ಕುಂದಾಪುರ: ಅದೊಂದು ಸಣ್ಣಸಂಸಾರ. ಪ್ರೀತಿಸಿ ಮದುವೆಯಾದವರ ಬಾಳು ಕಷ್ಟದಲ್ಲಿಯೂ ಸುಖಿಯಾಗಿಯೇ ಸಾಗುತ್ತಿದ್ದ ಸಮಯವಿದು. ಆದರೇ ಇದಕ್ಕೆ ಅಡ್ಡಗಾಲು ಹಾಕಿ ಇವರ ಮನೆಯಲ್ಲಿ ಸ್ಮಶಾನಮೌನ ನೆಲೆಸುವಂತೆ ಮಾಡಿದವನು ಬೇರ್ಯಾರು ಅಲ್ಲ, ಸ್ವತಃ ಆಕೆ ಮೈದುನ ಮತ್ತು ಪತ್ನಿ.
(ಕೊಲೆಯಾದ ಜ್ಯೋತಿ ಖಾರ್ವಿ)
(ಆರೋಪಿಗಳಾದ ಗುರುರಾಘವೇಂದ್ರ, ಆತನ ಪತ್ನಿ ದಿವ್ಯಾ)
ಹೌದು..ಕ್ಷುಲ್ಲಕ ಕಾರಣದ ನೆಪವೊಡ್ಡಿ ಜಗಳಿಕ್ಕಿಳಿದ ಮೈದುನನೋರ್ವ ತನ್ನ ಮಡದಿಯ ಜೊತೆಗೂಡಿ ಸ್ವತಃ ಅತ್ತಿಗೆಯ ಮೇಲೆ ಹಲ್ಲೆ ನಡೆಸಿ ಆಕೆಯ ಸಾವಿಗೆ ಕಾರಣನಾದ ಅಮಾನವೀಯ ಘಟನೆ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಉಪ್ಪಿನಕುದ್ರು ಕಳಿವಿನಬಾಗಿಲು ಎಂಬಲ್ಲಿ ನಡೆದಿದೆ.
ಜ್ಯೋತಿ ಖಾರ್ವಿ (26) ಮೈದುನ ಹಾಗೂ ಆಕೆ ಪತ್ನಿಯಿಂದ ಕೊಲೆಯಾದ ದುರ್ದೈವಿ ಮಹಿಳೆಯಾಗಿದ್ದು, ಗುರುರಾಘವೇಂದ್ರ (26) ಹಾಗೂ ಆತನ ಪತ್ನಿ ದಿವ್ಯಾ(19) ಬಂಧಿತ ಆರೋಪಿಗಳು.
ಘಟನೆ ವಿವರ: ತನ್ನ ಪತ್ನಿ ವಿಜಯ್ ಅವರ ಮನೆಯಿಂದ ಕೂಗಳತೆಯ ಸನಿಹವೇ ಇದ್ದ ತವರು ಮನೆಯಲ್ಲಿ ಭಾನುವಾರ ಮಧ್ಯಾಹ್ನದ ತನ್ನಿಬ್ಬರು ಸೋದರಿಯರು ಹಾಗೂ ಸಹೋದರನೊಂದಿಗೆ ಕುಳಿತು ಮಾತನಾಡುವ ವೇಳೆ ಪತ್ನಿ ಸಮೇತ ಬಂದ ಗುರು ರಾಘವೇಂದ್ರ ಏಕಾಏಕಿ ಜಗಳಕ್ಕೆ ಮುಂದಾಗಿದ್ದಾನೆ, ‘ನನ್ನ ಪತ್ನಿಯ ಬಗ್ಗೆ ನಿನ್ನ ಸಹೋದರಿಯರು ಕೀಳಾಗಿ ಮಾತನಾಡುತ್ತಿದ್ದಾರೆ, ಅವಳನ್ನು ಮದುವೆಯಾಗಲು ಬಿಡುವುದಿಲ್ಲ’ ಎಂದು ಕೂಗಾಡುತ್ತಾ ಇಡೀ ಕುಟುಂಬದ ಬಗ್ಗೆ ಹೀನಾಮಾನವಾಗಿ ನಿಂದಿಸಲು ಆರಂಭಿಸುತ್ತಾನೆ, ಇದರಿಂದ ಜ್ಯೋತಿ ಕುಟುಂಬ ಹಾಗೂ ಗುರು ಮತ್ತು ದಿವ್ಯಾ ನಡುವೆ ಮಾತಿನ ಸಂಘರ್ಷವೇ ನಡೆದುಬಿಡುತ್ತದೆ. ಕೊನೆಗೆ ಮಾತಿನ ಚಕಮಕಿ ವಿಕೋಪಕ್ಕೆ ತೆರಳಿ ದಿವ್ಯಾ ಜ್ಯೋತಿಗೆ ಹಿಗ್ಗಾಮುಗ್ಗ ಥಳಿಸಲು ಆರಂಭಿಸುತ್ತಾಳೆ, ಅಲ್ಲದೇ ಗುರುರಾಘವೇಂದ್ರನೂ ಕೂಡ ಜ್ಯೋತಿಯ ಕುತ್ತಿಗೆಯನ್ನು ಬಲವಾಗಿ ಅದುಮಿ ಕೊಲೆಗೆ ಯತ್ನಿಸುತ್ತಾನೆ. ಇದೇ ಸಂದರ್ಭ ಜ್ಯೋತಿ ಕುಟುಂಬಿಕರು ಹಾಗೂ ಸ್ಥಳೀಯರು ಈ ಹಲ್ಲೆಯನ್ನು ತಡೆದಿದ್ದು ಗುರುರಾಘವೇಂದ್ರ ದಂಪತಿ ಅಲ್ಲಿಂದ ತೆರಳುತ್ತಾರೆ. ಆದರೇ ಸಂಜೆ ವೇಳೆಗೆ ಹಲ್ಲೆಯಿಂದ ಸಂಪೂರ್ಣ ಅಸ್ವಸ್ಥರಾದ ಜ್ಯೋತಿ ಅವರನ್ನು ಕುಟುಂಬಿಕರು ಕುಂದಾಪುರ ಆಸ್ಪತ್ರೆಗೆ ಸಾಗಿಸಿ ಬಳಿಕ ವೈದ್ಯರ ಸಲಹೆ ಮೇರೆಗೆ ಮಣಿಪಾಲ ಕೆ.ಎಂ.ಸಿ.ಗೆ ದಾಖಲಿಸುತ್ತಾರೆ. ಅಲ್ಲಿ ಆಕೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯುತ್ತಾರೆ.
ನೋವಿನ ಮೇಲೆ ನೋವು:
ಜ್ಯೋತಿಯವರು ಮನೆ ಸನಿಹದ ವಿಜಯ್ ಎನ್ನುವವರನ್ನು ಕಳೆದ ಮೂರು ವರ್ಷಗಳ ಹಿಂದಷ್ಟೇ ಪ್ರೇಮ ವಿವಾಹವಾಗಿದ್ದರು. ಇದಕ್ಕೆ ವಿಜಯ್ ಮನೆಯಲ್ಲಿ ಕೊಂಚ ಮನಸ್ತಾಪವಿದ್ದರೂ ಇವರ ದಾಂಪತ್ಯ ಜೀವನ ಸುಖಕರವಾಗಿಯೇ ಸಾಗುತ್ತಿತ್ತು. ಕಳೆದ ವರ್ಷ ಇವರ ಮೂರು ತಿಂಗಳ ಪ್ರಾಯದ ಹೆಣ್ಣು ಮಗು ಅನಾರೋಗ್ಯದಿಂದ ಮರಣಹೊಂದಿದ್ದು ಇಬ್ಬರಿಗೂ ನುಂಗಲಾರದ ನೋವಾಗಿತ್ತು. ಇನ್ನು ವಿಜಯ್ ಬೋಟ್ ಕೆಲಸ ಮಾಡಿಕೊಂಡಿದ್ದರೇ ಜ್ಯೋತಿ ಗೃಹಿಣಿಯಾಗಿದ್ದರು. ಕಳೆದ ವರ್ಷ ಹೊಟ್ಟೆಯ ಶಸ್ತ್ರಚಿಕಿತ್ಸೆ ಮಾಡಿಸಿದ್ದು ಹಲ್ಲೆಯ ವೇಳೆ ಹೊಟ್ಟೆ ಭಾಗಕ್ಕೆ ಬಲವಾದ ಹೊಡೆತ ಬಿದ್ದ ಕಾರಣ ಜ್ಯೋತಿ ಸಾವನ್ನಪ್ಪಿದ್ದಾರೆಂದು ಆಕೆಯ ಕುಟುಂಬಿಕರು ರೋಧಿಸುತ್ತಿದ್ದಾರೆ. ಜ್ಯೋತಿ ಸಾವಿನಿಂದಾಗಿ ಸಂಪೂರ್ಣ ಕುಟುಂಬ ದುಃಖಸಾಗರದಲ್ಲಿ ಮುಳುಗಿದ್ದು, ಅವರ ತಾಯಿ ಚಂದು ಹಾಸಿಗೆ ಹಿಡಿದಿದ್ದಾರೆ.
