ಕುಂದಾಪುರ: ಉಡುಪಿಯ ಮಲ್ಪೆಯಿಂದ ಗೋವಾದತ್ತ ಅತೀ ವೇಗದಿಂದ ಸಾಗುತ್ತಿದ್ದ ಮೀನು ಸಾಗಾಟದ ಲಾರಿಯೊಂದು ಬೈಕಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟು ಲಾರಿಯ ಹಿಂಬದಿ ಚಕ್ರದಡಿಗೆ ಸಿಲುಕಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ಘಟನೆ ಕುಂದಾಪುರದ ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣದ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ಕೋಟೇಶ್ವರ ಹಳೆಅಳಿವೆ ಅರಾಲುಗುಡ್ಡೆ ನಿವಾಸಿ ಉತ್ತೇಶ್ ಅಲಿಯಾಸ್ ಉತ್ತಮೇಶ್ ಪೂಜಾರಿ (34) ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿ.
ಘಟನೆ ವಿವರ: ಮೂಲತಃ ಹಳೆಅಳಿವೆಯ ಅರಾಲುಗುಡ್ಡೆ ನಿವಾಸಿಯಾದ ಉತ್ತೇಶ್ ಪೂಜಾರಿ ಅವರು ಗಾರೆ ಕೆಲಸ ಮಾಡಿಕೊಂಡಿದ್ದು ರಜೆಯಿದ್ದ ಕಾರಣ ಇಂದು ಬೆಳಿಗ್ಗೆ ಮನೆಯಲ್ಲಿಯೇ ಇದ್ದು ಮಧ್ಯಾಹ್ನದ ಸುಮಾರಿಗೆ ತನ್ನ ಪತ್ನಿಯ ಮನೆಯಾದ ಹೆಮ್ಮಾಡಿಗೆ ತನ್ನ ಬೈಕಿನಲ್ಲಿ ಸಾಗುತ್ತಿದ್ದರು. ಕುಂದಾಪುರ ಸರಕಾರಿ ಬಸ್ಸು ನಿಲ್ದಾಣದ ಎದುರುಗಡೆ ಬರುತ್ತಿರುವಾಗ ಹಿಂದಿನಿಂದ ವೇಗವಾಗಿ ಬಂದ ಮೀನು ಲಾರಿ ಬೈಕಿಗೆ ಡಿಕ್ಕಿಯಾಗಿದೆ. ಈ ಪರಿಣಾಮ ಬೈಕ್ ಸವಾರ ಉತ್ತೇಶ್ ಅವರು ರಸ್ತೆಗೆ ಬಿದ್ದಿದ್ದು ಅವರ ತಲೆಯ ಮೇಲೆ ಲಾರಿ ಹಿಂಬದಿಯ ಟಯರ್ ಹತ್ತಿದ ಕಾರಣ ತೀವ್ರವಾಗಿ ಗಾಯಗೊಂಡ ಉತ್ತೇಶ್ ಸ್ಥಳದಲೇ ಸಾವನ್ನಪ್ಪಿದ್ದಾರೆ.
ಉತ್ತೇಶ್ ವಿವಾಹಿತರಾಗಿದ್ದು ಇಬ್ಬರು ಪುತ್ರಿಯರು, ತಾಯಿ, ಸಹೋದರಿ ಸೇರಿದಂತೆ ಕುಟುಂಬಿಕರನ್ನು ಅಗಲಿದ್ದಾರೆ. ಸಣ್ಣ ಮಕ್ಕಳನ್ನು ಅಗಲಿದ ಉತ್ತೇಶ್ ಕುಟುಂಬಿಕರ ರೋಧನವೂ ಮುಗಿಲುಮುಟ್ಟಿತ್ತು.
ಹೆಲ್ಮೇಟ್ ಧರಿಸಿದ್ದರು
ಉತ್ತೇಶ್ ಅವರು ಹೆಲ್ಮೇಟ್ ಧರಿಸಿದ್ದರೂ ಕೂಡ ಲಾರಿ ಟಯರ್ ಅವರ ತಲೆ ಮೇಲೆ ಹಾದುಹೋದ ಪರಿಣಾಮ ಹೆಲ್ಮೆಟ್ ಸಹಿತ ತಲೆಭಾಗ ಛಿದ್ರಗೊಂಡಿದ್ದು ಅಪಘಾತದ ಭೀಕರತೆ ಜನರನ್ನು ಬೆಚ್ಚಿಬೀಳಿಸಿತ್ತು. ರಸ್ತೆಯಲ್ಲಿಯೇ ಬೈಕ್ ಬಿದ್ದ ಪರಿಣಾಮ ಕೆಲ ಕಾಲ ಸಂಚಾರವೂ ಅಸ್ಥವ್ಯಸ್ಥಗೊಂಡಿತ್ತು.
ಲಾರಿ ಚಾಲಕ ಪರಾರಿ
ಅಪಘಾತ ನಡೆಯುತ್ತಿದ್ದಂತೆಯೇ ಲಾರಿ ಚಾಲಕ ಲಾರಿಯ ಡೋರ್ ಲಾಕ್ ಮಾಡಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಅಮಾನವೀಯತೆ ಮೆರೆದ ಲಾರಿ ಚಾಲಕನ ವಿರುದ್ಧ ಸ್ಥಳೀಯರು ಹಾಗೂ ಉತರೇ ವಾಹನ ಚಾಲಕರು ಆಕ್ರೀಷ ವ್ಯಕ್ತಪಡಿಸಿದರು. ಇದೇ ವೇಳೆ ತಾನೂ ಚಾಲಕನ ಸ್ನೇಹಿತ ತಾನೂ ಲಾರಿಯನ್ನು ಠಾಣೆಗೆ ಒಯ್ಯುತ್ತೇನೆಂದು ಆಗಮಿಸಿದ ವ್ಯಕ್ತಿಯೋರ್ವನನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.
ಮೀನು ಲಾರಿ ವೇಗಕ್ಕೆ ಕಡಿವಾಣ ಬೀಳಲಿ
ಕುಂದಾಪುರ ತಾಲೂಕಿನಾದ್ಯಂತ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೀನು ಸಾಗಾಟದ ಲಾರಿಗಳ ವೇಗ ಅತಿಯಾಗಿದ್ದು ಪಾದಾಚಾರಿಗಳು, ದ್ವಿಚಕ್ರ ವಾಹನ ಸವಾರರು ಸೇರಿದಂತೆ ಇತರೇ ವಾಹನದವರು ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಅನಿವಾರ್ಯತೆಯಿದೆ. ಇನ್ನೊಂದೆಡೆ ಲಾರಿಯಿಂದ ಹೊರಬಿಡುವ ಮೀನಿನ ನೀರು ಅಸಹ್ಯ ವಾಸನೆಯಿಂದ ಕೂಡಿರುವುದಲ್ಲದೇ ದ್ವಿಚಕ್ರ ವಾಹನ ಸವಾರರಿಗೂ ಕಂಟಕವನ್ನುಂಟುಮಾಡುತ್ತದೆ. ಪೊಲಿಸರು ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ಇಂತಹ ಲಾರಿ ಚಾಲಕರು ಮತ್ತು ಮಾಲಕರ ವಿರುದ್ಧವೂ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದರು.
ಕುಂದಾಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಿ- ಯೋಗೀಶ್ ಕುಂಭಾಸಿ