ಮಂಗಳೂರು, ಫೆ.29 : ವೈದ್ಯಕೀಯ ಕ್ಷೇತ್ರದಲ್ಲಿ ಇಂದು ಕ್ರಾಂತಿಕಾರಕ ಬದಲಾವಣೆಗಳಾಗಿದ್ದರೂ, ಶೇಕಡ 5ರಷ್ಟು ಮಂದಿಗೆ ಮಾತ್ರ ಅದು ಕೈಗೆಟುಕುವಂತಿದೆ. ಬಡಜನತೆಗೆ ಅದರ ಪ್ರಯೋಜನ ಸಿಕ್ಕಿದಾಗ ಮಾತ್ರ ವೈದ್ಯಕೀಯ ವೃತ್ತಿ ಸಾರ್ಥಕವಾಗುತ್ತದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ ಅಭಿಪ್ರಾಯಟ್ಟರು.
ಅಸೋಸಿಯೇಶನ್ ಆಫ್ ಫಿಜೀಶಿಯನ್ಸ್ ಆಫ್ ಇಂಡಿಯಾದ ದಕ್ಷಿಣ ಕನ್ನಡ ಜಿಲ್ಲಾ ಘಟಕ ಬೆಳ್ಳಿಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ಧ ‘ಕರಾವಳಿ ಲೈವ್’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳೂರಿನ ವೈದ್ಯಕೀಯ ಸೇವೆ ದೇಶದ ಯಾವುದೇ ಮಹಾನಗರಗಳಲ್ಲಿ ಲಭ್ಯವಾಗುವ ಸೇವೆಗೆ ಸರಿಸಾಟಿಯಾಗಿದೆ. ಇದನ್ನು ಮುಂದುವರಿಸುವ ನಿಟ್ಟಿನಲ್ಲಿ ಯುವ ವೈದ್ಯರಿಗೆ ಹಿರಿಯರು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಹೆಗ್ಡೆ ಆಶಿಸಿದರು.
ಎಪಿಐ ವೆಬ್ಸೈಟ್ಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಜೆ.ಆರ್. ಲೋಬೊ, ‘ತಂತ್ರಜ್ಞಾನದ ಸೌಲಭ್ಯದಿಂದಾಗಿ ಇಂದು ವೈದ್ಯಕೀಯ ವೃತ್ತಿ ಸುಲಭಾಗಿದೆ. ವೈದ್ಯಕೀಯ ಕ್ಷೇತ್ರದ ಉದ್ದೇಶ ಬದಲಾಗಿದ್ದು, ವೃತ್ತಿಯಲ್ಲಿ ಮಾನವೀಯತೆಯ ಸ್ಪರ್ಶ ಅನಿವಾರ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಪಿಐ ಅಧ್ಯಕ್ಷ ಡಾ.ಎಚ್. ಪ್ರಭಾಕರ್, ‘ಗ್ರಾಮೀಣ ಪ್ರದೇಶದಲ್ಲಿ ಸೂಕ್ತ ಸೌಲಭ್ಯ ಕಲ್ಪಿಸಿಕೊಟ್ಟರೆ, ಸೇವೆ ಸಲ್ಲಿಸಲು ಯಾವ ಅಭ್ಯಂತರವೂ ಇಲ್ಲ. ಆದರೆ ಮೂಲಭೂತ ಸೌಕರ್ಯ ಹಾಗೂ ಭದ್ರತೆಯನ್ನು ಕಲ್ಪಿಸದೇ, ಸೇವೆ ಸಲ್ಲಿಸುವಂತೆ ಕಡ್ಡಾಯಗೊಳಿಸುವುದು ಸರಿಯಲ್ಲ ಎಂದು ಹೇಳಿದರು.
ಕೆಎಂಸಿ ವೀಕ್ಷಕ ಉದಯ ಕಿರಣ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಡಾ. ಸುನೀಲ್ ಕುಮಾರ್ ಸ್ವಾಗತಿಸಿ, ಖಜಾಂಚಿ ಡಾ. ವೈ.ಎಂ. ಪ್ರಶಾಂತ್ ವಂದಿಸಿದರು.