ಮಂಗಳೂರು,ಮಾರ್ಚ್.01: ಕೇಂದ್ರ ಸರಕಾರದ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಂಚೆ ಇಲಾಖೆಯ ಫಿಲ್ಯಾಟಲಿ ವಿಭಾಗದ ವತಿಯಿಂದ ಕಳೆದ ಗಣರಾಜ್ಯೋತ್ಸವದ ಅಂಗವಾಗಿ ವೈಬ್ರೆಂಟ್ ಇಂಡಿಯಾ ವಿಷಯದಲ್ಲಿ ಅಂಚೆ ಚೀಟಿ ಹೊರತರುವ ಬಗ್ಗೆ ಏರ್ಪಡಿಸಲಾಗಿದ್ದ ರಾಷ್ಟ್ರಮಟ್ಟದ ಅಂಚೆ ಚೀಟಿ ವಿನ್ಯಾಸ ಸ್ಪರ್ಧೆಯಲ್ಲಿ ಮಂಗಳೂರು ಕೆನರಾ ಇಂಜಿನಿಯರಿಂಗ್ ಕಾಲೇಜಿನ ದ್ವಿತೀಯ ವರ್ಷದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿನಿ ಕು. ಮಂಗಲಾ ನಾಯಕ್ ಪ್ರಥಮ ಬಹುಮಾನ ಸಹಿತ ರೂ 10 ಸಾವಿರ ನಗದು ಪುರಸ್ಕಾರವನ್ನು ಗೆದ್ದುಕೊಂಡಿದ್ದಾರೆ.
ಈಕೆ ಮಂಗಳೂರಿನ ರಥಬೀದಿಯ ನಿವಾಸಿ ಗೋಪಿನಾಥ ನಾಯಕ್ ಮತ್ತು ಅನಿತಾ ನಾಯಕ್ ದಂಪತಿಯ ಸುಪುತ್ರಿ. ಈ ಸ್ಪರ್ಧೆಯಲ್ಲಿ ದೇಶದ ವಿವಿದೆಡೆಗಳಿಂದ 5 ಸಾವಿರಕ್ಕೂ ಅಧಿಕ ಮಂದಿ ಸ್ಪರ್ಧಿಸಿದ್ದರು. ಅಂತಿಮವಾಗಿ ಸ್ಪರ್ಧೆಗೆ ನಿಯೋಜಿತ ತೀರ್ಪುಗಾರ ಮಂಡಳಿ ಮೂರು ಅತ್ಯುತ್ತಮ ಆಯ್ಕೆಗಳನ್ನು ನಡೆಸಿ ಬಹುಮಾನ ವಿಜೇತರ ವಿವರವನ್ನು ಪ್ರಕಟಿಸಿದೆ.