
ಮ೦ಗಳೂರು ಡಿ.24: ಕೆಎಸ್ಆರ್ಟಿಸಿ ಸಂಸ್ಥೆಯು ವಿಕಲಚೇತನರ ಪ್ರಯಾಣಿಕರಿಗೆ ತಮ್ಮ ವಾಸಸ್ಥಳದಿಂದ 100 ಕಿ.ಮೀ ವ್ಯಾಪ್ತಿಯಲ್ಲಿ ಪ್ರಯಾಣಿಸಲು ರಿಯಾಯಿತಿ ದರದಲ್ಲಿ ಬಸ್ಸು ಪಾಸುಗಳನ್ನು ವಿತರಿಸಿರುತ್ತದೆ. 2015 ನೇ ಸಾಲಿನಲ್ಲಿ ವಿತರಿಸಿರುವ ರಿಯಾಯಿತಿ ಬಸ್ಸು ಪಾಸುಗಳ ಅವಧಿಯು ಡಿ. 31 ಕ್ಕೆ ಮುಕ್ತಾಯಗೊಳ್ಳಲಿದ್ದು, 2015 ನೇ ಸಾಲಿಗಾಗಿ ಈ ಬಸ್ಸು ಪಾಸುಗಳನ್ನು ಜನವರಿ1, 2016 ರಿಂದ ನವೀಕರಿಸಲು ಕ್ರಮಕೈಗೊಳ್ಳಲಾಗುವುದು ಹಾಗೂ ಹೊಸ ಪಾಸುಗಳನ್ನು ನೀಡಲಾಗುವುದು.
ವಿಕಲಚೇತನರ ರಿಯಾಯಿತಿ ಬಸ್ಸು ಪಾಸುಗಳನ್ನು ಫಲಾನುಭವಿಗಳು ಬಂದು ನವೀಕರಿಸಿಕೊಳ್ಳಲು ಅನುಕೂಲವಾಗುವಂತೆ ಸಾಕಷ್ಟು ಕಾಲಮಿತಿ ನೀಡುವ ಉದ್ದೇಶದಿಂದ 2015 ನೇ ಸಾಲಿನಲ್ಲಿ ವಿತರಿಸಿದ ಪಾಸುಗಳನ್ನು ಫೆಬ್ರವರಿ 28ರವರೆಗೆ ವಿಸ್ತರಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು (ಮೂಡಬಿದ್ರೆ ಸೇರಿದಂತೆ) ಹಾಗೂ ಉಡುಪಿ ಜಿಲ್ಲೆಯ ಉಡುಪಿ, ಕಾರ್ಕಳ ತಾಲೂಕು ಹಾಗೂ ಕುಂದಾಪುರ ತಾಲೂಕಿನ ವಿಕಲಚೇತನರು, ವಿಕಲಚೇತನರ ರಿಯಾಯಿತಿ ದರದ ಹೊಸ ಪಾಸು ಮತ್ತು ನವೀಕರಣದ ಪಾಸನ್ನು ಪಡೆದುಕೊಳ್ಳಲು ಈ ವಿಭಾಗಕ್ಕೆ ಬಂದು ಅರ್ಜಿ ಪಡೆದುಕೊಂಡು ಅರ್ಜಿ ಸಲ್ಲಿಸುವುದು.
ಹೊಸ/ ನವೀಕರಣದ ವಿಕಲಚೇತನರ ಬಸ್ಸು ಪಾಸು ಪಡೆದುಕೊಳ್ಳುವವರು ಅರ್ಜಿಯೊಂದಿಗೆ ನಗದು ರೂಪದಲ್ಲಿ ರೂ.660 ನ್ನು ಸಲ್ಲಿಸುವುದು. ಹಾಗೂ ಅರ್ಜಿಯೊಂದಿಗೆ 3 ಪಾಸ್ಪೋರ್ಟ್ ಸೈಜಿನ ಫೊಟೋಗಳನ್ನು ಸಲ್ಲಿಸುವುದು. ವಿಕಲಚೇತನರು ಸರಕಾರಿ ನೌಕರಿಯಲ್ಲಿದ್ದ ಪಕ್ಷದಲ್ಲಿ ಮೇಲ್ಕಂಡ ರಿಯಾಯಿತಿದರದ ಬಸ್ಸು ಪಾಸನ್ನು ಪಡೆದುಕೊಳ್ಳಲು ಅರ್ಹರಾಗಿರುವುದಿಲ್ಲ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ, ಕರಾರಸಾಸಂ, ಮಂಗಳೂರು ಪ್ರಕಟಣೆ ತಿಳಿಸಿದೆ.