ಕುಂದಾಪುರ: ಕ್ಷುಲ್ಲಕ ಕಾರಣಕ್ಕೆ ಮೈದುನ ಹಾಗೂ ಆತನ ಪತ್ನಿಯಿಂದ ಕೊಲೆಗೀಡಾದ ಗಂಗೊಳ್ಳಿ ಉಪ್ಪಿನಕುದ್ರು ಕಳುವಿನಬಾಗಿಲು ನಿವಾಸಿ ಜ್ಯೋತಿ ಖಾರ್ವಿ ಅವರ ನಿವಾಸಕ್ಕೆ ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಅವರು ಮಂಗಳವಾರ ಭೇಟಿ ನೀಡಿದರು.
ಈ ಸಂದರ್ಭ ಕುಟುಂಬಿಕರಿಗೆ ಸಾಂತ್ವಾನ ಹೇಳಿದ ಎಸ್ಪಿ ಅವರು ಘಟನೆ ಬಗ್ಗೆ ಸಂಪೂರ್ಣ ವಿವರವನ್ನು ಕೊಲೆಗೀಡಾದ ಜ್ಯೋತಿ ಅವರ ಸಹೋದರಿ ಅವರ ಬಳಿ ತಿಳಿದುಕೊಂಡರು. ಮನೆಯ ಸಮಸ್ಯೆಗಳನ್ನು ಆಲಿಸಿದ ಅವರು ಜ್ಯೋತಿ ಕುಟುಂಬಿಕರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿದರಲ್ಲದೇ ವಿಕ್ಟಿಮ್ ಕಾಂಪನ್ಶೇಶನ್ ಸ್ಕೀಮ್ ಮೂಲಕ ಸಿಗುವ ಮೂರು ಲಕ್ಷ ಪರಿಹಾರದ ಬಗ್ಗೆ ಕುಟುಂಬಿಕರಿಗೆ ವಿವರಿಸಿ ಈ ಬಗ್ಗೆ ಬೈಂದೂರು ಸಿ.ಪಿ.ಐ. ಅವರು ಸಂಪೂರ್ಣ ಸಹಕರಿಸುವುದಾಗಿ ತಿಳಿಸಿದರು.
ಎಸ್ಪಿ ಅವರ ಬಳಿ ನೋವನ್ನು ತೋಡಿಕೊಂಡ ಜ್ಯೋತಿ ಅವರ ಸಹೋದರಿ ಪಲ್ಲವಿ, ‘ಕಣ್ಣೇದುರೆ ಅಕ್ಕನಿಗೆ ಹೊಡೆದರು, ಅವರ ನೋವನ್ನು ನೋಡಲಾಗಿಲ್ಲ, ಇಂತಹ ಕೊಲೆಗಡುಕರಿಗೆ ಶಿಕ್ಷೆಯಾಗಬೇಕು, ಅವರು ಸಮಾಜದಲ್ಲಿ ಬದುಕಲು ಅರ್ಹರಲ್ಲ’ ಎಂದು ದುಃಖದಿಂದ ನುಡಿದರು. ಇದಕ್ಕೆ ಪ್ರತಿಕ್ರಿಸಿದ ಎಸ್ಪಿ ಅವರು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದು ಅವರು ಕೂಡ ತಪ್ಪೊಪ್ಪಿಕೊಂಡಿದ್ದಾರೆ. ಈಗಾಗಲೇ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದರು.
ಗಂಗೊಳ್ಳಿಯಲ್ಲಿ ‘ಕನ್ನಡಿಗ ವರ್ಲ್ಡ್ ’ ಜೊತೆ ಎಸ್ಪಿ ಕೆ. ಅಣ್ಣಾಮಲೈ ಮಾತನಾಡಿದರು.
ಸೌಕೂರು ಕಳವು ಪ್ರಕರಣದ ಬಗ್ಗೆ…
ಸೌಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಇತ್ತೀಚೆಗೆ ಕಳುವಾಗಿದ್ದು ತನಿಖೆ ಬಗ್ಗೆ ಪ್ರಶ್ನಿಸಿದಾಗ ಮಾತನಾಡಿದ ಎಸ್ಪಿ ಅವರು, ಈಗಾಗಲೇ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದು ಏಳೆಂಟು ಮಂದಿ ಶಂಕಿತರನ್ನು ವಿಚಾರಣೆಗೊಳಪಡಿಸಿದ್ದೇವೆ. ಸಿ.ಸಿ. ಕ್ಯಾಮೆರಾದಲ್ಲಿ ಆರೋಪಿ ಮುಖ ದಾಖಲಾಗಿರುವ ಕಾರಣ ತನಿಖೆ ಇನ್ನಷ್ಟು ಅನುಕೂಲಕರವಾಗಿದ್ದು ಕೆಲ ಸಮಯದಲ್ಲಿಯೇ ಆರೋಪಿಯನ್ನು ಬಂಧಿಸುತ್ತೇವೆ ಎಂದರು.
ಹಳೆ ಕೊಲೆ ಪ್ರಕರಣಗಳು ಸದ್ಯದಲ್ಲೇ ಬಯಲು…
ಈಗಾಗಲೇ ಕುಂದಾಪುರದ ಮೂರು ಹಳೆ ಕೊಲೆ ಪ್ರಕರಣಗಳು ಕಾರ್ಕಳ ಉಪವಿಭಾಗದ ಎಎಸ್ಪಿ ಡಾ, ಸುಮನ್ ಅವರು ತನಿಖೆ ನಡೇಸುತ್ತಿದ್ದಾರೆ. ಅವುಗಳ ಪೈಕಿ ಕುಂದಪುರ ಸುಮನಾ ಮರ್ಡರ್ ಕೇಸ್ ಕುಂದಾಪುರದ ಸಿ.ಪಿ.ಐ. ದಿವಾಕರ್ ಹಾಗೂ ತಂಡದವರು ತನಿಖೆ ನಡೆಸಿ ಒಂದು ಹಂತಕ್ಕೆ ತಂದಿದ್ದು ಈ ತಿಂಗಳಿನೊಳಗೆ ಬಗೆಹರಿಯುವ ವಿಶ್ವಾಸವಿದೆ ಎಂದರು. ಇನ್ನು ಕೋಟ ದಂಪತಿಗಳ ಕೊಲೆ (ಡಬ್ಬಲ್ ಮರ್ಡರ್) ಪ್ರಕರಣ ಈಗಾಗಲೇ ಸಿ.ಐ.ಡಿ. ತನಿಖೆಯಲ್ಲಿದೆ ಎಂದರು.
ವರದಿ- ಯೋಗೀಶ್ ಕುಂಭಾಸಿ
ಇದನ್ನೂ ಓದಿರಿ- ಕುಂದಾಪುರ: ಮಡದಿಯ ಜೊತೆಗೂಡಿ ಅತ್ತಿಗೆಯ ಮರ್ಡರ್ ಮಾಡಿದ ಮೈದುನ; ಗಂಗೊಳ್ಳಿಯಲ್ಲಿ ಪತಿ-ಪತ್ನಿ ಅಂದರ್-http://kannadigaworld.com/kannada/239122.html