ಉಡುಪಿ: ಚೆಕ್ ಅಮಾನ್ಯತೆಯ ಪ್ರಕರಣದಲ್ಲಿ ಆರೋಪಿಯಾಗಿದ್ದ ಕಾರ್ಕಳ ತಾಲೂಕಿನ ನಿಟ್ಟೆಯ ನಿವಾಸಿ ಲಲಿತಾ ದೇವಾಡಿಗ ದೋಷಮುಕ್ತಿಗೊಂಡಿದ್ದಾರೆ.
ಆರೋಪಿಯು ಜೋಡುರಸ್ತೆಯ ನಿವಾಸಿ ಕುಮಾರ ಅವರಿಗೆ ನೀಡಿದ 7 ಲಕ್ಷ ರೂ ಉಡುಪಿಯ ಎಚ್ಡಿಎಫ್ಸಿ ಬ್ಯಾಂಕಿನ ಚೆಕ್ ಅಮಾನ್ಯಗೊಂಡಿತ್ತು. ಆರೋಪಿಯು ಆಕೆಗೆ ಆವಶ್ಯಕತೆಯ ಬಗ್ಗೆ ಸಾಲ ಪಡೆದಿದ್ದು, ಅದರ ಮರುಪಾವತಿ ಬಗ್ಗೆ ಚೆಕ್ನ್ನು ನೀಡಿದ್ದೆಂದು ದೂರುದಾರರು ಆರೋಪಿಸಿದ್ದರು.
ಆರೋಪಿಯು ತಾನು ಮನೆವಾರ್ತೆ ನೋಡಿಕೊಳ್ಳುವ ಗೃಹಿಣಿ ಹಾಗೂ 71 ವರ್ಷ ಪ್ರಾಯದ ವೃದ್ಧೆಯಾಗಿದ್ದು ತನಗೆ 7 ಲಕ್ಷ ರೂಪಾಯಿಯ ಆವಶ್ಯಕತೆ ಇರಲಿಲ್ಲವೆಂದೂ ಮಾತ್ರವಲ್ಲದೆ ರೂ. 7 ಲಕ್ಷ ನೀಡುವ ಆರ್ಥಿಕ ಸಾಮರ್ಥ್ಯ ದೂರುದಾರರಿಗೆ ಇಲ್ಲವೆಂದೂ ಸಾಧಿಸಿದ್ದರು. ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ದೂರುದಾರರು ಹಣವನ್ನು ತಾನು ಫೈನಾನ್ಸ್ನಿಂದ ಸಾಲ ಪಡೆದು ಅದನ್ನು ಆರೋಪಿಗೆ ನೀಡಿದ್ದಾಗಿ ತಿಳಿಸಿದ್ದರು. ಯೋಗ್ಯವಾದ ದಾಖಲಾತಿಯನ್ನು ಹಾಜರು ಮಾಡಲು ಫಿರ್ಯಾದಿ(ದೂರುದಾರರು) ವಿಫಲರಾಗಿದ್ದರು.
ಈ ಹಿನ್ನೆಲೆಯಲ್ಲಿ ಆರೋಪಿಗೆ ಸಾಲ ನೀಡಿದ ಬಗ್ಗೆ ಹಾಗೂ 7 ಲಕ್ಷ ರೂ.ಗೆ ಚೆಕ್ ನೀಡಿದ ಬಗ್ಗೆ ಸಾಕಷ್ಟು ಪುರಾವೆಗಳಿಲ್ಲವೆಂದು ಕಾರ್ಕಳದ ಪ್ರಥಮ ದರ್ಜೆ ನ್ಯಾಯಿಕಾ ದಂಡಾಧಿಕಾರಿ ಪೂರ್ಣಿಮಾ ಎನ್. ಪೈ ಆರೋಪಿ ಯನ್ನು ದೋಷಮುಕ್ತಿಗೊಳಿಸಿ ತೀರ್ಪಿತ್ತಿದ್ದಾರೆ.
ಆರೋಪಿ ಲಲಿತಾ ದೇವಾಡಿಗರ ಪರವಾಗಿ ಕುಂದಾಪುರದ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ವಾದಿಸಿದ್ದರು.