ಮಂಗಳೂರು, ಮಾ.04 : ಚಲಿಸುತ್ತಿದ್ದ ಗೂಡ್ಸ್ ರೈಲೊಂದು ರೈಲು ಹಳಿ ತಪ್ಪಿ ಉರುಳಿ ಬಿದ್ದ ಘಟನೆ ಇಂದು ಮಂಗಳೂರಿನ ಪಾಂಡೇಶ್ವರ ಸಮೀಪದ ಗೂಡ್ಶೆಡ್ ಬಳಿ ಸಂಭವಿಸಿದೆ. ಗೂಡ್ಸ್ ರೈಲು ಹಠತ್ತನೇ ಮಗುಚಿ ಬಿದ್ದ ಪರಿಣಾಮ ರೈಲಿನಲ್ಲಿದ್ದ ವಸ್ತುಗಳೆಲ್ಲಾ ರೈಲು ಹಳಿ ಪಕ್ಕದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಅದೃಷ್ಟವಶಾತ್ ಈ ದುರ್ಘಟನೆಯಿಂದ ಯಾವೂದೇ ಸಾವು ನೋವು ಸಂಭವಿಸಲಿಲ್ಲ.
ಈ ಎರಡು ಲೈನ್ ಓದಿ ಮನಸ್ಸಿಗೆ ಬೇಸರವಾಯಿತೇ.. ಮನಸ್ಸಿಗೆ ನೋವು ಮಾಡಿಕೊಳ್ಳಬೇಡಿ. ಯಾಕೆಂದರೆ ಇದು ಪಕ್ಕಾ ಸುಳ್ಳು ವರದಿ. ಅರೇ.. ರೈಲು ಬಿದ್ದ ಚಿತ್ರ ಕಣ್ಣೆದುರೆ ಇದೆ. ಅದನ್ನು ಹಳಿ ಮೇಲೆ ತರಲು ಪ್ರಯತ್ನಿಸುತ್ತಿರುವ ರೈಲ್ವೇ ಸಿಬ್ಬಂದಿಗಳು ಇದ್ದಾರೆ… ಆದರೂ ಅದು ಹೇಗೆ ಸುಳ್ಳು ವರದಿ ಎಂದು ಯೋಚಿಸುತ್ತಿದ್ದಿರಾ..!
ಹೌದು, ಇದೊಂದು ಅಣುಕು ಪ್ರದರ್ಶನ. ರೈಲು ಹಳಿ ತಪ್ಪಿ ದುರಂತ ಸಂಭವಿಸಿದಾಗ ಯಾವ ರೀತಿ ಕಾರ್ಯಾಚರಣೆ ನಡೆಸಬೇಕೆಂದು ಮಾಹಿತಿ ನೀಡಲು ಮಂಗಳೂರು ಸೆಂಟ್ರಲ್ ಪಾಲ್ಘಾಟ್ ಡಿವಿಷನ್ ವತಿಯಿಂದ ನಗರದ ಪಾಂಡೇಶ್ವರ ಬಳಿಯ ಗೂಡ್ಸ್ ಶೆಡ್ ಬಳಿ ನಡೆದ ಅಣುಕು ಕಾರ್ಯಾಚರಣೆಯ ದೃಶ್ಯವಿದು.
ಸೆಂಟ್ರಲ್ ರೈಲ್ವೇ ಬೋರ್ಡ್ ನಿರ್ದೇಶನದ ಮೇರೆಗೆ ನಡೆದ ಈ ಅಣುಕು ಕಾರ್ಯಾಚರಣೆಯಲ್ಲಿ ಎಡಿಎಮ್ಇ ವಿಭಾಗೀಯ ಮ್ಯಾನೇಜರ್ ಸೇರಿದಂತೆ 30 ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಅಣುಕು ಕಾರ್ಯಾಚರಣೆಗೆಂದೇ ಉಪಯೋಗಕ್ಕೆ ಯೋಗ್ಯವಲ್ಲದ ಕೋಚನ್ನು ನೆಲಕ್ಕೆ ಉರುಳಿಸಿ ಮತ್ತೇ ಮೇಲೆಕ್ಕೆತ್ತಲಾಯಿತು. ಈ ಕಾರ್ಯಚರಣೆಗಾಗಿ ಎಆರ್ ಟಿ ಆಕ್ಸಿಡೆಂಟ್ ರಿಲೀಫ್ ಟ್ರೈನ್ ಅನ್ನು ಬಳಸಲಾಗಿದೆ .ಅಪಘಾತವಾದಾಗ ಬೇಕಾಗುವ ಅಗತ್ಯ ವಸ್ತುಗಳಾದ ಮೆಕಾನಿಕಲ್, ಎಲೆಕ್ಟ್ರಿಕಲ್, ಸೇರಿದಂತೆ ಎಲ್ಲಾ ವಸ್ತುಗಳು ಈ ಎಆರ್.ಟಿಯಲ್ಲಿರುತ್ತದೆ.
ಸಿಬ್ಬಂದಿಗಳ ಕಠಿಣ ಪರಿಶ್ರಮದಿಂದ ಇಂದು ನಡೆದ ಅಣುಕು ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ರೈಲ್ವೇ ಇಲಾಖೆಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.