ಮಂಗಳೂರು, ಮಾ. 07: ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠದ ನೂತನ ರಾಜರಾಗಿ ಶ್ರೀ ಯೋಗಿ ನಿರ್ಮಲ್ನಾಥ್ಜೀಯವರು ಇಂದು ಪಟ್ಟಾಭಿಷೇಕಗೊಂಡ ಬಳಿಕ ನಿರ್ಗಮನ ಪೀಠಾಧಿಪತಿ ರಾಜಯೋಗಿ ಶ್ರೀ ಸಂಧ್ಯಾನಾಥ್ಜೀಯವರು ಸಾಂಕೇತಿಕ ಜಲ ಸಮಾಧಿಯಾಗುವ ಪ್ರಕ್ರಿಯೆ ಬೊಕ್ಕಪಟ್ಣ ಬೋಳೂರಿನ ತಣ್ಣೀರುಬಾವಿ ಸಮುದ್ರದಲ್ಲಿ ನಡೆಯಿತು.
ಈ ವೇಳೆ ನಿರ್ಗಮನ ಪೀಠಾಧಿಪತಿಯವರು ತಾನು ತಂದ ಪಾತ್ರ ದೇವತೆಯನ್ನು ಸಮುದ್ರದಲ್ಲಿ ವಿಸರ್ಜಿಸಿ ಪೂಜೆ ಸಲ್ಲಿಸಿ, ಮೂರು ಬಾರಿ ಸಮುದ್ರದಲ್ಲಿ ಮುಳುಗೆದ್ದು ಜಲ ಸಮಾಧಿ ಎಂಬ ಸಂಕೇತವನ್ನು ಆಚರಿಸಿದರು. ಸಂಧ್ಯಾನಾಥ್ಜೀಯವರೊಂದಿಗೆ ಅವರ ಅನುಯಾಯಿಗಳಿದ್ದರು.
ನಂತರ ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠಕ್ಕೆ ತೆರಳಿದ ನಿರ್ಗಮನ ಪೀಠಾಧಿಪತಿಗಳಿಗೆ ನೂತನ ಪೀಠಾಧಿಪತಿಗಳು ಅವರ ಮುಂದಿನ ಪ್ರಯಾಣಕ್ಕೆ ಸೌಕರ್ಯ ಕಲ್ಪಿಸಿಕೊಡುತ್ತಾರೆ.
ಏಳುಪಟ್ಣ ಮೊಗವೀರ ಮಹಾಸಭಾದ ರತ್ನಾಕರ ಪುತ್ರನ್, ವಿಠಲ ಪುತ್ರನ್ ಸೇರಿದಂತೆ ಮೊಗವೀರ ಮುಂದಾಳುಗಳು ಉಪಸ್ಥಿತರಿದ್ದರು. ಪೀಠಾಧಿಪತಿಗಳಿಗೆ ದೋಣಿಯ ವ್ಯವಸ್ಥೆಯನ್ನು ಮೊಗವೀರ ಬಂಧುಗಳು ಒದಗಿಸಿಕೊಟ್ಟರು.