ಮಂಗಳೂರು,ಮಾ.21: ಮಂಗಳೂರಿನಲ್ಲಿ ಸೋಮವಾರ ಹಾಡುಹಗಲೇ (ಬೆಳ್ಳಂಬೆಳಗ್ಗೆ ) ವ್ಯಕ್ತಿಯೋರ್ವರನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ನಗರದ ಬೆಸೆಂಟ್ ಕಾಲೇಜು ಹಾಗೂ ಪಿ.ವಿ.ಎಸ್ ಕಲಾಕುಂಜ ಮಧ್ಯೆ ಇರುವ ಒಳ ರಸ್ತೆಯ ಓಣಿಯಲ್ಲಿ ಇಂದು ಮುಂಜಾನೆ ವ್ಯಕ್ತಿಯೋರ್ವರ ಶವ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ದುಷ್ಕರ್ಮಿಗಳಿಂದ ಹತ್ಯೆಗೀಡಾದ ವ್ಯಕ್ತಿಯನ್ನು ವಿನಾಯಕ ಬಾಳಿಗ (51) ಎಂದು ಗುರುತಿಸಲಾಗಿದೆ.
ಇಂದು ಮುಂಜಾನೆ 5.30ರ ಸುಮಾರಿಗೆ ವಿನಾಯಕ ಬಾಳಿಗ ಅವರ ಶವ ಬೆಸೆಂಟ್ ಕಾಲೇಜಿನ ಅನತಿ ದೂರದಲ್ಲಿರುವ ಒಳ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದಿದ್ದು, ಜೀವನ್ಮರಣ ಹೋರಾಟ ಮಾಡುತ್ತಿದ್ದ ಅವರನ್ನು ದಾರಿ ಹೋಕರು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದಾಗ ದಾರಿಯಲ್ಲೇ ವಿನಾಯಕ ಬಾಳಿಗ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ವಿನಾಯಕ ಬಾಳಿಗ ಅವರು ಜಾಗಿಂಗ್ ಮುಗಿಸಿ ಪಾರ್ಕ್ ಮಾಡಿದ್ದ ತಮ್ಮ ವಾಹನದ ಬಳಿ ಬರುತ್ತಿದ್ದ ಸಂದರ್ಭ ಅವರನ್ನು ಹಿಂಬಾಲಿಸಿಕೊಂಡು ಕೆಲವು ವ್ಯಕ್ತಿಗಳು ಬಂದಿದ್ದು, ಬಳಿಕ ಬಾಳಿಗ ಅವರ ಮೇಲೆ ಈ ವ್ಯಕ್ತಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇನ್ನೊಂದು ಮೂಲಗಳ ಪ್ರಕಾರ ಬಾಳಿಗ ಅವರು ತಮ್ಮ ವಾಹನದಲ್ಲಿ ಸಾಗುತ್ತಿದ್ದಾಗ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.
ಬಾಳಿಗ ಅವರು ತಮ್ಮ ಇಲೆಕ್ಟ್ರಿಕಲ್ ಗುತ್ತಿಗೆ ಜೊತೆಗೆ ಆರ್ಟಿಎ ಕಾರ್ಯಕರ್ತನಾಗಿಯೂ ಕಾರ್ಯಚರಿಸುತ್ತಿದ್ದು, ನಗರದಲ್ಲಿ ನಡೆಯುತ್ತಿರುವ ಅಕ್ರಮ ಪ್ರಕರಣಗಳನ್ನು ಪತ್ತೆ ಹಚ್ಚಿ ಕೋರ್ಟಿಗೆ ಆರ್ಟಿಎ ಅರ್ಜಿ ಸಲ್ಲಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದರು ಎನ್ನಲಾಗಿದೆ.ಇತ್ತೀಚಿಗಷ್ಟೇ ನಗರದ ದೇವಾಸ್ಥಾನದಲ್ಲಿ ಹಣ ದುರುಪಯೋಗವಾಗುತ್ತಿದೆ ಎಂದು ಆರೋಪಿಸಿ ದೇವಾಸ್ಥಾನದ ಆಡಳಿತ ಮಂಡಳಿ ವಿರುದ್ಧ ಹೈಕೋರ್ಟಿಗೆ ದೂರು ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ. ಮಾತ್ರವಲ್ಲದೇ ಅಕ್ರಮ ಕಟ್ಟಡಗಳ ಹಾಗೂ ಜಾಗದ ವಿಚಾರದಲ್ಲಿ ಅವ್ಯವಹಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ನಗರದ ಕೆಲವು ಬಿಲ್ಡರ್ ಗಳ ವಿರುದ್ಧವೂ ಅಕ್ರೋಷ ವ್ಯಕ್ತಪಡಿಸಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಬಾಳಿಗ ಅವರನ್ನು ಯಾರು ಕೊಲೆ ಮಾಡಿದ್ದಾರೆ, ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ಇನ್ನಷ್ಟೇ ತಿಳಿದು ಬರಬೇಕಿದೆ.
ಡಿ.ಸಿ.ಪಿ. ಡಾ.ಸಂಜಯ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸಿಸಿಬಿ ಇನ್ಸ್ಪೆಕ್ಟರ್ ವೆಲೆಂಟೈನ್ ಡಿ’ಸೋಜಾ ಹಾಗೂ ಕದ್ರಿ ಮತ್ತು ಬರ್ಕೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ತನಿಖೆಯಲ್ಲಿ ತೊಡಗಿದ್ದಾರೆ. ಶ್ವಾನದಳ ಕೂಡ ಸ್ಥಳದಲ್ಲಿ ಪರಿಶೀಲನೆಯಲ್ಲಿ ತೊಡಗಿದೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.