ಮಂಗಳೂರು, ಫೆ.10: ಕನ್ನಡ ಸಾಹಿತ್ಯ ಪರಿಷತ್ನ ರಾಜ್ಯಾಧ್ಯಕ್ಷರ ಚುನಾವಣೆಯಲ್ಲಿ ತಾನೂ ಓರ್ವ ಅಭ್ಯರ್ಥಿಯಾಗಿ ಸ್ಫರ್ಧಿಸುತ್ತಿದ್ದು, ತನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದರೆ ಪ್ರಾದೇಶಿಕ ಸಮಾನತೆ, ಸಾಮಾಜಿಕ ನ್ಯಾಯ, ಜಾತ್ಯಾತೀತ ನಿಲುವಿನೊಂದಿಗೆ ಕಾರ್ಯನಿರ್ವಹಿಸುವುದಾಗಿ ಡಾ. ಮನು ಬಳಿಗಾರ್ ಹೇಳಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತ್ಯ ಪರಿಷತ್ತಿಗೆ ಸಂಬಂಧಿಸಿ ಅನೇಕ ಕೆಲಸಕಾರ್ಯಗಳನ್ನು ಮಾಡುವ ಮೂಲಕ ಧ್ವನಿ ಎತ್ತಿದ್ದೇನೆ.43 ವರ್ಷಗಳ ಕಾಲ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಸಾಹಿತ್ಯ ಪರಿಷತ್ಗೆ ಎರಡು ಬಾರಿ ಆಡಳಿತಾಧಿಕಾರಿಯಾಗಿ, ರಾಷ್ಟ್ರೀಯ ಅಂತಾರಾಷ್ಟ್ರೀಯ ಸಮ್ಮೇಳನಗಳನ್ನು ಸಮರ್ಥವಾಗಿ ಸಂಘಟಿಸಿದ್ದೇನೆ. ವೈಯಕ್ತಿಕವಾಗಿ ವಿಮರ್ಶೆ, ಕವನಸಂಕಲನ, ಪ್ರಬಂಧ, ಅಂಕಣ ಸಹಿತ ಅನೇಕ ಬರವಣೆಗೆಯಲ್ಲಿ ತೊಡಗಿಕೊಂಡಿದ್ದೇನೆ. ಈ ಎಲ್ಲಾ ಅನುಭವದ ಅಧಾರದಲ್ಲಿ ಸಾಹಿತ್ಯ ಪರಿಷತ್ನ ಚುನಾವಣೆಯಲ್ಲಿ ತಾನೂ ಓರ್ವ ಅಭ್ಯರ್ಥಿಯಾಗಿ ಸ್ಫರ್ಧಿಸುತ್ತಿದ್ದೇನೆ ಎಂದರು.
ಸಾಹಿತ್ಯಪರಿಷತ ಅಧ್ಯಕ್ಷನಾದ ಬಳಿಕ ಗೌರವಧನ ಸ್ವೀಕರಿಸಲಾರೆ. ಕನ್ನಡದ ಕಾರ್ಯಕ್ರಮವಾಗಿ ತಾಲೂಕು ಮತ್ತು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಹೆಚ್ಚಿನ ಅನುದಾನ ಬರುವಂತೆ ಪ್ರಯತ್ನಿಸುವೆ. ಗ್ರಾಮೀಣ ಮಹಿಳೆಯರು ಮತ್ತು ಯುವಕರಿಗೆ ಹೆಚ್ಚಿನ ಆಧ್ಯತೆ ಹಾಗೂ ಐಟಿ ಯುವಕ ಯುವತಿಯರನ್ನು ಕನ್ನಡದೆಗೆಡೆ ಹೆಚ್ಚಿನ ಆಕರ್ಷಿತರಾಗಲು ಯೋಜನೆ ಮತ್ತು ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವ ಗುರಿ ಇಟ್ಟುಕೊಂಡಿದ್ದೇನೆ.
ತನ್ನ 30 ಕೃತಿಗಳ ಪೈಕಿ 27 ಈಗಾಗಲೇ ಪ್ರಕಟಗೊಂಡಿವೆ. ಅನೇಕ ಪುರಸ್ಕಾರ ಸಹಿತ ಸರ್ಕಾರಿ ಸೇವೆಯಲ್ಲಿದ್ದಾಗಲ್ಲೇ ಅತ್ಯುತ್ತಮ ಸೇವೆಗಾಗಿ ಬಂಗಾರ ಪದಕವನ್ನು ಪಡೆದಿದ್ದೇನೆ. ಹೀಗಾಗಿ ಕನ್ನಡಸೇವೆಗಾಗಿ ಅಪಾರ ಅನುಭವ ಹೊಸಚಿಂತನೆಗಳು ತನ್ನಲಿರುವುದಾಗಿ ಅವರು ಹೇಳಿದರು. ಪ್ರತಿಯೊಬ್ಬರು ಬೆಂಬಲ ಹಾಗೂ ಪ್ರೋತ್ಸಾಹ ನೀಡುವಂತೆ ಅವರು ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ರಾಜ್ಯಾಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ಉಪಸ್ಥಿತರಿದ್ದರು.