ಉಡುಪಿ: ರಾಜ್ಯ ಸರಕಾರ ಮತ್ತು ಉಡುಪಿ ಜಿಲ್ಲಾಡಳಿತದ ಬೇಜವಧಾರಿ ಮರಳು ನೀತಿಯ ವಿರುದ್ದ ಉಡುಪಿ ಜಿಲ್ಲಾ ಬಿಜೆಪಿ ಹಿಂದುಳಿದ ಮೋರ್ಚಾ ನೇತ್ರತ್ವದಲ್ಲಿ ಬುಧವಾರದಂದು ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಎದುರು ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ಕೋಟ ಶ್ರೀನಿವಾಸ ಪೂಜಾರಿ, ಕರಾವಳಿ ಜಿಲ್ಲೆಗಳಲ್ಲಿ ಪ್ರತ್ಯೇಕ ಮರಳು ನೀತಿ ಜಾರಿಯಾಗಬೇಕಿದೆ. ಸದ್ಯ ಜಿಲ್ಲೆಯಾದ್ಯಂತ ಮರಳು ಸಿಗದೇ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಬಡವರ ಆಶ್ರಯ, ಬಸವ ವಸತಿ ಮನೆಗಳು, ಸಾಮಾನ್ಯ ಜನರ ಶೌಚಾಲಯ, ಗ್ರಾಮೀಣ ರಸ್ತೆಗಳು, ವಿವಿಧ ಕಟ್ತಡಗಳು, ಸೇರಿದಂತೆ ಮರಳು ಸಿಗದೇ ಅಭಿವೃದ್ದಿ ಕೆಲಸಗಳೇ ನಿಂತುಹೋಗಿದೆ. ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಈ ಗೊಂದಲಗಳನ್ನು ನಿವಾರಿಸಿ ಜನರ ಸಮಸ್ಯೆಗೆ ಸ್ಪಂಧಿಸಬೇಕಿದೆ ಎಂದರು.
ಸಮಸ್ಯೆಗೆ ಸ್ಪಂದಿಸದಿದ್ದರೇ……..
ಆದರೇ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರವು ಮರಳು ನೀತಿಯ ಬಗ್ಗೆ ಯಾವುದೇ ಸ್ಪಷ್ಟ ನಿಲುವು ತಾಳದೇ ಇರುವುದರಿಂದ ಜನಸಾಮಾನ್ಯರಿಗೆ ಮರಳು ಸಿಗುತ್ತಿಲ್ಲ. ಮುಂದಿನ ಒಂದು ವಾರದೊಳಗೆ ಸೂಕ್ತ ಕ್ರಮಕೈಗೊಳ್ಳದ ಪಕ್ಷದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಲ್ಲದೇ ನಾವುಗಳೇ ಮರಳು ತೆಗೆದು ಅದನ್ನು ಅಗತ್ಯ ಬಿದ್ದಾರಿಗೆ ನೀಡುತ್ತೇವೆ. ನಮ್ಮನ್ನು ಬಂಧಿಸಿದರೂ ಬೆದರಲ್ಲ ಎಂದರು.
ಏನಿದು ಮರಳು ಸಮಸ್ಯೆ..?
ಉಡುಪಿ ಜಿಲ್ಲೆಯಲ್ಲಿ ಸಿ.ಆರ್.ಝಡ್ ವ್ಯಾಪ್ತಿಯಲ್ಲಿ 18 ಬ್ಲಾಗ್ ಗಳನ್ನು ಗುರುತಿಸಿ ಈ ಹಿಂದೆ ಪರವಾನಿಗೆ ನೀಡಿದ್ದರೂ ಅವುಗಳ ಅವಧಿ ಜನವರಿ 22ಕ್ಕೆ ಮುಗಿದಿತ್ತು. ಸಕಾಲದಲ್ಲಿ ಪರವಾನಿಗೆ ನವೀಕರಿಸದೇ ಮರಳುಗಾರಿಕೆ ಸ್ಥಗಿತವಾಗಿದೆ. ಜಿಲ್ಲಾಡಳಿವು ಸಕಾಲಕ್ಕೆ ಪ್ರಸ್ತಾವನೆ ಸಲ್ಲಿಸಿಲ್ಲ. ಇದರಿಂದ ಕಾನೂನು ರೀತಿಯ ಮರಳುಗಾರಿಕೆ ಸ್ಥಗಿತವಾಗಿದೆ.
ಪ್ರತಿಭಟನೆಯಲ್ಲಿ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಹಿಂದುಳಿದ ಮೋರ್ಚಾದ ಬಿ.ಎನ್ ಶಂಕರ ಪೂಜಾರಿ, ಬಿಜೆಪಿ ನಗರಾಧ್ಯಕ್ಷ ರಾಘವೇಂದ್ರ ಕಿಣಿ, ಪಕ್ಷದ ಮುಖಂಡರಾದ ಕಿರಣ್ ಕುಮಾರ್, ಶ್ಯಾಮಲಾ ಕುಂದರ್, ಗೀತಾಂಜಲಿ ಸುವರ್ಣ, ಸುಕುಮಾರ ಶೆಟ್ಟಿ, ರಾಜೇಶ್ ಕಾವೇರಿ, ಉದಯಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.