
ಕುಂಬಳೆ: “ಮಕ್ಕಳೆಂದರೆ ಪ್ರಕೃತಿಯ ಕೊಡುಗೆ, ಅವರಲ್ಲಿ ಪುಟಿದೇಳುವ ಉತ್ಸಾಹ ಎಲ್ಲರಿಗೂ ಸ್ಫೂರ್ತಿಯನ್ನು ನೀಡುತ್ತದೆ. ಶ್ರೀರಾಮಚಂದ್ರಾಪುರ ಮಠದ ಶಾಲೆಗಳಲ್ಲಿ ಅಂತಹ ಉತ್ಸಾಹವನ್ನು ಬೆಳೆಸುವ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ವೇದ ಗಣಿತಕ್ಕೂ ಈ ವಿದ್ಯಾಸಂಸ್ಥೆಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಮಕ್ಕಳ ಕನಸುಗಳಿಗೆ ಈ ವಿದ್ಯಾಸಂಸ್ಥೆಗಳಲ್ಲಿ ರೂಪಕಲ್ಪನೆಯನ್ನು ನೀಡಲು ಪ್ರಯತ್ನಿಸಲಾಗುತ್ತಿದೆ. ಮಕ್ಕಳು ಬಾಣದಂತೆ, ಹೂಡುವವನಿಗೆ ಗುರಿಯನ್ನು ತಲಪಿಸುವ ಜವಾಬ್ದಾರಿಯೂ ಇದೆ ಎಂದು ಶ್ರೀರಾಮಚಂದ್ರಾಪುರ ಮಠದ ವಿದ್ಯಾ ವಿಭಾಗದ ಕಾರ್ಯದರ್ಶಿ ಡಾ|ಶಾರದಾ ಜಯಗೋವಿಂದ ಅಭಿಪ್ರಾಯಪಟ್ಟರು. ಅವರು ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ನಡೆದ ವರ್ಧಂತ್ಯುತ್ಸವದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯ ಸತ್ಯಶಂಕರ ಭಟ್ ಹಿಳ್ಳೆಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಅಭ್ಯಾಗತರಾಗಿ ಕುಂಬಳೆ ಗ್ರಾಮ ಪಂಚಾಯತು ಸದಸ್ಯ ಹರೀಶ ಗಟ್ಟಿ ಕೋಟೆಕ್ಕಾರ್, ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೆ.ಕೈಲಾಸಮೂರ್ತಿ, ಹೊಸದಿಗಂತ ಪತ್ರಿಕೆಯ ಮಂಗಳೂರು ಆವೃತ್ತಿಯ ಸ್ಥಾನೀಯ ಸಂಪಾದಕ ಪ್ರಕಾಶ್ ಇಳಂತಿಲ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶ್ರೀಮತಿ ಸಂಧ್ಯಾ.ವಿ.ಶೆಟ್ಟಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ, ಶಾಲಾ ಸಮಿತಿಯ ಕೆ.ವೆಂಕಟ್ರಮಣ ಭಟ್ ಸೂರಂಬೈಲು ಭಾಗವಹಿಸಿದರು. ಶಾಲಾ ಸಮಿತಿಯ ಜತೆಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಯನ ವರ್ಷದ ವರದಿಯನ್ನು ಪ್ರಮುಖ ಶಿಕ್ಷಕಿ ಚಿತ್ರಾ ಸರಸ್ವತಿ ಪೆರಡಾನ ವಾಚಿಸಿದರು.

ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾರ್ಥಿಗಳ `ಬೆಳಕು’ ಮತ್ತು `ಜ್ಞಾನದೀಪ್ತಿ’ ಹಸ್ತಪ್ರತಿಗಳನ್ನು ಬಿಡುಗಡೆಗೊಳಿಸಲಾಯಿತು. ಶಾಲಾ ವಿದ್ಯಾರ್ಥಿಗಳಾದ ಜಯಶ್ರೀ.ಎಂ.ಸಿ ಸ್ವಾಗತಿಸಿ, ಆಡಳಿತಾಧಿಕಾರಿ ಶ್ಯಾಮ ಭಟ್ ದರ್ಭೆ-ಮಾರ್ಗ ವಂದಿಸಿದರು. ವಿದ್ಯಾರ್ಥಿನಿ ಅನನ್ಯ ಕಾರ್ಯಕ್ರಮ ನಿರೂಪಿಸಿದರು.
ದೀಪ ಪ್ರಜ್ವಲನೆಯೊಂದಿಗೆ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಯಮಿಗಳಾದ ಹಸ್ಮುಖ್ ಪಟೇಲ್ ಮತ್ತು ಪ್ರಶಾಂತ ಪೈ ನೆರವೇರಿಸಿದರು. ನಂತರ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಜರಗಿತು