ಕುಂದಾಪುರ: ಬೈಕ್ ಹಾಗೂ ಟ್ಯಾಂಕರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಸಂಜೆ ಬೈಂದೂರು ಸಮೀಪದ ಖಂಬದಕೋಣೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಬಿಜೂರು ನಿವಾಸಿ ಪ್ರಭಾಕರ ದೇವಾಡಿಗ ( 26 ) ಮೃತ ಬೈಕ್ ಸವಾರ ಎಂದು ಗುರುತಿಸಲಾಗಿದೆ.
ಖಂಬದಕೋಣೆ ಗ್ಯಾರೇಜ್ ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಪ್ರಭಾಕರ್ ಅವರು ನಾಗೂರುನಿಂದ ಬಿಜೂರಿನತ್ತ ತೆರಳುತ್ತಿದ್ದ ವೇಳೆ ಕುಂದಾಪುರದಿಂದ ಭಟ್ಕಳ ಕಡೆಗೆ ಹೋಗುತ್ತಿದ್ದ ಟ್ಯಾಂಕರ್ ಹಾಗೂ ಪ್ರಭಾಕರ್ ಅವರ ಬೈಕ್ ಗೆ ಮುಖಾಮುಖಿ ಡಿಕ್ಕಿಯಾಗಿ ರಸ್ತೆಗೆಸೆಯಲ್ಪಟ್ಟ ಪ್ರಭಾಕರ್ ತಲೆಗೆ ಗಂಭೀರ ಗಾಯವಾಗಿದ್ದು ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ.
ವಿದ್ಯಾಭ್ಯಾಸದ ಬಳಿಕ ಮೆಕ್ಯಾನಿಕ್ ಕೆಲಸ ಕಲಿತ ಪ್ರಭಾಕರ್ ಶೋ ರೂಂ ಒಂದರಲ್ಲಿ ಪಿಟ್ಟರ್ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡಿ ಸಂಸಾರವನ್ನು ನಿರ್ವಹಿಸುತ್ತಿದ್ದರು. ಅವರ ಕುಟುಂಬ ಪ್ರಭಾಕರ್ ದೇವಾಡಿಗ ಸಾವಿನಿಂದ ಕಂಗಾಲಾಗಿದೆ.
ಬೈಂದೂರು ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದೆ.