ಕುಂದಾಪುರ: ಕುಂದಾಪುರ ಕಡೆಯಿಂದ ಉಡುಪಿಯತ್ತ ವೇಗವಾಗಿ ಚಲಿಸುತ್ತಿದ್ದ ಕಾರೊಂದು ರಸ್ತೆ ದಾಟುತ್ತಿದ್ದ ಪಾದಾಚಾರಿ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ತೆಕ್ಕಟ್ಟೆ ಸಮೀಪದ ಕನ್ನುಕೆರೆ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಗುರುವಾರ ರಾತ್ರಿ ನಡೆದಿದೆ.
ಕನ್ನುಕೆರೆ ರಾಘವೇಂದ್ರ ಮಠದ ಸಮೀಪದ ನಿವಾಸಿ ಲಕ್ಷ್ಮೀ ಮಧ್ಯಸ್ಥ (45) ಎನ್ನುವವರೇ ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿ ಮಹಿಳೆಯಾಗಿದ್ದಾರೆ.
ಘಟನೆ ವಿವರ: ಕುಂದಾಪುರ ಕಡೆಯಿಂದ ಉಡುಪಿಯತ್ತ ಸಾಗುತ್ತಿದ್ದ ಯುವಕರ ಗುಂಪೊಂದಿದ್ದ ಕಾರು ಅದಾಗಿದ್ದು ಅತೀ ವೇಗವಾಗಿತ್ತು ಎನ್ನಲಾಗಿದೆ. ಕನ್ನುಕೆರೆ ಸಮೀಪ ಬರುತ್ತಿದ್ದ ಸಂದರ್ಭ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿಯಾಗಿದ್ದು ಇದರಿಂದ ರಸ್ತೆಗೆ ಬಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಲ್ಪೆ ಮೂಲದ ಕಾರು ಇದಾಗಿದೆ ಎನ್ನಲಾಗಿದ್ದು ಕಾರಿನಲ್ಲಿ ೮ ಮಂದಿ ಇದ್ದರು ಎಂಬ ಮಾಹಿತಿಯನ್ನು ಸ್ಥಳೀಯರು ನೀಡಿದ್ದಾರೆ.
ಕಾರು ಎಸ್ಕೇಪ್?
ಅಪಘಾತ ನಡೆಯುತ್ತಿದ್ದಂತೆ ಕಾರಿನ ಚಾಲಕ ಕಾರನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆನ್ನಲಾಗಿದೆ. ಆತನನ್ನು ಕೋಟದಲ್ಲಿ ಅಡ್ಡಗಟ್ಟಿದರೂ ಕೂಡ ಆತ ಕೋಟ ಮೂರುಕೈ ಸಮೀಪ ತನ್ನ ಕಾರು ತಿರುಗಿಸಿ ಸೈಬ್ರಕಟ್ಟೆ ಮಾರ್ಗದತ್ತ ತೆರಳಿದ್ದ. ಈ ವೇಳೆಗೆ ಮಧುವನ ಸಮೀಪದ ಸಾರ್ವಜನಿಕರು ಕಾರನ್ನು ಅಡ್ಡಗಟ್ಟಿ ಕೋಟ ಪೊಲೀಸ್ ಠಾಣೆಗೆ ಕೊಂಡೊಯುತ್ತಾರೆ. ಚಾಲಕ ಅಲ್ಲಿ ತಪ್ಪೊಪ್ಪಿಕೊಂಡಿದ್ದು ಅಪಘಾತ ನಡೆಸಿದ ಬಗ್ಗೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
ಅಪಘಾತದ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.