ಮಂಗಳೂರು, ಮಾ.21: ಕರಾವಳಿಯಾದ್ಯಂತ ಕ್ರೈಸ್ತ ಬಾಂಧವರು ರವಿವಾರ ‘ಪಾಮ್ ಸಂಡೆ’ ಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಯೇಸುಕ್ರಿಸ್ತರು ಜೆರುಸಲೆಂ ನಗರವನ್ನು ಪ್ರವೇಶಿಸುವ ಸಂದರ್ಭದಲ್ಲಿ ಅವರನ್ನು ಭಕ್ತರು ’ಒಲಿವ್’ ಮರದ ಗರಿಗಳನ್ನು ಹಿಡಿದು ಸ್ವಾಗತಿಸಿದ ಸಂಕೇತವಾಗಿ ‘ಪಾಮ್ ಸಂಡೆ’ಯನ್ನು ಆಚರಿಸಲಾಗುತ್ತದೆ.
ಮಂಗಳೂರಿನ ರೊಸಾರಿಯೊ ಚರ್ಚ್, ಸುರತ್ಕಲ್ನ ಸೇಕ್ರೆಡ್ ಹಾರ್ಟ್ ಚರ್ಚ್, ಸುಳ್ಯ- ಕಲ್ಲುಗುಂಡಿಯ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಸೇರಿದಂತೆ ದ.ಕ. ಜಿಲ್ಲೆಯ ವಿವಿಧೆಡೆ ಚರ್ಚ್ಗಳಲ್ಲಿ ಪಾಮ್ ಸಂಡೆ ಆಚರಣೆ ನಡೆಯಿತು.
ಮಂಗಳೂರಿನ ವಿವಿಧ ಚರ್ಚ್ಗಳಲ್ಲಿ ಕ್ರೈಸ್ತ ಬಾಂಧವರು ಪೂಜೆಗೆ ಮೊದಲು ತೆಂಗಿನಗರಿಗಳನ್ನು ಚರ್ಚ್ ಆವರಣದಲ್ಲಿ ತಂದು ಆಶೀರ್ವದಿಸಲ್ಪಟ್ಟ ಬಳಿಕ ಅವುಗಳನ್ನು ಹಿಡಿದುಕೊಂಡು ಮೆರವಣಿಗೆಯ ಮೂಲಕ ತಮ್ಮ ಚರ್ಚ್ಗಳಿಗೆ ತೆರಳಿ ಪವಿತ್ರ ಬಲಿಪೂಜೆಯಲ್ಲಿ ಪಾಲ್ಗೊಂಡರು.
ಮಂಗಳೂರು ಬಿಷಪ್ ಅವರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ತೆಂಗಿನ ಗರಿಗಳನ್ನು ಆಶೀರ್ವದಿಸಿ ಸಂದೇಶ ನೀಡಿದರು. ಚರ್ಚಿನ ಪ್ರಧಾನ ಧರ್ಮಗುರು ಈ ಸಂದರ್ಭ ಉಪಸ್ಥಿತರಿದ್ದರು.
ಗುರುವಾರ ಯೇಸುಕ್ರಿಸ್ತರ ಕೊನೆಯ ಭೋಜನದ ದಿನ, ಶುಕ್ರವಾರ ಯೇಸು ಕ್ರಿಸ್ತರು ಶಿಲುಬೆಗೇರಿಸಿದ ದಿನ, ಶನಿವಾರ ರಾತ್ರಿ ಜಾಗರಣೆ ಮತ್ತು ರವಿವಾರ ಯೇಸುಕ್ರಿಸ್ತರ ಪುನಾರುತ್ಥಾನದ ಹಬ್ಬವನ್ನು ಆಚರಿಸಲಾಗುತ್ತದೆ.