ಮಂಗಳೂರು, ಮಾ.09: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗಿರಿಜನ ಉಪಯೋಜನೆಯಡಿ ಆಯೋಜಿಸಲಾದ ಗಿರಿಜನ ಉತ್ಸವ ಕಾರ್ಯಕ್ರಮ ಮಂಗಳವಾರ ಉರ್ವಸ್ಟೋರ್ನ ತುಳುಭವನದ ಸಿರಿ ಚಾವಡಿಯಲ್ಲಿ ನಡೆಯಿತು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಗಿರಿಜನ ಉತ್ಸವವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಾಡಿನಲ್ಲಿ ವನ್ಯಜೀವಿಗಳ ಜತೆ ನಿಕಟ ಸಂಪರ್ಕ ಹೊಂದಿರುವ ಗಿರಿಜನ ಸಮುದಾಯದ ಸಾಂಸ್ಕೃತಿಕ ವೈಭವ ಆ ಸಮುದಾಯಕ್ಕೆ ಮಾತ್ರ ಸೀಮಿತಗೊಳ್ಳದೆ ಅದರ ಪರಿಚಯ ಇತರರಿಗೂ ಆಗಬೇಕೆಂಬ ನೆಲೆಯಲ್ಲಿ ಸರಕಾರ ಇಂತಹ ಕಾರ್ಯಕ್ರಮಗಳ ಮೂಲಕ ಪ್ರೋತ್ಸಾಹ ನೀಡುತ್ತಿದೆ ಎಂದರು.
ಗಿರಿಜನ ಸಮುದಾಯ ತಮ್ಮದೇ ಆದ ಸಾಂಸ್ಕೃತಿಕ ಕಲಾ ಪ್ರಕಾರಗಳನ್ನು ಮೈಗೂ ಡಿಸಿಕೊಂಡವರು.ಹಳೆಯ ಸಾಂಸ್ಕೃತಿಕ ವೈಭವಗಳನ್ನು ಮರೆಯುತ್ತಿರುವ ಈ ಕಾಲಘಟ್ಟದಲ್ಲಿ ಅವುಗಳ ಪುನರುತ್ಥಾನಕ್ಕೆ ಇಂತಹ ವೇದಿಕೆಗಳು ಸೂಕ್ತ. ಗಿರಿಜನ ಸಮುದಾಯ ಸಾಮಾಜಿಕವಾಗಿ, ಆರ್ಥಿಕವಾಗಿಯೂ ಸಂಕಷ್ಟದಲ್ಲಿ ಬದುಕುತ್ತಿದ್ದು, ಅವರನ್ನು ಸಮಾಜದಲ್ಲಿ ಮುಂಚೂಣಿಗೆ ತರುವಲ್ಲಿ ಸರಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅವರಿಗೆ ಸ್ವಾಭಿಮಾನದ ಬದುಕಿನ ಜತೆಗೆ ಅವರ ಸಾಂಸ್ಕೃತಿಕ ವೈಭವವನ್ನು ಪ್ರಸ್ತುಪಡಿಸಲೂ ಅವಕಾಶ ಒದಗಿಸುತ್ತಿದೆ ಎಂದು ರೈ ಹೇಳಿದರು.
ಗಿರಿಜನ ಉತ್ಸವದಲ್ಲಿ ಕೊರಗರ ಡೋಲು ಕುಣಿತ ಹಾಗೂ ಗಜಮೇಳ ಗಮನ ಸೆಳೆಯಿತು. ಗಿರಿಜನ ಸಮುದಾಯಕ್ಕೆ ಸೇರಿದ ಹಲವು ಕಲಾ ತಂಡಗಳಿಂದ ಸಾಂಸ್ಕೃತಿಕ ಕಲಾವೈಭವದ ವೇದಿಕೆಯಾಗಿ ಮಾರ್ಪಟ್ಟ ಗಿರಿಜನ ಉತ್ಸವದಲ್ಲಿ ಕನ್ಯಾನದ ಗಿರಿಸಿರಿ ಜಾನಪದ ಕಲಾತಂಡ ಬುಡಕಟ್ಟು ಕಲೆ ಹಾಗೂ ಕೊರಲ್ ಕಲಾ ತಂಡ ಕುಡ್ಲ ಕೊರಗರ ಗಜಮೇಳ ಪ್ರದರ್ಶಿಸಿತು.
ಮನೋಹರ್ ಎಸ್. ಬಂಟ್ವಾಳ ತಂಡ ನವಿಲು ನೃತ್ಯ ಪ್ರದರ್ಶಿಸಿದರೆ, ಬಂಟ್ವಾಳದ ರಮೇಶ ಮತ್ತು ಬಳಗ ತಂಡ ಕರಡಿ ನೃತ್ಯವನ್ನು ಸಾದರ ಪಡಿ ಸಿತು. ಉಳಿದಂತೆ ಬಂಟ್ವಾಳದ ವಿಠಲ ಮತ್ತು ಬಳಗ ತಂಡದಿಂದ ಕಂಗೀಲು ನೃತ್ಯ, ಭರತನಾಟ್ಯ, ದಾಸರಪದಗಳು ಕೂಡಾ ಗಿರಿಜನ ಉತ್ಸವದಲ್ಲಿ ಹಾಡಲ್ಪಟ್ಟವು.
ವೇದಿಕೆಯಲ್ಲಿ ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಪ್ರೊ. ವೇದಾವತಿ ಮುಂತಾದವರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಬಿ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.