ಮಂಗಳೂರು/ ಬಜಪೆ,ಡಿ.12: ಮಂಗಳೂರಿನ ಹಲವು ಕಡೆ ದರೋಡೆ ಮತ್ತು ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಸರಗಳ್ಳರನ್ನು ಬಜಪೆ ಪೊಲೀಸರು ಪಂಪ್ ವೆಲ್ ಬಳಿ ಬಂಧಿಸಿದ್ದಾರೆ.
ಬಂಧಿತರನ್ನು ಮಂಗಳೂರು ಪ್ರಸ್ತುತ ಕೊಡಿಯಾಲ್ ಬೈಲ್ ನಿವಾಸಿ, ಸುಲ್ತಾನ್ ಬತ್ತೇರಿ ವ್ಯಾಯಾಮ ಶಾಲೆ ಹತ್ತಿರದ ಬಾಲಸುಬ್ರಮಣ್ಯ ಅಲಿಯಾಸ್ ಬಾಚು (36), ಆತನ ಬಾವ ತೊಕೊಟ್ಟು ಪಾರ್ವತಿ ನಿಲಯದ ನಿವಾಸಿ ಉಮೇಶ್ (48) ಮತ್ತು ತೊಕ್ಕೊಟ್ಟು ಕಲ್ಲಾಪು ಆಡಂ ಕುದ್ರು ಈಗಿನ ವಾಸ ಮೂಡಬಿದಿರೆ ಅಳಿಯೂರಿನ ಮಣಿಕಂಠ (32) ಎಂದು ಗುರುತಿಸಲಾಗಿದೆ.
ಆರೋಪಿಗಳು 5 ಸರಗಳ್ಳತನ, ಒಂದು ಕಿಡ್ನಾಪ್ ಮತ್ತು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಅವರಿಂದ 9 ಪವನ್ ಚಿನ್ನ, 1 ಆ್ಯಕ್ಟಿವಾ ಹೋಂಡಾ, 1 ಮ್ಯಾಕ್ಸಿಮೊ ಟೆಂಪೋ ವಶ ಪಡಿಸಿಕೊಂಡಿದ್ದು, ಇವುಗಳ ಅಂದಾಜು ಮೊತ್ತ ಒಟ್ಟು 6.50 ಲಕ್ಷ ರೂಪಾಯಿ ಎಂದು ಹೇಳಲಾಗಿದೆ. ಗುರುಪುರ, ಎಡಪದವು, ಕಿನ್ನಿಗೋಳಿ, ಬಂಟ್ವಾಳದ ಚೇಲೂರುಗಳಲ್ಲಿ ಸರಗಳ್ಳತನ, ಮಂಗಳೂರು ಬಂದರು ಬೀಬಿ ಅಲಾಬಿ ರಸ್ತೆಯಲ್ಲಿ ಆ್ಯಕ್ಟಿವಾ ಹೋಂಡಾ ಕಳವು, ಕದ್ರಿ ಬಾರೆಬೈಲಿನಿಂದ ಮುದುಕಿಯ ಅಪಹರಣ ಮಾಡಿ ದರೋಡೆ ಪ್ರಕರಣ ಒಟ್ಟು 6 ಪ್ರಕರಣದಲ್ಲಿ ಇವರು ಭಾಗಿಯಾಗಿದ್ದಾರೆ. ಕದ್ದ ಕೆಂಪು ಆ್ಯಕ್ಟಿವಾ ಹೊಂಡ ಬಳಸಿ ಇವರು ಸರಗಳ್ಳತನ ಮಾಡಿದ್ದಾರೆ. ಕದ್ರಿ ಬಾರೆ ಬೈಲಿನಿಂದ ಅಪಹರಣ ಮಾಡಿ ಎಸ್ಇಝಡ್ನ ಸಮೀಪ ವೃದ್ಧೆಯ ಸರವನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು.
ಪಣಂಬೂರು ಎಸಿಪಿ ಮದನ್ ಗಾಂವ್ಕರ್ ನಿರ್ದೇಶನದಂತೆ ಬಜಪೆ ಪೊಲೀಸ್ ಇನ್ಸ್ಪೆಕ್ಟರ್ ಟಿ.ಡಿ. ನಾಗರಾಜ, ಎಸ್ಐ ರಮೇಶ್ ಹನಪುರ, ಎಸ್ಐ ಸುಕುಮಾರ್ ಸಿಬಂದಿ ಚಂದ್ರಶೇಖರ್, ಪ್ರಕಾಶ್ ಮೂರ್ತಿ, ರಾಮಚಂದ್ರ, ಜಯಾನಂದ, ಚಂದ್ರಮೋಹನ, ರಾಮಚಂದ್ರ, ಭರತ್, ಶಶಿಧರ್, ದೇವಪ್ಪ ಅವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.