ಮೈದುನನೇ ಯಮ ಆದಾಗ….
ಜ್ಯೋತಿಯ ಪತಿ ವಿಜಯ ಅವರ ತಮ್ಮನಾದ ಗುರುರಾಘವೇಂದ್ರ ವೃತ್ತಿಯಲ್ಲಿ ದೋಣಿ ಕೆಲಸ ಮಾಡಿಕೊಂಡಿರುವಾತ. ಹಲವು ಶೋಕಿಗಳನ್ನು ಹೊಂದಿದ್ದ ಈತ ಎರಡು ತಿಂಗಳ ಹಿಂದಷ್ಟೇ ಹೆಮ್ಮಾಡಿಯ ದಿವ್ಯಾ ಎನ್ನುವ ಹುಡುಗಿಯನ್ನು ಪ್ರೇಮಿಸಿ ವಿವಾಹವಾಗಿದ್ದ, ಇದಕ್ಕೂ ಮನೆಯಲ್ಲಿ ಅಪಸ್ವರ ಕೇಳಿಬಂದಾಗ ಮುನಿಸಿಕೊಂಡು ಹೆಂಡತಿಯೊಂದಿಗೆ ತೆರಳಿ ಗುಜ್ಜಾಡಿ ಎಂಬಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ. ಭಾನುವಾರ ಯಾವುದೋ ಕಾರಣಕ್ಕಾಗಿ ಗಂಗೊಳ್ಳಿಗೆ ಪತ್ನಿಯೊಂದಿಗೆ ಬಂದ ಆತ ಜ್ಯೋತಿಯ ಪಾಲಿಗೆ ಸಾಕ್ಷಾತ್ ಯಮನಾಗಿದ್ದ. ಇದಕ್ಕೆ ಆತನ ಹೆಂಡತಿಯೂ ಸಾಥ್ ನೀಡುವ ಮೂಲಕ ಕ್ರೌರ್ಯ ಮೆರೆದಿದ್ದಾಳೆ.
ಆರೋಪಿ ಪತಿ-ಪತ್ನಿ ಅರೆಸ್ಟ್
ಇತ್ತ ಮಣಿಪಾಲ ಆಸ್ಪತ್ರೆಯಲ್ಲಿ ಮನೆಮಗಳು ಜ್ಯೋತಿ ಸಾವನ್ನಪ್ಪುತ್ತಿದ್ದಂತೆ ಆಕ್ರೋಷಗೊಂಡ ಪೋಷಕರು ಹಾಗೂ ಜ್ಯೋತಿಯ ಪತಿ ಗಂಗೊಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರುತ್ತಾರೆ. ಜ್ಯೋತಿಯವರನ್ನು ಗುರುರಾಘವೇಂದ್ರ ಹಾಗೂ ಆತನ ಪತ್ನಿ ದಿವ್ಯಾ ಹಲ್ಲೆ ನಡೆಸಿ ಕೊಲೆ ಮಾಡಿರುವುದಾಗಿ ಕೇಸು ದಾಖಲಿಸುತ್ತಾರೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಗಂಗೊಳ್ಳಿ ಎಸ್.ಐ. ಸುಬ್ಬಣ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳಿಬ್ಬರನ್ನು ಠಾಣೆಗೆ ಎಳೆದೊಯ್ಯುತ್ತಾರೆ. ಸದ್ಯ ಇಬ್ಬರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ವರದಿ- ಯೋಗೀಶ್ ಕುಂಭಾಸಿ