ಮಂಗಳೂರು,ಜ.05 : ಧರ್ಮಗಳ ನಡುವಿನ ಕಂದಕವನ್ನು ಕಡಿಮೆ ಮಾಡಿ ಎಲ್ಲಾ ಜಾತಿ, ಧರ್ಮದವರು ಕೂಡಿ ಬಾಳುವ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಮಾಜದ ಸದೃಢತೆಯ ಪ್ರತೀಕವಾಗಿರುವ ಯುವ ಬ್ರಿಗೇಡ್ ನ ಸದ್ಭಾವನೆಯ ಮತ್ತೊಂದು ಹೆಜ್ಜೆಯೇ ಈ ವಸುದೈವ ಕುಟುಂಬಕಂ ನ ತತ್ವಸಾರ ಎಂದು ಮುಸ್ಲಿಂ ರಾಷ್ಟ್ರೀಯ ಮಂಚ್ ನ ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿರುವ ಫೈಜ್ ಖಾನ್ ಅವರು ಹೇಳಿದರು.
ಅವರು ನಗರದ ಟಿವಿ ರಮಣ್ ಪೈ ಸಭಾಂಗಣದಲ್ಲಿ ನಡೆದ ಯುವ ಬ್ರಿಗೇಡ್ ನೇತೃತ್ವದಲ್ಲಿ ನಡೆದ “ವಸುದೈವ ಕುಟುಂಬಕಂ” ಎಲ್ಲರೂ ಕೂಡಿ ಬಾಳೋಣ ಎಂಬ ಕಾರ್ಯಗಾರದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದರು.
ನಾವು ಹಾಗೂ ನಮ್ಮ ಧರ್ಮ ಮಾತ್ರ ಶ್ರೇಷ್ಠ. ಉಳಿದ ಧರ್ಮಗಳು ಅನಿಷ್ಠ ಎಂದು ಹೇಳಿದರೆ ವಸುದೈವ ಕುಟುಂಬಕಂನ ಹೆಸರಿನಲ್ಲಿ ಕೂಡಿ ಬಾಳಲು ಸಾಧ್ಯವಿಲ್ಲ. ಧರ್ಮಗಳಲ್ಲಿ ಉಲ್ಲೇಖ ಮಾಡಿರುವ ವಿಚಾರಗಳನ್ನು ಹೇಳಿದರೆ ಅದು ಜ್ಞಾನವಲ್ಲ. ಭಗವದ್ಗೀತೆ, ಬೈಬಲ್, ಕುರ್ ಆನ್ನಲ್ಲಿರುವ ವಿಚಾರಗಳನ್ನು ಜನರನ್ನು ಒಗ್ಗೂಡಿಸಲು, ಬಾಂಧವ್ಯ ಬೆಳೆಸಲು ಬಳಸುವುದೇ ನಿಜವಾದ ಜ್ಞಾನ ಎಂದು ಫೈಜ್ ಖಾನ್ ಹೇಳಿದರು.
ಕಾರ್ಯಕ್ರಮದಲ್ಲಿ ಹೈಡ್ರೋಸ್ ಹಾಜಿ ಮೆಮರೆಬಲ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಚೇರ್ ಮೆನ್ ಜನಾಬ್ ಹಾಜಿ ಬಿ ಅಬ್ದುಲ್ ರಜಾಕ್, ಪ್ರಗತಿಪರ ಕೃಷಿಕರಾಗಿರುವ ಮೊಹಮ್ಮದ್ ಮುಸ್ತಫಾ ಗೋಳ್ತಮಜಲು ಹಾಗೂ ಯುವ ಬ್ರಿಗೇಡ್ ನ ಮಾರ್ಗದರ್ಶಕರಾಗಿರುವ ಚಕ್ರವರ್ತಿ ಸೂಲಿಬಲೆ, ರಾಜ್ಯ ಸಂಚಾಲಕ ನಿತ್ಯಾನಂದ , ಯುವ ಬ್ರಿಗೇಡ್ ನ ಮಾರ್ಗದರ್ಶಕ ಮಂಗಲ್ಪಾಡಿ ನರೇಶ್ ಶೆಣೈ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗಿರೀಶ್ ಹೊಳ್ಳ ಸ್ವಾಗತಿಸಿ, ವಿಕ್ರಮ್ ನಾಯಕ್ ನಿರೂಪಿಸಿದರು.