ಮಂಗಳೂರು,ಮಾ.04: ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಮೀನುಗಾರಿಕೆ ಮಹಾವಿದ್ಯಾಲಯ, ಮಂಗಳೂರು ಮತ್ತು ಮೀನುಗಾರಿಕೆ ಇಲಾಖೆ, ಕರ್ನಾಟಕ ಸರ್ಕಾರ, ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ, ಹೈದರಾಬಾದ್, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಟಿ.ಎಂ.ಎ. ಪೈ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್ನಲ್ಲಿ ಆಯೋಜಿಸಲಾದ “ರಾಷ್ಟ್ರೀಯ ಮತ್ಸ್ಯಮೇಳ 2016” ಶುಕ್ರವಾರ ಉದ್ಘಾಟನೆಗೊಂಡಿತ್ತು.
ಮೀನುಗಾರಿಕೆ ರಂಗದಲ್ಲಾಗುತ್ತಿರುವ ಆವಿಷ್ಕಾರಗಳು, ಅಭಿವೃದ್ಧಿ, ವೈಜ್ಞಾನಿಕ ಯಶೋಗಾಥೆಗಳು, ರೈತರ ಆವಿಷ್ಕಾರಗಳನ್ನು ಮತ್ತು ಈ ರಂಗದಲ್ಲಿರುವ ಅವಕಾಶಗಳನ್ನು ಜನರಿಗೆ ಪರಿಚಯಿಸುವ ಸಲುವಾಗಿ ಆಯೋಜಿಸಲಾಗಿರುವ ಭಾರತದ ಅತಿದೊಡ್ಡ ಮೀನು ಹಬ್ಬ ರಾಷ್ಟ್ರೀಯ ಮತ್ಸ್ಯ ಮೇಳ-2016 ನ್ನು ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ದೇಶದ ಮೀನಿನ ಉತ್ಪಾದನೆಯನ್ನು ಹೆಚ್ಚಿಸಲು ಶಿಕ್ಷಣ ಸಂಸ್ಥೆಗಳು, ಸಂಶೋಧನಾ ಕೇಂದ್ರಗಳು ಮತ್ತು ಇತರೆ ಸಂಘ ಸಂಸ್ಥೆಗಳ ಸಾಂಘಿಕ ಕನಸು, ಜ್ಞಾನದ ಸಹಕಾರ ಮತ್ತು ಸಮನ್ವಯ ಕಾರ್ಯಾಚರಣೆಯಿಂದ ಮೀನುಗಾರಿಕೆ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿದಲ್ಲಿ ಆಹಾರ ಉತ್ಪಾದನೆಯ ಹೆಚ್ಚಳದ ಜೊತೆಗೆ ಉದ್ಯೋಗ ಸೃಷ್ಟಿಸುವಲ್ಲಿ, ಗ್ರಾಮೀಣ ಅಭಿವೃದ್ಧಿಯಲ್ಲಿ ಮತ್ತು ಅಪೌಷ್ಟಿಕತೆ ನೀಗಿಸುವಲ್ಲಿ ಯಶಸ್ವಿಯಾಗಬಹುದು ಎಂದು ಹೇಳಿದರು.
ಮೀನು ಮಂಗಳೂರಿನ ಜೀವನಾಡಿ, ಮೀನುಗಳು ಎಲ್ಲಿ ಉತ್ಪಾದನೆಯಾಗುತ್ತದೆಯೋ ಅಲ್ಲಿಯೇ ಅದರ ಬೆಲೆಯು ನಿರ್ಧಾರವಾಗಬೇಕು. ಮೀನುಗಳಿಂದ ಹಲವು ಉದ್ಯಮಗಳು ವಿಸ್ತರಣೆಯಾಗಿದ್ದು, ಅದರ ಉಪಯೋಗ ಸಾಗರದಷ್ಟಾಗಿದೆ.ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದೆ. ಈ ಹಿನ್ನೆಲೆಯಲ್ಲಿ ಅತೀ ಹೆಚ್ಚು ಮೀನು ದೊರಕುವ ತಾಣವಾದ ಮಂಗಳೂರು ಮೀನುಗಾರಿಕೆಯ ರಾಜ್ಯವಾಗಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಜೆಸಿಂತಾ ವಿಜಯ ಆಲ್ಫ್ರೆಡ್, ಮ.ನ.ಪಾ. ಆಯುಕ್ತ ಗೋಪಾಲಕೃಷ್ಣ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತದ ಚೇರ್ಮನ್ ಹಿರಿಯಣ್ಣ, ಡಾ.ಶಿವಕುಮಾರ್ ಮಗದ,ಮೀನುಗಾರಿಕೆ ಇಲಾಖೆ ನಿರ್ದೇಶಕ ಹೆಚ್. ಎಸ್. ವೀರಪ್ಪಗೌಡ, ಕ.ಮೀ.ಅ.ನಿ.ನಿ, ಮಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕ ವಿ.ಕೆ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಮತ್ಸ್ಯಮೇಳದ ವಿಶೇಷ ಆಕರ್ಷಣೆ :
1.ಮೀನುಗಾರಿಕೆ ರಂಗದ ಶೈಕ್ಷಣಿಕ ಸಂಸ್ಥೆಗಳು, ಉದ್ಯಮ ಸಂಸ್ಥೆಗಳು 2.ಮೀನಿನ ಆಹಾರ ಮತ್ತು ಖಾದ್ಯಮಳಿಗೆಗಳು 3.ನೇಚರ್ ಅಕ್ವೇರಿಯಂ ಮತ್ತು ಮೃದ್ವಂಗಿಗಳ ಪ್ರದರ್ಶನ 4.ಪಶ್ಚಿಮ ಘಟ್ಟದ ಮೀನುಗಳ ಪ್ರದರ್ಶನ 5.ತಾಜಾ ಮೀನು ಮತ್ತು ಅಲಂಕಾರಿಕ ಮೀನುಗಳ ಪ್ರದರ್ಶನ ಮತ್ತು ಮಾರಾಟ.