ಬಂಟ್ವಾಳ, ಮಾ.9: ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಸಿ.ರೋಡಿನ ಮುಖ್ಯ ವೃತ್ತದ ಬಳಿ ನಿರ್ಮಾಣ ಹಂತದಲ್ಲಿರುವ ಇಮೇಜ್ ಟ್ರಸ್ಟ್ ಹೆಸರಿನ ಮಸೀದಿಯ ಕಾಮಗಾರಿಗೆ ರಾಜ್ಯ ಉಚ್ಚನ್ಯಾಯಾಲಯವು ತಡೆಯಾಜ್ಞೆ ನೀಡಿದೆ.
ಇಲ್ಲಿ ಮಸೀದಿ ನಿರ್ಮಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಬಂಟ್ವಾಳ ತಾಲೂಕು ಘಟಕವು ದ.ಕ.ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು.
ಆದರೆ ಜಿಲ್ಲಾಧಿಕಾರಿಯವರ ನ್ಯಾಯಾಲಯ ಇದಕ್ಕೆ ತಡೆಯಾಜ್ಞ್ಲೆ. ಬಳಿಕ ಇವರ ಆದೇಶವನ್ನು ರಾಜ್ಯ ಉಚ್ಛನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಈ ಸಂದರ್ಭದಲ್ಲಿ ರಾಜ್ಯ ಉಚ್ಛನ್ಯಾಯಾಲಯ ತಡೆಯಾಜ್ಞೆ ನೀಡಿತ್ತಾದರೂ ಬಳಿಕ ಬಂಟ್ವಾಳ ಪುರಸಭೆ ಕೆಲವು ಷರತ್ತುಗಳನ್ನು ವಿಧಿಸಿ ತಡೆಯಾಜ್ಞೆಯನ್ನು ತೆರವುಗೊಳಿಸಿತ್ತು.
ಆದರೆ ಹೈಕೋರ್ಟಿನ ಷರತ್ತುಗಳನ್ನು ಪಾಲಿಸುವಲ್ಲಿ ಪುರಸಭೆ ವಿಫಲವಾಗಿ ಮಸೀದಿ ನಿರ್ಮಾಣಕ್ಕೆ ಪರವಾನಿಗೆಯನ್ನು ನೀಡಿತ್ತು. ಈ ವಿಚಾರ ಸಾರ್ವಜನಿಕರ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು ಹಿಂದೂ ಜಾಗರಣ ವೇದಿಕೆಯು ಇದನ್ನು ಮತ್ತೆ ಹೈಕೋರ್ಟಿನಲ್ಲಿ ಪ್ರಶ್ನಿಸಿತ್ತು.
ಇದೀಗ ಹೈಕೋರ್ಟ್ ಪುರಸಭೆಯು ನೀಡಿರುವ ಪರವಾನಿಗೆಗೆ ತಡೆಯಾಜ್ಞೆ ನೀಡಿ ಮಸೀದಿಯ ಕಟ್ಟಡದ ಕಾಮಗಾರಿಯನ್ನು ಮುಂದುವರಿಸದಂತೆ ಸೂಚಿಸಿದೆ. ಜೊತೆಗೆ ಸು.ಕೋ. ಈ ಹಿಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಧಾರ್ಮಿಕ ಕಟ್ಟಡಗಳ ತೆರವು ಆದೇಶ ನೀಡಿರುವುದನ್ನು ಕೂಡ ಈ ತಡೆಯಾಜ್ಞೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಹಿ.ಜಾ. ವೇ.ತಾಲೂಕು ಸಂಚಾಲಕ ಚಂದ್ರ ಕಲಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.