ಮಂಗಳೂರು, ಮಾ.10: ಕಿಡ್ನಿ ರೋಗಿಗಳ ಸಂಘದ ಆಶ್ರಯದಲ್ಲಿ ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವಿವಿಧ ಸಾಮಾಜಿಕ ಸಂಘಟನೆಗಳ ಸಹಯೋಗದಲ್ಲಿ ಗುರುವಾರ ನಗರದ ಪುರಭವನದಲ್ಲಿ ಕಿಡ್ನಿ ರೋಗಿಗಳ ಸಮಾವೇಶ ಮತ್ತು ವಿಶ್ವ ಕಿಡ್ನಿ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದ್ದು, ದ.ಕ.ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಅವರು ಉದ್ಘಾಟಿಸಿದರು.
ಸಮಾವೇಶದಲ್ಲಿ ಬೆಳಗ್ಗೆ ನಡೆದ ವೈದ್ಯರ ಅಧಿವೇಶನದಲ್ಲಿ ಕೊಯಮುತ್ತೂರಿನ ಕಿಡ್ನಿ ರೋಗ ತಜ್ಞ ಡಾ.ವಿವೇಕ್ ಪಾಠಕ್ ವಿಷಯ ಮಂಡಿಸಿದರು. ಮಂಗಳೂರು ನೆಪ್ರೊ ಯುರೋಲಜಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಮುಹಮ್ಮದ್ ಸಲೀಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಧ್ಯಾಹ್ನ ನಡೆದ ಜನಪ್ರತಿನಿಧಿಗಳು ಮತ್ತು ಸರಕಾರಿ ಅಧಿಕಾರಿಗಳ ಕಾರ್ಯಕ್ರಮದಲ್ಲಿ ಸಚಿವ ಯು.ಟಿ ಖಾದರ್, ಶಾಸಕ ಜೆ.ಆರ್.ಲೋಬೋ, ಉಪ ಮೇಯರ್ ಪುರೊಷೋತ್ತಮ್ ಮುಂತಾದವರು ಭಾಗವಹಿಸಿದ್ದರು.
ಕಿಡ್ನಿ ವಾರ್ತೆ’ ವಿಶೇಷ ಸಂಚಿಕೆ ಬಿಡುಗಡೆ
ಸಮಾವೇಶದಲ್ಲಿ ‘ಕಿಡ್ನಿ ವಾರ್ತೆ’ ವಿಶೇಷ ಸಂಚಿಕೆ ಮತ್ತು ಸಾಕ್ಷಚಿತ್ರ ಬಿಡುಗಡೆ, ಕಿಡ್ನಿ ರೋಗಿಗಳ ಕ್ಷೇಮಾಭಿವೃದ್ಧಿ ಯೋಜನೆ ಮತ್ತು ಕಿಡ್ನಿ ಆರೋಗ್ಯ ತಪಾಸಣಾ ಆಂದೋಲನಕ್ಕೆ ಚಾಲನೆ ಹಾಗೂ ಹಿರಿಯ ವೈದ್ಯರು ಮತ್ತು ಅಂಗಾಂಗ ದಾನಿಗಳಿಗೆ ಸನ್ಮಾನ ನಡೆಯಿತು. ಜೊತೆಗೆ ಮೆಡಿಕಲ್ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರಾತ್ಯಕ್ಷಿಕ ಸ್ಪರ್ಧೆ ‘ಕಿಡ್ನಿ ಎಕ್ಸ್ಪೋ 2016’ ಆಯೋಜಿಸಲಾಗಿತ್ತು.
ವಿಶ್ವ ಕಿಡ್ನಿ ದಿನಾಚರಣೆ ಸಂಘಟನಾ ಸಮಿತಿ ಅಧ್ಯಕ್ಷ ಎಸ್.ಗಣೇಶ್ ರಾವ್ ಪ್ರಸ್ತಾವನೆಗೈದರು. ವಿಶ್ವ ಕಿಡ್ನಿ ದಿನಾಚರಣೆ ಸಂಘಟನಾ ಸಮಿತಿ ಉಪಾಧ್ಯಕ್ಷ ಸುದೇಶ್ ಕುಮಾರ್ ಸ್ವಾಗತಿಸಿದರು. ,ಪ್ರಧಾನ ಕಾರ್ಯದರ್ಶಿ ಉಮರ್ ಯು.ಎಚ್, ಮಂಗಳೂರು ನೆಪ್ರೋ ಯುರೋಲಜಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಮುಹಮ್ಮದ್ ಸಲೀಮ್, ಬಾಪ್ನಾಡ್ ಫೌಂಡೇಶನ್ ಅಧ್ಯಕ್ಷ ಎಂ.ರಿಝ್ವಾನ್ ಬಾಪ್ನಾಡ್, ಪಣಂಬೂರ್ ಬೀಚ್ ಅಭಿವೃದ್ಧಿ ಸಮಿತಿಯ ಸಿಇಒ ಯತೀಶ್ ಬೈಕಂಪಾಡಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.