ಕಾಸರಗೋಡು, ಜ.5: ಬಿಸಿಲಿನ ಪ್ರಖರತೆಯಿಂದಾಗಿ ಜಿಲ್ಲೆಯ ಹಲವೆಡೆಗಳಲ್ಲಿ ಅಗ್ನಿ ಅನಾಹುತ ಪ್ರಕರಣಗಳು ಹೆಚ್ಚುತ್ತಿದ್ದು, ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ.
ಒಂದೇ ದಿನದಲ್ಲಿ ಇಲ್ಲಿನ ಮಂಜೇಶ್ವರ, ಉಪ್ಪಳ, ಕುಂಬಳೆ ಪರಿಸರಗಳಲ್ಲಿ ಹತ್ತಕ್ಕೂ ಅಧಿಕ ಅಗ್ನಿ ಅನಾಹುತಗಳು ಸಂಭವಿಸಿದ್ದು, ಅಗ್ನಿಶಾಮಕ ದಳದ ನಿರಂತರ ಪರಿಶ್ರಮದಿಂದಾಗಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಲಾಗಿದೆ.
ಕುಂಬಳೆ ಪೆರುವಾಡ್ ರಸ್ತೆ ಬದಿ, ಕಡಂಬಾರಿನ ಹದಿನೈದು ಎಕರೆ ರಬ್ಬರ್ ತೋಟ, ಮಂಜೇಶ್ವರ ಗೋವಿಂದ ಪೈ ಸರಕಾರಿ ಕಾಲೇಜು ಸಮೀಪದ ಮರಮಿಲ್ಲಿನ ಬಳಿ ರಾಶಿ ಹಾಕಲಾಗಿದ್ದ ಮರಮಟ್ಟುಗಳು, ಮಂಜೇಶ್ವರ ಯು.ಪಿ ಶಾಲಾ ಸಮೀಪ ಮೂರು ಎಕರೆ ಸ್ಥಳ, ಪೈವಳಿಕೆ ಲಾಲ್ಬಾಗ್ನಲ್ಲಿ ಒಂದು ಎಕರೆ ಪ್ರದೇಶ, ಬಂದ್ಯೋಡು ಅಡ್ಕ ಎಂಬಲ್ಲಿನ ಎರಡು ಎಕರೆಯಷ್ಟು ಕೃಷಿ ಭೂಮಿಗಳಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಇದರಿಂದಾಗಿ ಲಕ್ಷಾಂತರ ರೂ.ಗಳ ಹಾನಿ ಸಂಭವಿಸಿದೆ.
ಉಪ್ಪಳ, ಕಾಸರಗೋಡಿನ ಅಗ್ನಿಶಾಮಕ ಸಿಬ್ಬಂದಿಗಳನ್ನು ಸಜ್ಜಾಗಿಡಲಾಗಿದ್ದು, ಮುನ್ನೆಚ್ಚರಿಕೆ ವಹಿಸಲಾಗಿದೆ. ಬಿಸಿಲಿನ ತೀವ್ರತೆಯಿಂದಾಗಿ ಒಣಗಿರುವ ಹುಲ್ಲುಗಳಿಗೆ ದಿಢೀರನೆ ಬೆಂಕಿ ಹತ್ತಿಕೊಳ್ಳುತ್ತಿರುವುದೇ ಈ ಅವಘಡಗಳಿಗೆ ಕಾರಣವಾಗಿದೆ.