ್ ಕುಮಾರ್, ಕುಂಭಾಸಿ ಗ್ರಾಮಪಂಚಾಯತ್ ಅಧ್ಯಕ್ಷೆ ಶ್ರೀವಾಣಿ ಅಡಿಗ, ಮುಖಂಡ ರಾಜೀವ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.