ಮಂಗಳೂರು, ಮಾ.05: ಕೆಲವು ದಿನಗಳ ಹಿಂದೆ ಬಂಟ್ವಾಳದ ಮನೆಯೊಂದರಿಂದ ವಿವಾಹಿತ ದಂಪತಿಯೊಂದನ್ನು ರಾಜಧಾನಿಗೆ ಕರೆದೊಯ್ದ ಬೆಂಗಳೂರು ಪೊಲೀಸರು ಕ್ರಮವನ್ನು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸಕ್ಸೇನಾ ಕಟುವಾಗಿ ಟೀಕಿಸಿದ್ದಾರೆ.
ಎರಡು ದಿನಗಳ ಹಿಂದೆ ಬಂಟ್ವಾಳದ ಯುವ ವಿವಾಹಿತ ದಂಪತಿಯೊಂದು ಆಯೋಗಕ್ಕೆ ತಮ್ಮನ್ನು ಅಪಹರಿಸಲಾದ ಬಗ್ಗೆ ದೂರೊಂದು ನೀಡಿದೆ. ಈ ಘಟನೆ ಬಗ್ಗೆ ಯುವಕನ ಪಾಲಕರು ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು ಎಂದು ಸಕ್ಸೇನಾರು ಇಲ್ಲಿನ ರೋಶನಿ ನಿಲಯದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ವಿವರಿಸಿದ್ದಾರೆ.
ಯುವ ವಿವಾಹಿತ ದಂಪತಿಯನ್ನು ಬೆಂಗಳೂರಿನ ಪೊಲೀಸರು ಕರೆದುಕೊಂಡು ಹೋಗಿದ್ದಾರೆ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಈ ಬಗ್ಗೆ ಕ್ರಮ ಜರುಗಿಸಬೇಕೆಂದು ಯುವತಿಯ ತಾಯಿ ದೂರು ನೀಡಿದ್ದಾರೆಂದು ಅವರು ತಿಳಿಸಿದ್ದಾರೆ.
ಬಂಟ್ವಾಳದ ಮನೆಗೆ ಆಗಮಿಸಿದ ಪೊಲೀಸರು ತಮ್ಮನ್ನು ಯಾರೆಂದು ಹೇಳಿದೆ ಯುವಕನನ್ನು ಏಕಾಏಕಿ ಕರೆದೊಯ್ದಿದ್ದಾರೆ ಎಂದು ದೂರಲಾಗಿದೆ. “ಆದರೂ ಆ ದಂಪತಿಯನ್ನು ಪೊಲೀಸರು ಯಾಕಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆಂಬುದು ಅಥವಾ ಅವರು ಮಾಡಿರುವ ಅಪರಾಧವೇನೆಂಬುದು ಅವರ ಪಾಲಕರಿಗೆ ಅಥವಾ ನನಗೆ ಈವರೆಗೂ ಗೊತ್ತಾಗಿಲ್ಲ ಎಂದು ಸಕ್ಸೇನಾ ತಿಳಿಸಿದ್ದಾರೆ.