ಕುಂದಾಪುರ: ನೂತನವಾಗಿ ಆಯ್ಕೆಯಾಗಿರುವ ಜಿಲ್ಲಾಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸದಸ್ಯರಿಬ್ಬರಿಗೆ ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮ ಗೋಪಾಡಿ ಗ್ರಾಮಪಂಚಾಯತ್ ವತಿಯಿಂದ ಮಂಗಳವಾರ ನಡೆಯಿತು.
ಜಿ.ಪಂ. ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ಹಾಗೂ ತಾ.ಪಂ. ಸದಸ್ಯೆ ವೈಲೆಟ್ ಬೆರೊಟ್ಟೋ ಅವರಿಗೆ ಮಲ್ಲಿಗೆ ಹಾಗೂ ಗುಲಾಬಿ ಪುಷ್ಪವನ್ನು ಮುಡಿಸುವ ಮೂಲಕ ಗೋಪಾಡಿ ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ ಪುತ್ರನ್ ಸಾಂಪ್ರದಾಯಿಕವಾಗಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಕನ್ನಡ ವೇದಿಕೆ ಅಧ್ಯಕ್ಷ ಸುಬ್ರಮಣ್ಯ ಶೆಟ್ಟಿ, ಸ್ಥಳೀಯ ಸಂಸ್ಥೆಗಳು ಗ್ರಾಮದ ಸರಕಾರವಿದ್ದಂತೆ. ಸ್ಥಳೀಯ ಸಂಸ್ಥೆಗಳ ಅಧ್ಯಕ್ಷೆ ಊರಿನ ಪ್ರಥಮ ಪ್ರಜೆಯಾಗಿದ್ದು ಸಮಸ್ತ ಜನರ ಕಷ್ಟಕಾರ್ಪಣ್ಯಗಳಿಗೆ ಬೆನ್ನೆಲುಬಗಾಬೇಕಿರುವ ಮಹತ್ತರ ಜವಬ್ದಾರಿ ಇವರ ಮೇಲಿರುತ್ತದೆ. ಜಿಲ್ಲಾಪಂಚಾಯತ್ ಹಾಗೂ ತಾಲೂಕುಪ್ಂಚಾಯತ್ ಸದಸ್ಯರಾಗಿ ಆಯ್ಕೆ ಆದ ತರುವಾಯ ಅವರು ಯಾವುದೇ ಪಕ್ಷದ ಪ್ರತಿನಿಧಿಯಲ್ಲ ಬದಲಾಗಿ ಸಂಪೂರ್ಣ ಅವರ ಕ್ಷೇತ್ರದ ಪ್ರತಿನಿಧಿಯಾಗಿರುತ್ತಾರೆಂಬುದನ್ನು ಅರ್ಥಮಾಡಿಕೊಳ್ಳುವ ಮೂಲಕ ಗ್ರಾಮ ಹಾಗೂ ಕ್ಷೇತ್ರದ ಸಂಪೂರ್ಣ ಅಭಿವ್ರದ್ಧಿಯತ್ತ ಗಮನ ಹರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬೀಜಾಡಿ ಕ್ಷೇತ್ರದ ಜಿ.ಪಂ. ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ, ಪಕ್ಷ ಭೇದ ಹಾಗೂ ಜಾತಿ ಭೇದವನ್ನು ಹಿಮ್ಮೆಟ್ಟಿ ಅಭಿವ್ರದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುವ ಜೊತೆಗೆ ಕ್ಷೇತ್ರದ ಅಭಿವ್ರದ್ಧಿಗೆ ಹೆಚ್ಚು ಒತ್ತು ನೀಡುವೆ. ಈಗಾಗಲೇ ಕ್ಷೇತ್ರದ ಹಲವು ಸಮಸ್ಯೆಗಳು ಗಮನಕ್ಕೆ ಬಂದಿದ್ದು ಮುಂದಿನ ದಿನಗಳಲ್ಲಿ ಅವುಗಳನ್ನು ಸಮರ್ಥವಾಗಿ ಎದುರಿಸಿ ಸೂಕ್ತ ಪರಿಹಾರ ಕಂಡುಕೊಳುವತ್ತ ಗಮನಹರಿಸುವೆ ಎಂದರು.
ಗ್ರಾಮಸ್ಥರ ಪರವಾಗಿ ಮುಖಂಡರಾದ ಪ್ರಭಾಕರ ಶೆಟ್ಟಿ, ವಾಸುದೇವ್ ಪ್ರಭು, ಬಾಬಣ್ಣ ಪೂಜಾರಿ ಮೊದಲಾದವರು ಮಾತನಾಡಿ, ನೂತನ ಸದಸ್ಯರಿಗೆ ಅಭಿನಂದನೆ ಹೇಳಿದರಲ್ಲದೇ, ಊರಿನ ಸಮಸ್ಯೆಗಳ ಗಮನಕ್ಕೆ ತ್ರುವ ಮೂಲಕ ಮುಂದಿನ ಹಾದಿಗಳ ಬಗ್ಗೆ ಅರಿವು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಪಾಡಿ ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ ಜಿ. ಪುತ್ರನ್ ವಹಿಸಿದ್ದರು.
ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಪ್ರಭಾಕರ್ ಶೆಟ್ಟಿ, ಸ್ಥಳಿಯ ಮುಖಂಡ ಗಣೇಶ್ ಪುತ್ರನ್, ಗ್ರಾಮಪಂಚಾಯತ್ ಸದಸ್ಯ ಗಜೇಂದ್ರ ಶೆಟ್ಟಿ, ಸುರೇಶ್ ಶೆಟ್ಟಿ, ರಮೇಶ್ ಸುವರ್ಣ,ರಾಘವೇಂದ್ರ, ಸರೋಜ ಪೂಜಾರಿ, ನಾಗಶ್ರೀ, ಪಂಚಾಯತ್ ಪಿಡಿಓ ಮಂಜಯ್ಯ ಬಿಲ್ಲವ ಉಪಸ್ಥಿತರಿದ್ದರು.